ಗುರುವಾರ, ಜೂನ್ 16, 2011

ಅಬುಧಾಬಿಯಲ್ಲಿ ಒಂದು ವರ್ಷ


                 ಅರಬ್ ಸಂಯುಕ್ತ ಸಂಸ್ತಾನದ(ಯುಎಇ)  ರಾಜಧಾನಿ  ಅಬುಧಾಬಿಯಲ್ಲಿ ಒಂದು ವರ್ಷ ಕಳೆದು ಮರಳಿ ಮಸ್ಕತ್ತಿಗೆ ಹೊರಟಿರುವ ಈ ಸಂದರ್ಭದಲ್ಲಿ ಅಬುಧಾಬಿಯ ನನ್ನ ಅನುಭವಗಳನ್ನು ದಾಕಲಿಸೋಣ ಎನಿಸಿತು. ಕಳೆದ ವರ್ಷ ನನ್ನ ಪತಿ ಶಶಿಯನ್ನು ಒಂದು ಕೆಲಸದ ಮೇರೆ ಅವನ ಕಂಪೆನಿಯವರು ಇಲ್ಲಿಗೆ ಕಳುಹಿಸಿದಾಗ ನಾನೂ, ಮಗಳು ಪ್ರೀತಿಯೂ ಹೊರಟೆವು. ಆವಾಗ ತಿಳಿಯಿತು ಇಲ್ಲಿನ ಭಾರತಿಯ ಶಾಲೆಗಳಲ್ಲಿ ಪ್ರವೇಶ ಸಿಗುವುದು ಒಂದು ಯಜ್ಞವೆಂದು.  ಮಸ್ಕತ್ತಿನ ಕನ್ನಡ ಸಂಘದ ಅಧ್ಯಕ್ಷರ ಸಹಾಯದಿಂದ ಪ್ರವೇಶ ಪಡೆದು, ನಾವೆಲ್ಲರೂ ಇಲ್ಲಿಗೆ ಬಂದೆವು. ಕೇವಲ ನಲವತ್ತು ವರ್ಷಗಳ ಹಿಂದೆ ಮರುಭೂಮಿಯಾಗಿದ್ದ  ಈ ದೇಶ  ಇಷ್ಟು ಸ್ವಲ್ಪ ಸಮಯದಲ್ಲಿ  ಸಾಧಿಸಿದ ಪ್ರಗತಿಯನ್ನು ಇಲ್ಲಿ ಇದ್ದೆ ಅನುಭವಿಸಿ ನೋಡಬೇಕು.


ಕಾಂಕ್ರಿಟ್ ಕಾಡಿನ ಮದ್ಯ 
ಅಬುಧಾಬಿ ಒಂದು ಗಗನ ಚುಂಬಿ ಕಟ್ಟಡಗಳ ಕಾಂಕ್ರಿಟ್ ಕಾಡು.ಇಲ್ಲಿ ಬಂದು ವಾಸಿಸಲು ಶುರುಮಾಡಿದಾಗಲೇ ತಿಳಿದಿದ್ದು ಇಲ್ಲಿನ ಕಷ್ಟಗಳು. ಇಲ್ಲಿ ವಾಹನ ನಿಲುಗಡೆಗೆ ಜಾಗವೇ ಇಲ್ಲ . ಒಂದರ ಪಕ್ಕ ಒಂದು ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತ ಬಂದಿರುವ  ಈ ನಗರದಲ್ಲಿ ವಾಹನ ನಿಲುಗಡೆಗಾಗಿ ಹೋರಾಡಬೇಕು. ಕಿಟಕಿಯಿಂದ ಹೊರಗೆ ನೋಡಿದರೆ ಕಾಣುವುದು ಕಾರುಗಳ ಹೊಳೆ. ರಸ್ತೆಗಳ ಇಕ್ಕೆಲಗಳಲ್ಲಿ ಅಲ್ಲದೆ  ನಡುವೆಯೂ ಒಂದು ಸಾಲು ಕಾರುಗು ನಿಲುಗಡೆಯಾಗಿರುತ್ತವೆ. ಮಾನವ ನಾಗರಿಕತೆಯ ಕೊಡುಗೆಯಾದ ನಗರವನ್ನು  ಸರಿಯಾಗಿ ಯೋಜಿಸದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಅಬುಧಾಬಿಯ ಪಾರ್ಕಿಂಗ್ ಪರದಾಟ ಒಂದು ನಿದರ್ಶನ. ಈಗ ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿನ ನಗರಾಡಳಿತ ಹಲವು ವಿದಗಳಿಂದ ಪ್ರಯತ್ನಿಸುತ್ತಿದೆ, ಆದರೆ  ಕಾಲ   ಮಿಂಚಿದೆ!  ಗಗನಚುಂಬಿ ಕಟ್ಟಡಗಳಿಂದಾಗಿ ಚಿಕ್ಕ ಪ್ರದೇಶದಲ್ಲಿ  ಜನ ನಿಬಿಡತೆ ಜಾಸ್ತಿ. ಆದ್ದರಿಂದ ಇಲ್ಲಿನ ಗಲ್ಲಿಗಲ್ಲಿಗಳಲ್ಲಿ ಕಾಣುವುದು ಸಾಲು ಕಸದ ತೊಟ್ಟಿಗಳು ಮತ್ತು ಹೇಗಂದರೆ ಹಾಗೆ  ನಿಲ್ಲಿಸಿದ ಕಾರುಗಳು!! ಇಲ್ಲಿ ಆಕಾಶವನ್ನು ಸರಿಯಾಗಿ ನೋಡಲು  ಕಷ್ಟಪಡಬೇಕು.




 ಅಬುಧಾಬಿಯಲ್ಲಿ ದಾಕಲಿಸಬಹುದಾದ ಹಲವು ಒಳ್ಳೆಯ ವಿಚಾರಗಳು ಇವೆ. ಇಲ್ಲಿನ ಸುಮಾರು ಹತ್ತು ಕಿ.ಮಿ. ಉದ್ದದ ಕಾರ್ನಿಶ್ ( ಅರೇಬಿಕ್ ನಲ್ಲಿ ಸಮುದ್ರತೀರದ ಪಕ್ಕದ ದಾರಿ)  ನಿಜವಾಗಿಯೂ ನೋಡಬೇಕಾದ ಸ್ಥಳ. ಅಷ್ಟುದ್ದದ ಜಾಗಕ್ಕೂ ನಡೆಯುವ ಮಾರ್ಗ, ಸೈಕಲ್  ಮಾಡಲು ದಾರಿ, ಮಾರ್ಗದುದ್ದಕ್ಕೂ ಸುಂದರವಾಗಿ ಬೆಳಿಸಿ ಆರೈಕೆ ಮಾಡುತ್ತಿರುವ ಗಿಡಗಳು; ಇದು ಮರುಭೂಮಿ ಎನ್ನುವುದನ್ನೇ ಮರೆಸುತ್ತದೆ. ಇಲ್ಲಿನ ರಸ್ತೆಗಳು ಬಹಳ ಸುಸ್ತಿತಿಯಲ್ಲಿವೆ.  ಬಿಳಿಯ ಅಮ್ರತಶಿಲೆಯಲ್ಲಿ ನಿರ್ಮಾಣಗೊಂಡ  ಶೇಖ್ ಜ್ಹಾಯೇದ್ ಮಸೀದಿ ಇಲ್ಲಿನ ಇನ್ನೊದು ಆಕರ್ಷಣೆ. ಅಬುಧಾಬಿಯ ಇನ್ನೊಂದು ಸಾಧನೆಯೆಂದರೆ ಸಮುದ್ರವನ್ನು ಒತ್ತ್ತುವರಿ ಮಾಡಿ ಇವರು ಅಭಿವೃದ್ದಿಪಡಿಸಿರುವ ದ್ವೀಪಗಳು. ಇವು ಮಾನವನ ಅದಮ್ಯ ಸಾಮರ್ಥ್ಯಕ್ಕೆ ಸಂಕೆತಗಳಂತೆ ಕಾಣುತ್ತವೆ.


ಶೇಖ್ ಜ್ಹಾಯೇದ್  ಮಸೀದಿ
















ಅಬುಧಾಬಿ ಕನ್ನಡಿಗರೊಂದಿಗೆ : 

           ಪಾಕಿಸ್ತಾನ, ಪಿಲಿಪೈನ್ಸ್, ಲೆಬನೋನ್, ಈಜಿಪ್ಟ್  ಮತ್ತು ಇತರ ಅರಬ್ ದೇಶದ ಜನತೆಯೇ ಹೆಚ್ಚಾಗಿ ಕಾಣುವ ಈ ನಗರದಲ್ಲಿ ಭಾರತೀಯರು ಬಹಳ ಸಂಕ್ಯೆಯಲ್ಲಿ ಇದ್ದಾರೆ. ಭಾರತಿಯ ಸಮುದಾಯದಲ್ಲಿ ಕೇರಳದ ಜನತೆಗೆ ಮೊದಲ ಸ್ಥಾನ.
ಅವರು ಎಷ್ಟರ ಮಟ್ಟಿಗೆ ಇದ್ದಾರೆಂದರೆ ಹಲವು ಅಂಗಡಿಗಳ ನಾಮ ಪಳಕಗಳು ಮಲಯಾಳಿಯಲ್ಲಿ ಇರುತ್ತವೆ, ಮಲಯಾಳಿ ಭಾಷೆಯ ಎರಡು ರೇಡಿಯೋ ಕೇಂದ್ರಗಳಿವೆ!!  ಕನ್ನಡದವರು , ಅದರಲ್ಲಿಯೂ  ಕರಾವಳಿ ಕರ್ನಾಟಕದ ಜನ ಇಲ್ಲಿ ತುಂಬಾ ಇದ್ದಾರೆ. ಬಿ. ಆರ್. ಶೆಟ್ಟರು ಇದಕ್ಕೆ ಕಾರಣ ಎನಿಸುತ್ತದೆ. ಇಲ್ಲಿ ಇರುವುದು ಮಾತ್ರವಲ್ಲ, ನಿಜ ಅರ್ಥದಲ್ಲಿ ಭಾರತಿಯ ರಾಯಭಾರಿಯಾಗಿ, ಇಲ್ಲಿ ನಮ್ಮ ಸಂಸ್ಕೃತಿಯನ್ನು ಬೇರೂರಿಸಿದ್ದಾರೆ. ಇಲ್ಲಿ ದೇವಸ್ತಾನ ಮಾಡಲು ಇಲ್ಲಿನ ಆಡಳಿತ ಅನುಮತಿ ನೀಡದಿದ್ದರೂ ಮನೆಗಳಲಿ, ಸಭಾಬವನಗಳಲ್ಲಿ ಭಾರತಿಯ ಹಬ್ಬಗಳನ್ನು ಆಚರಿಸಿ, ಭಾರತೀಯರು ಸಂತೋಷ ಪಡುತ್ತಾರೆ.

           ಇಲ್ಲಿನ ಬ್ರಾಹ್ಮಣಸಂಘ ಒಂದು ಕನ್ನಡ ಬ್ರಾಹ್ಮಣ ಸಮುದಾಯದ ಗುಂಪು. ಇಪ್ಪತ್ತು- ಇಪ್ಪತ್ತೈದು ಕುಟುಂಬಗಳ ಈ ಗುಂಪು ಪ್ರತಿತಿಂಗಳು ಸರತಿಯಂತೆ ಪ್ರತಿ ಸದಸ್ಯರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡುತ್ತಾರೆ. ಇದೆ ಹೆಳೆಯಲ್ಲಿ ಎಲ್ಲರ ಮಕ್ಕಳು ಶ್ಲೋಕಗಳನ್ನು ಕಲಿಯುತ್ತವೆ, ಪೂಜೆಯನ್ನು ನೋಡುತ್ತವೆ. ಹೆಂಗಸರ ಜರಿಸೀರೆಗಳು ಹೊರಬರುತ್ತವೆ. ನಮ್ಮ ಸಂಸ್ಕೃತಿಯು ಸ್ವಲ್ಪ ಅಂಶಗಳಾದರೂ ಮುಂದಿನ ಪೀಳಿಗೆಗೆ ಮುಂದುವರಿಯುತ್ತದೆ. ನಾವೂ ಹಲವು ಮನೆಗಳಲ್ಲಿ ಪೂಜೆಗೆ ಹೋಗುವಂತಾಯಿತು. ಇಲ್ಲಿನ ಮಹಿಳೆಯರ ಗುಂಪು ಪ್ರತೀ ಮಂಗಳವಾರ ಶಂಕರಾಚಾರ್ಯರ ಸೌಂದರ್ಯ ಲಹರಿ ಓದುತ್ತಾರೆ. ಈ ಗುಂಪನ್ನು ಸೇರಿದ್ದು ನನಗೆ ಒಳ್ಳೆಯ ಸಮಯಕಳೆಯುವ ಸಾದನವಾಯಿತು. ಸೌಂದರ್ಯ ಲಹರಿ ಸಪ್ತಾಹಕ್ಕೆ ಹಾಜರಾದೆ, ಶಂಕರ ಜಯಂತಿ ಪ್ರಯುಕ್ತ  ದಶಶ್ಲೋಕಿ, ಗುರುವಷ್ಟಕಂ ಓದಿದೆವು. ನಾನು ಇವುಗಳನ್ನೆಲ್ಲ ಕಲಿಯುವಂತಾಯಿತು.
          
             ಮಗಳ ಸಂಗೀತ ಪಾಟಗಳು ನಿಲ್ಲಬಾರದೆಂದು ನಾನು ಬಹಳ ಪ್ರಯತ್ನ ಮಾಡಿದೆ. ಆದರೆ  ಇಲ್ಲಿ ಸರಿಯಾದ ಗುರುವನ್ನು ಹುಡುಕಲು ನನ್ನಿಂದ ಸಾಧ್ಯವಾಗಲಿಲ್ಲ. ನಮಿತ ಮತ್ತು ಅನಂತ್ ಇಲ್ಲಿ ಕೆಲವು ವರ್ಷಗಳಿಂದ ನೆಲಸಿ ಕನ್ನಡತನವನ್ನು ಇಲ್ಲಿ ಉಳಿಸಲು ಪ್ರಯತ್ನಿಸುತ್ತಿರುವ  ದಂಪತಿಗಳು. ನಮಗೆ ದೂರದ ಸಂಬಂದಿಗಳಾದ  ಅವರ ಪರಿಚಯ ನಮ್ಮ ಅಬುಧಾಬಿಯ ವಾಸವನ್ನು ಬಿಡುವಿಲ್ಲದಂತೆ ಮಾಡಿಸಿತು.  ಅವರು ಆಯೋಜಿಸಿದ್ದ  ಪುರಂದರದಾಸರ ಆರಾದನೆಯಲ್ಲಿ, ರಾಜ್ಯೋತ್ಸವ ನ್ರತ್ಯ ನಾಟಕ 'ನಾಟ್ಯರಾಣಿ ಶಾಂತಲ' ದಲ್ಲಿ ಪ್ರೀತಿಯು ಬಾಗವಹಿಸಿದಳು. ಅವಳೊಡನೆ ಅಭ್ಯಾಸಕ್ಕೆ ಹೋಗುವುದು, ಅಲ್ಲಿ ಹಲವರ ಪರಿಚಯ, ಸಹಾಯ ಎಂದು ಕೆಲುವು ದಿನಗಳ ಚಟುವಟಿಕೆಗಳಾಯಿತು. ಮನೆಯಲ್ಲಿ ಎಲ್ಲರ ಬಾಯಿಯಲ್ಲಿಯೂ  ಅಂತಃಪುರದ ಗೀತೆಗಳು ನಲಿದಾಡಿದವು. ಕನ್ನಡ ಸಂಘದ ರಾಜ್ಯೋತ್ಸವ  ಆಚರಣೆಯು  ಗಂಗಾವತಿ ಬೀಚಿ, ನರಸಿಂಹ ಜೋಶಿಯರ ನಗೆ ಭಾಷಣದಿಂದ ಜನರನ್ನು ರಂಜಿಸಿತು.             


     
         
                       



ಪುರಂದರದಾಸರ ಆರಾದನೆ

ತ್ಯಾಗರಾಜ ಆರಾಧನೆಯಲ್ಲಿ ಹಾಡುತ್ತಿರುವಾಗ  


        ಇಲ್ಲಿನ ಕರ್ನಾಟಕ ಸಂಗೀತ ಸಭಾದವರು ಆಯೋಜಿಸಿದ್ದ ತ್ಯಾಗರಾಜ ಆರಾದನೆಯಲ್ಲೂ ಪ್ರೀತಿ ಪಾಲ್ಗೊಂಡಳು. ಶ್ರೀಯುತ ಕುಮಾರ್ ಆಯೋಜಿಸಿದ್ದ ಸಂಗೀತ ಉತ್ಸವದಲ್ಲ್ಲಿ ನಾಗಮಣಿ ಶ್ರೀನಾಥ್ ಮತ್ತು ಸುಮಾ ಸುಧೀಂದ್ರರ ಇದಿರಿನಲ್ಲಿ ನಮ್ಮ ನಮಿತಾಳ ತಂಡದ ಮಹಿಳೆಯರ ಹಾಡುಗಾರಿಕೆಯಿತ್ತು. ಈ ಬಾರಿ ನಾನು ಬಾಗವಹಿಸಿದ್ದೆ ಮಗಳಲ್ಲ. ಹೀಗೆ ಸಾಂಸ್ಕ್ರತಿಕವಾಗಿ ಇಲ್ಲಿನ ಭಾರತಿಯ ಸಮುದಾಯ ಬಹಳ ಚಟುವಟಿಕೆಯಿಂದಿದ್ದು , ನಮ್ಮನ್ನು  ತೊಡಗಿಸಿಕೊಳ್ಳಲು ತುಂಬಾ ಅವಕಾಶಗಳನ್ನು ಕೊಡುತ್ತದೆ.

           

ಯು ಎ ಇ ಯಲ್ಲಿ ನಮ್ಮ ಮನೆಯವರು:






 ನಮ್ಮ ಮನೆಗೆ  ಅತ್ತೆ- ಮಾವ, ಅಮ್ಮ, ನಮ್ಮ ತಂಗಿಯರ ಕುಟುಂಬಗಳು - ಹೀಗೆ ಬರುವವರು ಇದ್ದದ್ದು ನಮಗೆ ಇಲ್ಲಿ ದಿನ ಕಳೆದಿದ್ದು  ಗೊತ್ತಗದಂತಾಗಿತ್ತು. ಪಪ್ಪಾ, ಅಮ್ಮ ಇಬ್ಬರೂ ಒಟ್ಟಾಗಿ ಪುರುಸೋತ್ತಿನಲ್ಲಿ ಮಗಳ ಮನೆಗೆಂದು ಬರುವುದು ಕನಸಾಗಿಯೀ ಉಳಿಯಿತು, ವಿಧಿ ಪಪ್ಪನಿಗೆ ಅಷ್ಟು ಪುರುಸೊತ್ತು ಕೊಡಲೇ ಇಲ್ಲ. ಅಮ್ಮನಾದರೂ ಬರಲಿ ಎಂದು ಯೋಚಿಸಿ, 
ತಯಾರಿ ನಡೆಸಿದರೂ ಅಮ್ಮ ಬರುವವರೆಗೆ ನನಗೆ ಆತಂಕ ಏನಾದರೂ ಆಗಿ ಅಮ್ಮನ ಕಾರ್ಯಕ್ರಮ ರದ್ದಾಗಬಹುದೆಂಬ  ಆತಂಕ. ಆದರೆ ಈ ಬಾರಿ ದೇವರು ನಮ್ಮ ಪ್ರಾರ್ಥನೆ  ಆಲಿಸಿದ. ಅಮ್ಮ ಅಂದುಕೊಂಡಂತೆ ಮಸ್ಕತ್ತಿಗೆ ಬಂದು, ಅಲ್ಲಿ ನಾಲ್ಕು ದಿನ ತಿರುಗಾಡಿ ನಂತರ ಇಲ್ಲಿಗೆ ಬಂದಳು. ಅಮ್ಮನೊಡನೆ ಅಬುಧಾಬಿ ಯನ್ನು ಸುತ್ತುವ ಸಂಭ್ರಮ! ನನ್ನ ತಂಗಿ ಮಧುರಳು ಪರಿವಾರ ಸಮೇತ  ಬಂದಳು. ಪುಟ್ಟ ಶ್ರೇಯಾ ದೊಡ್ಡಮ್ಮ, ದೊಡ್ಡಪ್ಪ ಎಂದು ನಮ್ಮೊಡನೆ ತಿರುಗಾಡಿತು. ಎಲ್ಲರೂ ಕೂಡಿ ಅಲ ಇನ್ ಗೆ ಹೋದೆವು, ದುಬೈ ಮಾಲಿನ ಸಂಗೀತ ಕಾರಂಜಿ, ಅಬುಧಾಬಿಯ ಬ್ರಿಹತ್ ಮಸಿದಿ, ಎಂದೆಲ್ಲ ತಿರುಗಾಡಿದೆವು. ಪ್ರೀತಿಯು ಗೌಜಿನಿಂದ ಎಲ್ಲರೊಡನೆ ಬೆರೆತಳು. 

             ಅತ್ತೆ ಮಾವ  ಬಂದಾಗ ಬೇಸಿಗೆಯ ಜಳ! ಆದರೂ ಇಲ್ಲಿನ ಹವಾನಿಯನ್ತ್ರಕಗಳಿಂದಾಗಿ ಮನೆಯೊಳಗೇ ಚಳಿಯಲ್ಲಿ ಸಾಕಾಗುತ್ತೆ ಎನ್ನುತ್ತಿದ್ದರು. ಪ್ರೀತಿಯ ರಜೆ, ರಮಾದಾನ್ ಹಬ್ಬದ ಉಪವಾಸದ ವಾತಾವರಣಗಳಿಂದ ಅವರು ಬಂದಾಗ ದಿನಕಳೆದದ್ದು  ತಿಳಿಯುತ್ತಿರಲಿಲ್ಲ. ಇಲ್ಲಿ ಅಂದರೆ ಸಂಯುಕ್ತ ಅರಬ್ ಸಂಸ್ತಾನದಲ್ಲಿ ರಮಾದಾನ್ ತಿಂಗಳೆಂದರೆ ವಿಶೇಷ. ಇದು ಮುಸಲ್ಮಾನರ ರಾಜ್ಯವಾವಾದ್ದರಿಂದ ಸರಕಾರ ಉಪವಾಸಕ್ಕಾಗಿ ಹಲವು ವ್ಯವಸ್ತೆಗಳನ್ನು ಮಾಡುತ್ತದೆ. ಇಡಿ ದೇಶದ ಸರಕಾರೀ, ಖಾಸಗಿ ಕಚೇರಿಗಳೆಲ್ಲ ಅರ್ಧ ದಿನ ಕೆಲಸ ಮಾಡುತ್ತವೆ! ಉಪವಾಸವಿಲ್ಲದವರಿಗೂ ಮೋಜು. ಆದರೆ ಹಗಲೆಲ್ಲ ಹೋಟೆಲುಗಳು ಮುಚ್ಚಿರುತ್ತವೆ, ಸರಕಾರದ ಆದೇಶದಂತೆ. ಸಾರ್ವಜನಿಕ ಜಾಗ ಗಳಲ್ಲಿ  ತಿನ್ನುವುದು, ಕುಡಿಯುವುದು ಉಪವಾಸದ ಸಮಯಗಳಲ್ಲಿ ನಿಷೆದಿಸಲಾಗಿರುತ್ತದೆ. ಬೆಳಿಗ್ಗಿನ ಪ್ರಾರ್ಥನೆಯ ನಂತರ ಆರಂಭವಾದ ಉಪವಾಸ ಮುಸ್ಸಂಜೆಯ  ಪ್ರಾರ್ಥನೆಯ ತನಕ ನೀರನ್ನು ಕುಡಿಯದೆ  ನಡೆಯುತ್ತದೆ. ಶಾಲೆಗಳಿಗೂ ಅವಧಿಯನ್ನು ಕಡಿಮೆಮಾದಲಾಗಿರುತ್ತದೆ. ಒಟ್ಟಿನಲ್ಲಿ ಇಡಿ ದೇಶದ ದಿನಚರಿ ಒಂದು ತಿಂಗಳು ಬದಲಾಗುತ್ತದೆ. ತಡ ರಾತ್ರಿಯ ತನಕ  ಈ ಒಂದು ತಿಂಗಳು ಶಾಪ್ಪಿಂಗ್ ಮಾಲುಗಳು ತೆರೆದಿರುತ್ತವೆ. ಬೆಳಿಗ್ಗಿನಿಂದ ಸಂಜೆಯ ತನಕ ಬನಗುಡುವ ರಸ್ತೆಗಳು ರಾತ್ರಿ ಹಬ್ಬದ ವಾತಾವರಣದಿಂದ ಕಂಗೊಳಿಸುತ್ತದೆ. ರಮಾದಾನ್ ತಿಂಗಳಿನಲ್ಲಿ ದಾನ ಧರ್ಮಗಳು ತುಂಬಾ ನಡೆಯುತ್ತವೆ. ಮಾಲುಗಳಲ್ಲಿ ಕರ್ಜೂರ ಮತ್ತು ಹುಣಸೆನಿರುಗಳನ್ನು ಉಪವಾಸ ಮುಗಿಸುವ ಹೊತ್ತಿನಲ್ಲಿ ಹಂಚಲಾಗುತ್ತದೆ. ಹೀಗೆ ಉಪವಾಸ ಮಾಡುವವರು, ಮಾಡದವರು ಎಲ್ಲರಿಗು ಹಬ್ಬ .

        ನನ್ನ  ಪತಿ ಶಶಿಯ ತಂಗಿ ಸೀಮಾ ಕುಟುಂಬ ಸಮೇತ ಅಮೆರಿಕಾದಿಂದ ಇಲ್ಲಿಗೆ ಬಂದಳು. ಅವರು ಅಮೆರಿಕಾದ ಪ್ರಜೆಯಾದ ಕಾರಣ ಅವರಿಗೆ ಇಲ್ಲಿನ ವೀಸಾದ  ರಗಳೆ ಇಲ್ಲ. ಅಮೇರಿಕಾದ ಪ್ರಜೆಗಳಿಗೆ ಇಲ್ಲಿ ಕಾರು ಚಲಾಯಿಸಲು ಕೊಡ ಅಲ್ಲಿನ ಲ್ಯಸೆನ್ಸ್ ನಡೆಯುತ್ತದೆ. ಮತ್ತೆ ಅವರೊಡನೆ  ಇಲ್ಲಿನ ಭಾರತಿಯ ಹೊಟೇಲುಗಳಲ್ಲಿ, ಮರುಭೂಮಿಯಲ್ಲಿ, ಮಾಲುಗಳಲ್ಲಿ ಸುತ್ತಿದೆವು!


ದುಬೈ ಎಂಬ ಮಾಯಾನಗರಿ: 


ಅತ್ಯಂತ ಎತ್ತರದ ಬುರ್ಜ್ ಖಲಿಫಾ 

 ದುಬೈ ಬಗೆಗೆ ಬರೆಯದೆ ಸಂಯುಕ್ತ ಅರಬ್ ಸಂಸ್ತಾನದ ಬಗೆಗಿನ ಲೇಖನ ಅಪೂರ್ಣ. ಯು ಎ ಇ ಯಾ ನಿಜವಾದ ಆಕರ್ಷಣೆ  ದುಬೈ ನಗರ. ಅರೇಬಿಯನ್ ನೈಟ್ಸ್ ನ ಕಲ್ಪನೆಯ ನಗರದಂದೆ ವಿದ್ಯುದ್ದೀಪಗಳಿಂದ ಕಂಗೊಳಿಸುವ ಈ ನಗರದಲ್ಲಿ ಇಲ್ಲದ ಪ್ರವಾಸಿ ಆಕರ್ಷಣೆಯೇ ಇಲ್ಲ. ಮರುಭೂಮಿಯ ಸವಾರಿ, ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಕಲಿಫಾ, ಹಿಮಗಿರಿಗಳ ತಂಪು  ಅನುಭವ ಕೊಡುವ ಸ್ಕಿ ಮಾಡುವ ತಾಣ!; ನಾವು ಹೆಸರಿಸಿದರೆ ಸಾಕು  ಅದು  ಅಲ್ಲಿದೆ. ಈ ಮಾಯಾನಗರಿಗೆ ನಾವು ಅಬುದಾಬಿಯಿಂದ ಒಂದು  ಗಂಟೆಯಲ್ಲಿ ತಲುಪಬಹುದು. ಹತ್ತು ಹಲವು ಬಾರಿ ಸಂದರ್ಶಿಸಿದರು ಪ್ರತಿ ಬಾರಿ ಏನಾದರು ಹೊಸತನ್ನು ನೋಡುವಂತೆ ಮಾಡುವ ಈ ನಗರ ನಿಜವಾಗಿ ಒಂದು ಮಾಯಾಲೋಕವನ್ನೇ ಸ್ರಷ್ಟಿ ಮಾಡಿದೆ. ಇಲ್ಲಿಯೂ ಸಮುದ್ರವನ್ನು ಒತ್ತುವರಿ  ಮಾಡಿ ನಿರ್ಮಿಸಿರುವ   ಪಾಮ್ ಜ್ಹುಮೈರ ದ್ವೀಪ ನೋಡಲು ಕಣ್ಣಿಗೊಂದು ಹಬ್ಬ.

       ಇಲ್ಲಿಯೂ ಕನ್ನಡಿಗರು ಹಲವು ಸಾಂಸ್ಕ್ರತಿಕ  ಕಾರ್ಯಕ್ರಮವನ್ನು ಆಯೋಜಿಸುತ್ತಾರೆ, ಭಾರತದಿಂದ ನಮ್ಮ ಕಲಾವಿದರನ್ನು, ಸಾಹಿತಿಗಳನ್ನು ಕರೆಸುತ್ತಾರೆ. `ನಮ್ಮ ಕುಂದಾಪುರದ ರೂಪಕಲಾ ತಂಡದ ಮೂರು ಮುತ್ತು ನಾಟಕ ಆಯೋಜಿಸಲಾಗಿತ್ತು. ನಮ್ಮೂರಿನಿಂದ ಇಲ್ಲಿಯ  ತನಕ ಬಂದು ಅವರು ಪ್ರದರ್ಶಿಸಿದ ನಾಟಕಕ್ಕೆ ಹೋಗಿದ್ದು ನನಗೆ ಒಂದು ಹ್ರದಯ ಸ್ಪರ್ಶಿ ಅನುಭವ. ಅಲ್ಲಿ ನನ್ನ ಪ್ರಾಥಮಿಕ ಶಾಲೆಯ ಕೆಲುವು ಗೆಳತಿಯರ ಬೇಟಿಯಾಯಿತು!  

          ದ್ವನಿ ಪ್ರತಿಷ್ಠಾನದವರು ಆಯೋಜಿಸಿದ್ದ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ನೀಡಿದ್ದ ಬೇಟಿ ಇನ್ನೊಂದು ಸ್ಮರಣಿಯ ಅನುಭವ.  ನಮ್ಮೊರಿನವರೆ ಆದ ಡುಂಡಿರಾಜರ ಅದ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಬಾಗವಹಿಸಿದ್ದ ಹವ್ಯಾಸಿ ಚುಟುಕು ಕವಿಗಳ ಕವಿತೆಗಳು ಉತ್ತಮವಾಗಿದ್ದವು. ಡುಂಡಿರಾಜರ ಮಾತೊಂತು ನಗೆಯ ಸ್ಪೋಟಕ್ಕೆ ಕಾರಣವಾಯಿತು. ಅವತ್ತು ಸನ್ಮಾನ ಗೊಂಡವರಲ್ಲಿ   ಜಯಪ್ರಕಾಶ್ ಮಾವಿನಕುಳಿಯವರಿದ್ದರು. ಬಾಲ್ಯದಲ್ಲಿ ನ್ರತ್ಯ ತರಗತಿಯಲ್ಲಿ ಪರಿಚಯವಿದ್ದ  ಇವರನ್ನು ಇಲ್ಲಿ ಬೆಟ್ಟಿಯಾಗಿದ್ದು, ಅವರಿಗೆ ನನ್ನ ಪರಿಚಯವಿದ್ದದ್ದು  ಒಂದು ಆಕಸ್ಮಿಕ!

          ನಮ್ಮೂರು, ದೇಶಗಳಿಂದ ದೂರವಾದ ಜನಗಳು ಎಲ್ಲಿಯೋ ಬಂದು ನಮ್ಮತನವನ್ನು ಅರಸುತ್ತ, ಈ ದೇಶದಲ್ಲೊಂದು ಮಿನಿ ಭಾರತವನ್ನೇ ನಿರ್ಮಾಣ ಮಾಡಿದ್ದಾರೆ. ಭಾರತದಲ್ಲಿದುಕೊಂಡು ಸಿಗದ ಸಾಂಸ್ಕ್ರತಿಕ ಲೋಕ ಈ ಅರಬ್ ನಾಡಿನಲ್ಲಿ ನನಗೆ ದೊರಕಿದೆ.











ಭಾನುವಾರ, ಜೂನ್ 12, 2011

ಶಾಂತಿಯುತ ನಾಡು ಒಮಾನಿಗೆನಾಯಿತು?

ಪ್ರಜಾಪ್ರಭುತ್ವದ ಗಾಳಿ ಎಲ್ಲೆಡೆ ಬೀಸುತ್ತಿದೆ. ಇರುವ ಆಡಳಿತದ ವಿರುದ್ದ ಜನರ ಚಳವಳಿ ನಡೆಯುತ್ತಿದೆ. ತುನಿಶಿಯ, ಅಲ್ಜೀರಿಯ, ಈಜಿಪ್ಟ್, ಲಿಬಿಯ, ಇಲ್ಲೆಲ್ಲಾ ಆಳುತ್ತಿದ್ದ ಸರಕಾರವನ್ನು ಬಿಳಿಸಿದ ಚಳವಳಿಗಳು ಈಗ ಬಹರೈನ್ ಮತ್ತು ಒಮಾನುಗಳಿಗೂ ಹಬ್ಬಿದೆ. ಸೌದಿ ಅರೇಬಿಯಾದಲ್ಲಿ ಸರಕಾರದ ವಿರುಧ್ಧ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆಯಂತೆ! ಬಹರೈನಿನಲ್ಲಿ ತುರ್ತು ಪರಿಸ್ತಿತಿ ಗೋಷಿಸಲಾಗಿದೆ.

                ಇಲ್ಲಿರುವ ಲಕ್ಷೋಪಲಕ್ಷ ಜನ ಭಾರತೀಯರು ಮೌನವಾಗಿ ಪರಿಸ್ತಿತಿಯನ್ನು ನೋಡುತ್ತ ದೇವರಲ್ಲಿ ಎಲ್ಲವೂ ಸರಿಯಾಗಲಿ ಎಂದು ಹಾರೈಸುತ್ತಿದ್ದಾರೆ.ಒಂದು ಪಕ್ಷ ಪರಿಸ್ತಿತಿ ಕೈ ಮಿರಿ ಭಾರತೀಯರು ಈ ದೇಶಗಳನ್ನು ಬಿಟ್ಟು ಹೋಗಬೇಕಾದರೆ ಏನಪ್ಪ ಗತಿ ಎಂದು ಯೋಚಿಸಲೂ ಭಯವಾಗುತ್ತದೆ.ನಾವು ಅರಬ್ಬರ ಪ್ರಪಂಚದಲ್ಲಿ ಸೇರಿ ಆರು ವರ್ಷಗಳಾಯಿತು. ಅದರಲ್ಲಿ ಮೊದಲ ಒಂದು ವರ್ಷ ಸೌದಿ ಅರೆಬಿಯಾದಲ್ಲಿ ಕಳೆದಿದ್ದೇವೆ. ಈ ವರ್ಷ ಸಂಯುಕ್ತ ಅರಬ್ ಸಂಸ್ತಾನದಲ್ಲಿ (ಯು ಎ ಇ ) ಇದ್ದೇವೆ. ಇಲ್ಲೆಲ್ಲಾ ಈ ವರ್ಷ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿದರೆ ಇನ್ನು ಹೆಚ್ಚು ಸಮಯ ಭಾರತೀಯರು ಇಲ್ಲಿರಲಾರರು ಎನಿಸುತ್ತಿದೆ.

           ನಾವು ಕಳೆದ ಐದು ವರ್ಷಗಳಿಂದ ವಾಸವಾಗಿರುವ ದೇಶ ಒಮಾನ್. ಶಾಂತಿ ಪ್ರಿಯ ಒಮಾನಿ ಜನತೆ ಸ್ನೇಹಪರರು. ಆದ್ದರಿಂದಲೇ, ಇಲ್ಲಿ ಶತಮಾನಗಳಿಂದ ಭಾರತೀಯರು ಬಂದು ಬೀಡು ಬಿಟ್ಟಿದ್ದಾರೆ ಎನಿಸುತ್ತದೆ..ಈ ದೇಶದ ಒಟ್ಟು ಜನಸಂಖ್ಯೆ ೨೭,೦೦,೦೦೦. ಅದರಲ್ಲಿ ೭,೦೦,೦೦೦ ಜನ ವಿದೇಶಿಯರು. ಅವರಲ್ಲಿ ೮೦% ಭಾರತೀಯರು. ಅಂದರೆ ಯೋಚಿಸಿ ಎಷ್ಟು ಭಾರತೀಯರು ಇಲ್ಲಿರಬಹುದೆಂದು! ನಾವು ಕಳೆದ ಐದು ವರ್ಷಗಳಲ್ಲಿ ಈ ದೇಶದ ಉದ್ದಗಲ ಸಂಚರಿಸಿದ್ದೇವೆ, ಇಲ್ಲಿ ನಡೆಯುವ ಸಾಮಾಜಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ, ಈ ದೇಶದ ಅನ್ನ, ನೀರು ಕುಡಿದಿದ್ದೇವೆ, ಇಲ್ಲಿನವರಾಗಿದ್ದೇವೆ. ಇಲ್ಲಿನ ದೊಡ್ಡ ಭಾರತಿಯ ಸಮುದಾಯ ಸಾಂಸ್ಕ್ರತಿಕವಾಗಿ ಬಹಳ ಚುರುಕಾಗಿದೆ. ಇಲ್ಲಿ ನಡೆಯುವಷ್ಟು ಸಂಗೀತ, ನೃತ್ಯ ಕಾರ್ಯಕ್ರಮಗಳು ಭಾರತದಲ್ಲಿ ನಡೆಯುವುದಿಲ್ಲ ಎನಿಸುತ್ತದೆ. ಇಲ್ಲಿದ್ದ ಐದು ವರ್ಷಗಳಲ್ಲಿ ನಾವು ಕುನ್ನುಕುಡಿ ವೈದ್ಯನಾಥನ್, ಹರಿಪ್ರಸಾದ್ ಚೌರಾಸಿಯಾ, ಏನ್.ರಮಣಿ, ಹಿಂದಿ ಹಾಡುಗಾರ ಶಾನ್, ರೆಮೋ, ಕನ್ನಡದ ಗುರುಕಿರಣ್, ಸಿ.ಅಶ್ವಥ್, ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್, ಮುಂತಾದ ಹತ್ತು ಹಲವು ಭಾರತಿಯ ಕಲಾವಿದರ ಪ್ರದರ್ಶನಗಳನ್ನು, ನಾಟಕಗಳನ್ನು ನೋಡಿದ್ದೇವೆ; ಅದೂ ಉಚಿತವಾಗಿ. ನನ್ನ ಮಗಳು ಮತ್ತು ನಾನು ಪ್ರಭಾತ್ ಕಲಾವಿದರ ತಂಡದೊಂದಿಗೆ ವೇದಿಕೆಯಲ್ಲಿ ಅಭಿನಯಿಸಿದ್ದೇವೆ, ಮಲ್ಲಾಡಿ ಸಹೋದರರಿಂದ ಕೆಲವು ಕೃತಿಗಳನ್ನು ಕಲಿತಿದ್ದೇವೆ. ಹಲವು ಭಾರತಿಯ ಶಾಲೆಗಳು ದೇಶದ ಎಲ್ಲ ನಗರಗಳಲ್ಲೂ ಇವೆ; ರಾಜಧಾನಿ ಮಸ್ಕತ್ತಿನಲ್ಲಿ ಈಗಾಗಲೇ ಐದು ಭಾರತಿಯ ಶಾಲೆಗಳಿವೆ. ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಇಲ್ಲಿನ ಅತಿ ದೊಡ್ಡ ಭಾರತಿಯ ಶಾಲೆಯಲ್ಲಿ ೭,೦೦೦ ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ನಮ್ಮ ಮಗಳು ಇಲ್ಲಿ ಉತ್ತಮ ಗುರುವಿನ ಸಹಾಯದಿಂದ ಶಾಸ್ತ್ರಿಯ ಸಂಗೀತ ಕಲಿಯುತ್ತಿದ್ದಾಳೆ, ಎಲ್ಲ ಐದು ಪಂಚರತ್ನ ಕೃತಿಗಳನ್ನು ಹತ್ತು ವರ್ಷ ವಯಸ್ಸಿನಲ್ಲಿ ಹಾಡಬಲ್ಲವಲಾಗಿದ್ದಾಳೆ. ನಾನೂ ನನ್ನ ಹತ್ತು ವರ್ಷಗಳಿಂದ ಮುಉಲೇ ಹಿಡಿದು ಕುಳಿತಿದ್ದ ವೀಣೆಯನ್ನು ತಂದು ವೇದಿಕೆಯ ಮೇಲೆಯೂ ನುಡಿಸುವಂತಾಗಿದ್ದು ಮಸ್ಕತ್ತಿನಲ್ಲಿ! ಇಲ್ಲಿ ಹಿಂದುಗಳಿಗೆ ಎರಡು ದೇವಾಲಯಗಳು, ಕ್ರಿಸ್ತರಿಗೆ ಚರ್ಚು ಇದೆ. ಎಲ್ಲ ಹಬ್ಬಗಳನ್ನೂ ಒಟ್ಟಾಗಿ ಅವರವರ ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಬಹುದು. ಕನ್ನಡದವರ ಗಣೇಶ ಹಬ್ಬ, ಬಂಗಾಳದವರ ದುರ್ಗಾಪೂಜೆ, ದೇವಸ್ತಾನದ ದಂಡಿಯ, ಜನ್ಮಾಷ್ಟಮಿ, ಮೊಸರುಕುಡಿಕೆ......ಹೀಗೆ ಎಲ್ಲ ಹಬ್ಬಗಳು ಸಾಂಪ್ರದಾಯಿಕವಾಗಿ ಆಚರಿಸಲ್ಪದುತ್ತವೆ. ದೇವಸ್ಥಾನದ ಬಾಗಿಲಿನಲ್ಲಿ ಒಮಾನಿಗಳು ಕುಳಿತು "ಶಿವಜಿ ಕೇಳಿಯೇ ತೆಳ, ದೂದ್ಹ್", "ಬೆಹಂಜಿ ನಾರಿಯಲ್ ಲೇಲೋ", ಎಂದು ಮಾರುತ್ತಿರುತ್ತಾರೆ. ಆದ್ದರಿಂದ ಮಸ್ಕತ್ತಿನಲ್ಲಿ ನಮಗೆ ಯಾವತ್ತೂ ವಿದೇಶಲ್ಲಿದ್ದೇವೆಂದು ಅನಿಸಲೇ ಇಲ್ಲ. ಭಾರತೀಯ ಸಾಮಾಜಿಕ ಒಕ್ಕೂಟದ ಕೆಳಗೆ ಎಲ್ಲಾ ರಾಜ್ಯಗಳ ವಿವಿದ ಶಾಖೆಯಿದೆ. ಕನ್ನಡ ,ಸಂಘ ತುಂಬಾ ಚಟುವಟಿಕೆಯಿಂಡಿದೆ. ನಾವು ಕನ್ನಡ ತರಗತಿಗಳನ್ನು ನಡೆಸುತ್ತಿದೇವೆ. ತಮಿಳರು ತಮಿಳು ತರಗತಿಗಳನ್ನು ನಡೆಸುತ್ತಿದ್ದಾರೆ.ವರ್ಷಕ್ಕೊಮ್ಮೆ ಸ್ವಾತಂತ್ರ್ಯ ಹಬ್ಬವನ್ನು ಎಲ್ಲ ರಾಜ್ಯಗಳವರು ಒಟ್ಟಾಗಿ ಸಾಂಸ್ಕ್ರತಿಕ ಕಾರ್ಯಕ್ರಮಗಳಿಂದ ಆಚರಿಸುತ್ತೇವೆ. ಒಟ್ಟಿನಲ್ಲಿ ಮಿನಿ ಭಾರತವೇ ಇಲ್ಲೇ ನಿರ್ಮಾಣವಾಗಿದೆ.

                 ಇಲ್ಲಿನ ಸುಲ್ತಾನ ಕಬುಸ್ ಬಿನ್ ಸೈದ್ ಭಾರತೀಯರಿಗೆ ಬಹಳ ಸಹಾಯಕಾರಿ ರಾಜ.ನಲವತ್ತು ವರ್ಷಗಳ ಹಿಂದೆ ಇವನು ಗದ್ದುಗೆಗೆ ಏರಿದಂದಿನಿಂದ ಓಮಾನಿನ ಈಗಿನ ಸ್ಥಿತಿಗೆ ಕಾರಣನಾಗಿದ್ದಾನೆ. ದೇಶದ ಮೂಳೆ ಮೂಲೆಗೂ ಉತ್ತಮ ರಸ್ತೆಗಳ ನಿರ್ಮಾಣವಾಗಿದೆ, ನಿರಂತರ ವಿದ್ಯುತ್ ಸರಬರಾಜಿದೆ. ವರ್ಷಕ್ಕೊಮ್ಮೆ ನಡೆಯುವ ಮಸ್ಕತ್ ಹಬ್ಬ ಸ್ಥಳಿಯರಿಗೆ, ವಿದೇಶಿಯರಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದು ತಿಂಗಳಿಡಿ ಉಚಿತವಾಗಿ ಒದಗಿಸುತ್ತದೆ. ರಾಜನ ಆಡಳಿತದಡಿಯು ಪ್ರಜೆಗಳಿಗೆ ಸ್ವಾತಂತ್ರ ಕೊಡಲು ಸಾಧ್ಯ ಎಂಬುದನ್ನು ತೋರಿಸಿದ್ದಾನೆ. ಸಾಮಾನ್ಯ ಜನರಿಗೂ ಭಾರತೀಯರೆಂದರೆ ಪ್ರೀತಿ. ನಾನು ಬೇಟಿಯಾದ ಒಬ್ಬ ಒಮಾನಿ ಮಹಿಳೆ ಹೇಳುತ್ತಿದ್ದಳು ಅವಳಿಗೆ ಭಾರತೀಯ ಕುಟುಂಬ, ನಾವು ಮಕ್ಕಳಿಗೆ ಕೊಡುವ ಶಿಕ್ಷಣ ಎಲ್ಲವು ಇಷ್ಟವಂತೆ. ಅವಳ ಮಕ್ಕಳಿಗೂ ಅದೇ ತರಹದ ಶಿಕ್ಷಣ ಬೇಕಂತೆ. ಮೊದಲಿಗೆ ಶಾಂತಿಯುತವಾಗಿ ಆರಂಭವಾದ ಹರತಾಲಗಳು ಕ್ರಮೇಣ ದೊಡ್ಡದಾಗುತ್ತಾ ಬಂದಿದೆ. ಮದ್ಯದಲ್ಲಿ ಕೆಲವು ಬಾರಿ ಲುಲು ಮಾರುಕಟ್ಟೆಯನ್ನು ಸುಟ್ಟರು, ಇಬ್ರಿ ಎಂಬಲ್ಲಿ ಅಲ್ಲಿನ ಶೇಖನ ಮನೆಗೆ ಬೆಂಕಿ ಇತ್ತ್ತರು. ಎಲ್ಲ ಸರಕಾರೀ, ಖಾಸಗಿ ಕಚೇರಿಯಲ್ಲೂ ಒಂದಾದ ಮೇಲೆ ಒಂದರಂತೆ ಹೆಚ್ಚಿನ ವೇತನ, ಉತ್ತಮ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಯುತ್ತಿದೆ. ಸುಲ್ತಾನರು ಮೊದಲ ವರ ಬೇಡಿಕೆಗಳಾದ ನಿರುದ್ಯೋಗ ಬತ್ಯೆ, ಕನಿಷ್ಠ ವೇತನಗಳನ್ನು ಹೆಚ್ಚಿಸಿದ್ದೆ ತಪ್ಪಯಿತೆನೂ ಎಂಬಂತೆ ದಿಡ್ನದಿಂದ ದಿನಕ್ಕೆ ಅವರ ಬೇಡಿಕೆಗಳು ಹೆಚ್ಚಾಗುತ್ತಲಿವೆ. ಮೊದಲಿಗೆ ದೇಶದ ಬ್ರಷ್ಟ ಅದಿಕಾರಿಗಳ ವಿರುಧ್ಧ ಮತ್ತು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಆರಂಭವಾದ ಚಳವಳಿ ಈಗ ದಿಕ್ಕು ತಪ್ಪ್ಪುತ್ತಿದೆ ಎನಿಸುತ್ತಿದೆ. ಪ್ರತಿಯೊಬ್ಬನು ಅವನದ್ದೇ ಒಂದು ಉದ್ದೇಶ ಸಾದನೆಗಾಗಿ ಚಳವಳಿ ಕುಳಿತಂತೆ ಕಾನುತ್ತಿದೆ. ಇನ್ಗಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳೂ ಚಳವಳಿ ಮಾಡಿದರಂದೆ- ಬೇಡಿಕೆಯೆಂದರೆ ಅವರನ್ನು ಕಡಿಮೆ ಅಂಕಗಳಿಗೆ ಉತ್ತಿರ್ಣ ಮಾಡಬೇಕಂತೆ!

               ಹೀಗೆ ನಡೆದರೆ ಈ ದೇಶದಲ್ಲಿ ಬೀಡು ಬಿಟ್ಟಿರುವ ವಿದೇಶಿಯರ ಗತಿ ಏನೋ ಗೊತ್ತಿಲ್ಲ. ನಾನು ಈ ಲೆಖನವನ್ನು ಬ್ಲಾಗ್ಗರನನ್ನು ಅರ್ಥಮಾಡಿಕೊಂಡು ಮುಗಿಸುವ ಹೊತ್ತಿಗೆ ಒಮಾನಿನ ಪರಿಸ್ತಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ. ಸುಲ್ತಾನರು ಪ್ರಜೆಗಳ ಬೇಡಿಕೆಗಲನ್ನೆಲ್ಲ ಪೂರೈಸಿದ್ದಾರೆ ಎನಿಸುತ್ತಿದೆ. ಆದರೂ ಭಾರತೀಯ ಸಮುದಾಯದ ಮನಸ್ಥಿತಿ ಬದಲಾಗಿದೆ. ನೋಡೋಣ ಎಷ್ಟು ದಿನ ನಡೆಯುತ್ತದೆಂದು ಎಂಬ ಮನಸ್ಥಿತಿ ಹೆಚ್ಚಿನವರಿಗೆ ಬಂದಿದೆ ಎನಿಸುತ್ತಿದೆ. ಸ್ವದೇಶ, ಭಾಷೆ, ಜನರನ್ನೆಲ್ಲ ತೊರೆದು ಬದುಕು ಕಟ್ಟಲು ಬಂದಿರುವ ಜನರ ಅತಂತ್ರತೆ ಇಂತಹ ಪರಿಸ್ತಿತಿಯಲ್ಲಿ ಅರಿವಾಗುತ್ತದೆ. ಇಲ್ಲಿಯೇ ಹತತಿಪ್ಪತ್ತುತ್ತು ವರ್ಷ ಕಳೆದ ಜನರು ಅತ್ತ ತಮ್ಮ ದೇಶಕ್ಕೇ ಪರಕಿಯವಾಗಿ, ಇತ್ತ ಇಲ್ಲಿ ತಂಗಳು ಸಾಧ್ಯವಾಗದ  ಸ್ತಿತಿಯಲ್ಲಿರುತ್ತಾರೆ.