ಮಂಗಳವಾರ, ಜೂನ್ 18, 2024

ಬಸವತತ್ವ-ಯೋಗತತ್ವ ಅನುಸಂಧಾನ


ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಯೋಗದ ಅತ್ಯಂತ ದೊಡ್ಡ ವರ್ಷಾವಧಿ ಹಬ್ಬ. ವರ್ಷದ ಅತ್ಯಂತ ದೊಡ್ಡ ಹಗಲಾದ ಜೂನ್ 21 ರಂದು ಆಚರಿಸಲಾಗುತ್ತದೆ. 2015 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆರಂಭವಾದ ಈ ಆಚರಣೆಯು ಯೋಗಕ್ಕೆ ಅಂತಾರಾಷ್ಟ್ರೀಯ ಮಹತ್ವವನ್ನು ತಂದುಕೊಟ್ಟಿದೆ. ಈ ವರ್ಷ ಹತ್ತನೆಯ ಯೋಗ ದಿನಾಚರಣೆ. ಈ ಸಂಧರ್ಭದಲ್ಲಿ "ಯೋಗ ತತ್ವ ಮತ್ತು ಬಸವತತ್ವಗಳ ಅನುಸಂಧಾನ" ಎಂಬ ವಿಚಾರದ ಬಗೆಗೆ ೨೦೨೧ರ ಯೋಗ ದಿನಾಚರಣೆಯಾ ಸಂಧರ್ಭದಲ್ಲಿ ನೀಡಿದ ಒಂದು ಭಾಷಣವನ್ನು ಲೇಖನಕ್ಕೆ ಇಳಿಸಿದ್ದೇನೆ. ಅನಾದಿಕಾಲದಿಂದಲೂ ಭಾರತದ ಸಂಸ್ಕೃತಿಯ ಭಾಗವಾಗಿ ಬೆಳೆದು ಬಂದ "ಯೋಗ ತತ್ವ" ಮತ್ತು ಹನ್ನೆರಡನೆಯ ಶತಮಾನದಲ್ಲಿ  ಕರ್ನಾಟಕದಲ್ಲಿ ಕ್ರಾಂತಿಕಾರಿ ವಿಚಾರಗಳೊಂದಿಗೆ ಸಮಾಜದಲ್ಲಿ ಸಮಾನತೆಯನ್ನು ಬಯಸಿದ "ಬಸವತತ್ವ" ಗಳನ್ನು ಜೊತೆಯಾಗಿ ಅವಲೋಕಿಸುವ ಒಂದು ಪ್ರಯತ್ನವನ್ನು  ಮಾಡೋಣ   

ಯೋಗತತ್ವ:-

ಮೊದಲಿಗೆ  ಯೋಗತತ್ವ ಎಂದರೆನೆಂದು ನೋಡೋಣ. ಯೋಗ ಎನ್ನುವುದು ಒಂದು ಅಗಾಧವಾದ ಶಾಸ್ತ್ರ. ಇದರಹಿಂದೆ ದರ್ಶನ ಶಾಸ್ತ್ರವೇ ಇದೆ. ಇದೊಂದು ಜೀವನ ವಿಧಾನ ಜೀವನವಿಡೀ ಸಾಧನೆ ಮಾಡಬೇಕಾದ ಅನುಷ್ಠಾನ ವಿದ್ಯೆ. ಇವತ್ತು ಬಹಳ ಜನಪ್ರಿಯವಾಗಿರುವ ಆಸನಗಳು  ಯೋಗಶಾಸ್ತ್ರದ ಅಷ್ಟಾಂಗಗಳಲ್ಲಿ ಒಂದು. ಭಾರತೀಯ ಷಟ್ ದರ್ಶನಗಳೆಂದು ಪ್ರಸಿದ್ದವಾದ ನ್ಯಾಯ, ವೈಶೇಷಿಕ, ಸಾಂಖ್ಯ, ಮೀಮಾಂಸ, ವೇದಾಂತಗಳೊಂದಿಗೆ ಯೋಗಶಾಸ್ತ್ರವೂ ಬರುತ್ತದೆ ಎಂಬ ವಿಚಾರವೇ ಸನಾತನ ಸಂಸ್ಕೃತಿಯಲ್ಲಿ ಈ ಶಾಸ್ತ್ರಕ್ಕಿರುವ ಮಹತ್ವವನ್ನು ತಿಳಿಸುತ್ತದೆ. ಯೋಗವು ಚತುರ್ಮುಖ ಬ್ರಹ್ಮನಿಂದಲೇ ಪರಿಚಯಿಸಲ್ಪಟ್ಟಿತು ಅಂತ ಯೋಗ ಯಾಜ್ಞವಲ್ಕ್ಯನು ಹೇಳುತ್ತಾನೆ. ಆದರೆ ಈ ವಿದ್ಯೆಯನ್ನು ಸೂತ್ರರೂಪದಲ್ಲಿ ಬಂಧಿಸಿ ಕೊಟ್ಟಿರುವುದು ಪತಂಜಲಿ ಮುನಿಯ ಯೋಗಸೂತ್ರ ಎನ್ನುವ ಗ್ರಂಥ. ಈ ಗ್ರಂಥದ ಕಾಲವನ್ನು ಕ್ರಿ.ಪೂ. ೯೦೦ ನೆಯ ಶತಮಾನ , ಅಂದರೆ ಸುಮಾರು 3000 ವರ್ಷಗಳ ಹಿಂದೆ. ಸಮಾಧಿಪಾದ, ಸಾಧನಪಾದ, ವಿಭೂತಿ ಪಾದ ಮತ್ತು ಕೈವಲ್ಯ ಪಾದ ಎಂಬ ನಾಲ್ಕು ಅಧ್ಯಾಯಗಳಲ್ಲಿ 195 ಸೂತ್ರಗಳಿರುವ ಈ ಗ್ರಂಥದ ಆಳ ಮತ್ತು ಯೋಗ್ಯತೆಗಳು ಇದಕ್ಕೆ ಬಂದಿರುವ ಅಸಂಖ್ಯಾತ ವ್ಯಾಖ್ಯಾನಗಳನ್ನು ನೋಡಿದರೆ ತಿಳಿಯುತ್ತದೆ. 

ಮನಸ್ಸಿನ ನಿಗ್ರಹದ ಮೂಲಕ ನಮ್ಮ ವ್ಯಕ್ತಿತ್ವ ವನ್ನು ವಿಕಸನಗೊಳಿಸುತ್ತಾ ಬ್ರಹ್ಮಾನಂದ ವನ್ನು ಸಾಧಿಸುವುದು ಯೋಗಶಾಸ್ತ್ರದ ಗುರಿ. "ಯೋಗಃ  ಚಿತ್ತವೃತ್ತಿ ನಿರೋಧಃ " ಎನ್ನುವುದು  ಯೋಗಶಾಸ್ತ್ರವು ಯೋಗ ಎನ್ನುವ ಪದಕ್ಕೆ ಕೊಡುವ ಭಾಷ್ಯ. ಮನುಷ್ಯರಾದ ನಾವು ಚಿತ್ತದ ಮೂಲಕ ಈ ಪ್ರಪಂಚವನ್ನು ತಿಳಿಯುತ್ತೇವೆ. ಈ ಚಿತ್ತದಲ್ಲಿ ಬರುವ ಯೋಚನೆಗಳಿಂದ ಏಳುವ ಅಲೆಗಳೇ ವೃತ್ತಿಗಳು. ನಿರೋಧ ಎಂದರೆ ವ್ಯವಸ್ಥೆಯ ಸಮತೋಲನ ವನ್ನು ಕಾಯ್ದುಕೊಳ್ಳುವುದು. ಅಂದರೆ ಮನಸ್ಸಿನಲ್ಲಿ ಎದ್ದ ಭಾವನೆಗಳನ್ನು ಅಡಗಿಸುವುದು ಯೋಗವಲ್ಲ. ಹೊರಗಿನ ಏರುಪೇರುಗಳಿಂದ ಮನದ ಪ್ರಶಾಂತತೆಯನ್ನು ಕದಡದಂತೆ ಕಾಯುವ ಸ್ಥಿತಿಗೆ ಮನಸ್ಸನ್ನು ಕೊಂಡೊಯ್ಯುವುದೇ ಯೋಗವೆನಿಸುತ್ತದೆ.

ಶ್ರೀ ಕೃಷ್ಣನು ಭಗವದ್ಗಿತೆಯಲ್ಲಿ "ಯೋಗಃ ಕರ್ಮಸು ಕೌಶಲಮ್" ಎನ್ನುತ್ತಾನೆ. ಅಂದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಶುದ್ಧಚಿತ್ತದಿಂದ ಯಜ್ಞ ಭಾವನೆಯಿಂದ ಮಾಡಿ ಅದರ ಮೂಲಕ ಸಾರ್ಥ್ಕಕ್ಯವನ್ನು ಕಾಣುವುದು, ಭಗವಂತನಲ್ಲಿ ಐಕ್ಯನಾಗುವುದೇ ಯೋಗ ಎನ್ನುತ್ತಾನೆ. ಬಸವಣ್ಣನವರ ಕಾಯಕ ತತ್ವವು ಇದೇ ಅಲ್ಲವೇ !!

"ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು
ಅಸಮಂಜಸದಿ ಸಮನ್ವಯ ಸೂತ್ರ ನಯವ 
ವೆಸನಮಯ ಸಂಸಾರದಲಿ ವಿನಯವ ಕಾಣ್ವ 
ರಸಿಕತೆಯೇ ಯೋಗವೆಲೊ ಮಂಕುತಿಮ್ಮ' 
ಎನ್ನುವ ಡಿವಿಜಿ ಯವರ ಯೋಗದ ವಿವರಣೆಯು ಯೋಗವೆಂದರೇನೆಂದು ಸ್ಪಷ್ಟವಾಗಿ ವಿವರಿಸುತ್ತದೆ. ಈ ಸಮತೆಯನ್ನು  ಸಾಧಿಸುವ ಮಾರ್ಗವನ್ನು  ಅಷ್ಟಾಂಗಗಳ ಮೂಲಕ  ವಿವರಿಸುವ ಯೋಗತತ್ವವನ್ನು ಅರಿಯಲು ಅಷ್ಟಾಂಗಗನ್ನು ಸ್ಥೂಲವಾಗಿ ಪರಿಶೀಲಿಸೋಣ, ಯಮ, ನಿಯಮ, ಆಸನ, ಪ್ರಾಣಾಯಾಮ, ಧಾರಣ ಧ್ಯಾನ ಮತ್ತು ಸಮಾಧಿ - ಇವು ಯೋಗದ ಅಷ್ಟಾಂಗಗಳು ಎಂದು ಪತಂಜಲಿಯ ಯೋಗಸೂತ್ರವು ಪಟ್ಟಿ ಮಾಡುತ್ತದೆ. 
  • ಯಮ ಅಂದರೆ ಬಿಡುವುದು. ಜೀವನದಲ್ಲಿ ನಾವು ಬಿಡಬೇಕಾದ ಗುಣಗಳು ಯಾವುವು ಎಂದು ಇವು ತಿಳಿಸುತ್ತದೆ.  ಅಹಿಂಸೆ, ಅಸತ್ಯ ಅಸ್ತೇಯ, ಬ್ರಹ್ಮಚರ್ಯ ಅಪರಿಗ್ರಹಗಳು ಎಲ್ಲರೂ ಜೀವನದಲ್ಲಿ ಪಾಲಿಸಬೇಕಾದ ಸಾಮಾಜಿಕ ಕರ್ತವ್ಯಗಳು, ಸಮಾಜ ಜೀವಿಯಾದ ಮಾನವನ ಸಮಾಜ ಶಾಂತಿಯಿಂದ ಇರಬೇಕಾದರೆ ಎಲ್ಲರೂ ತಮ್ಮ ಕರ್ತವ್ಯವನ್ನು ಪಾಲಿಸಬೇಕು. ಹಾಗಾಗಿ ಯಮ ಯೋಗ ಸಾಧನೆಯ ಮೊದಲ ಅಂಗ 
  • ನಿಯಮಗಳು- ಅಂದರೆ ಹಿಡಿದುಕೊಳ್ಳುವುದು ಅಂತ ಅರ್ಥ. ನಾವು ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಗಳಿವು. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ - ಇವುಗಳು ನಿಯಮಗಳು. 
  • ಆಸನ- ಧ್ಯಾನದ ಅಭ್ಯಾಸಕ್ಕಾಗಿ ಸ್ಥಿರವಾಗಿ, ಸುಖವಾಗಿ ಕುಳಿತುಕೊಳ್ಳುವ ಅಂಗ ವಿನ್ಯಾಸವೇ ಆಸನಗಳು. ನಮ್ಮ ಪ್ರತಿಯೊಂದು ಆಸನವೂ ಸ್ಥಿರವಾಗಿ ಇರುವಂತೆ ನಾವು ಸಾಧನೆ ಮಾಡಿದಾಗ ಅವು ನಮ್ಮ ಮನಸ್ಸನ್ನು ಹದಗೊಳಿಸಿ ರಜಸ್ಸು ಮತ್ತು ತಮಸ್ ಗುಣಗಳನ್ನು ಕಡಿಮೆ ಮಾಡುವಲ್ಲಿ ಸಹಕಾರವನ್ನು ನೀಡುತ್ತದೆ. ಈ ಹಿನ್ನೆಲೆಯನ್ನೆಲ್ಲ ಅರಿತು ಆಸನಗಳ ಸಾಧನೆ ಮಾಡುವುದು ಬಹಳ ಮುಖ್ಯವೆನಿಸುತ್ತದೆ. ಬಾರಿಯ ಅಂಗ ಸೌಷ್ಠವವನ್ನು ಕಾಯ್ದುಕೊಳ್ಳುವ ದ್ರಿಷ್ಟಿಯಿಂದ ಮಾಡಿದ ಕ್ರಿಯೆಗಳು  ವ್ಯಾಯಾಮವೆನಿಸಿಕೊಳ್ಳುತ್ತವೆಯೋ ಹೊರತು ಯೋಗಾಭ್ಯಾಸವೆನಿಸದು. ಯೋಗತತ್ವದ ಅರಿವಿನಿಂದ ; ಯಮ-ನಿಯಮಗಳ ಆಚರಣೆಯಿಂದ ಮಾಡಿದ ವ್ಯಕ್ತಿತ್ವದ ವಿಕಸನಕ್ಕೆ ಕಾರಣವಾಗುತ್ತದೆ. 
  • ಪ್ರಾಣಾಯಾಮ-ಉಸಿರಿನ ನಿಯಂತ್ರಣದ ಮೂಲಕ ಮನೋ ನಿಯಂತ್ರಣ ; ಆ ಮೂಲಕ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣಶಕ್ತಿಯನ್ನೂ, ಮನಸ್ಸನ್ನೂ ನಿಗ್ರಹಿಸುವ ಉಪಾಯವೇ ಪ್ರಾಣಾಯಾಮ
  • ಪ್ರತ್ಯಾಹಾರ- ಮನಸ್ಸನ್ನು ಮತ್ತು ಇಂದ್ರಿಯಗಳನ್ನು ಪ್ರಾಪಂಚಿಕ ಸೆಳೆತಗಳಿಂದ ವಿಮುಖಗೊಳಿಸುವುದೇ ಪ್ರತ್ಯಾಹಾರ.
  • ಧಾರಣ- ಮನಸ್ಸನ್ನು ಒಂದು ಕಡೆಗೆ ಕೇಂದ್ರೀಕ ರಿಸಲು ಮಾಡುವ ತಯಾರಿಯೇ ಧಾರಣ
  • ಧ್ಯಾನ - ಮನಸ್ಸನ್ನು ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವುದೇ ಧ್ಯಾನ
  • ಸಮಾಧಿ- ನಾವು ಧ್ಯಾನ ಮಾಡಿದ ವಿಷಯದ ಸಾಕ್ಷಾತ್ಕಾರ ವೇ ಸಮಾಧಿ
ಮೇಲಿನ ಐದು ಅಂಗಗಳು ಬಹಿರಂಗ ಸಾಧನೆಯ ಅಂಗಗಳೆಂದು ಪ್ರಸಿದ್ಧ ವಾಗಿವೆ. ಕೊನೆಯ ಮೂರು ಅಂಗಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು ಅಂತರಂಗ ಸಾಧನೆಯ ಅಂಗಗಳೆನಿಸಿವೆ.

ಈ ಅಷ್ಟಾಂಗಗಳ ನಿರಂತರ ಸಾಧನೆಯನ್ನು ಮಾಡುವ ಮೂಲಕ ಮಾನವನು ಅಂತರಂಗ ಮತ್ತು ಬಹಿರಂಗ ಶುದ್ದಿಯನ್ನು ಸಾಧಿಸಿ ಜೀವನ್ಮುಕ್ತನಾಗುವುದೇ ಯೋಗ ಸಾಧನೆ ಎನಿಸುತ್ತದೆ. ಇದನ್ನು ಹೇಳುವಲ್ಲಿ ಬಸವಣ್ಣನವರ ಒಂದು ಪ್ರಸಿದ್ಧ ವಚನ ನೆನಪಾಗುತ್ತದೆ.

ಬಸವತತ್ವ & ಯೋಗ:-

ಕಾಯಕವೇ ಕೈಲಾಸ ಎಂದು ಭೋದಿಸಿದ ಬಸವಣ್ಣ ನಾವು ಮಾಡುವ ಕಾಯಕದ ಮೂಲಕ ಭಗವಂತನಲ್ಲಿ ಐಕ್ಯ ಹೊಂದುವ ಬ್ರಹ್ಮಾನಂದ ವನ್ನು ಕಂಡುಕೊಳ್ಳುವ ಸೂತ್ರವನ್ನು ಹೇಳಿ ಸಮಾಜದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಮಹಾನ್ ಚೇತನ. ಅವರ ತತ್ವಗಳಲ್ಲಿ ಯೋಗತತ್ವ ಹೇಗೆ ಅಡಕವಾಗಿದೆ ಎಂದು ಕೆಲವು ವಚನಗಳ ಉದಾಹರಣೆಯ ಮೂಲಕ ನೋಡೋಣ.

ಕಳಬೇಡ, ಕೊಳಬೇಡ, ಹುಸಿಯನುಡಿಯಲುಬೇಡ
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ 
ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮದೇವ ನನೊಲಿಸುವ ಪರಿ

ಇಲ್ಲಿ ಮೊದಲನೆಯ ಸಾಲು ಅಷ್ಟಾಂಗದ ಮೊದಲ ಅಂಗವಾದ ಯಮಗಳನ್ನು ಭೋದಿಸುತ್ತದೆ. ಕಳಬೇಡ ಅಂದರೆ ಆಸ್ತೆಯ, ಕೊಲಬೇಡ ಅಂದರೆ ಅಹಿಂಸೆ ಯನ್ನು ಆಚರಿಸು ಎಂದು. ಎರಡನೆಯ ಸಾಲು ಎರಡನೆಯ ಅಂಗವಾದ ನಿಯಮಗಳಾದ ಶೌಚ, ಸಂತೋಷಗಳನ್ನು ಹೇಳುತ್ತದೆ. ಮುಂದೆ ಹೇಳುವ ಅಂತರಂಗ ಬಹಿರಂಗ ಶುದ್ದಿಗಳು, ಈಶ್ವರ ಪ್ರಣೀಧಾನ ಮತ್ತು ಜೀವನಮುಕ್ತಿ ಅಂದರೆ ಸಮಾಧಿಯನ್ನು ಹೇಳುತ್ತದೆ. 

ಉಳ್ಳವರು ಶಿವಾಲಯವ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬವಯ್ಯ ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ ಕೊಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಇಲ್ಲಿ ಬಸವಣ್ಣನವರು ದೇಹದ ಮಾಧ್ಯಮದ ಮೂಲಕ ಮೋಕ್ಷವನ್ನು ಸಾಧಿಸುವ ವಿಧಾನವನ್ನು ಸರಳವಾಗಿ ತಿಳಿಸಿದ್ದಾರೆ. ಎನ್ನ ಕಾಲೇ ಕಂಬ ಎಂದರೆ ಮನಸ್ಸಿನ ದೃಢ ನಿರ್ಧಾರದ ಬಲವೇ ದೇಹವೆಂಬ ದೇಹಾಲಯದ ಅಡಿಪಾಯ ಎಂದು ಮನಸ್ಸನ್ನು ಹದಗೊಳಿಸಬೇಕಾದ ಅಗತ್ಯತೆಯನ್ನು ಹೇಳುತ್ತಾರೆ. ದೇಹವೇ ದೇಗುಲವಾದಾಗ  ನಾವು ಮುಕ್ತರಾಗುವುದು ಖಂಡಿತ. ಶರೀರ ಮಾಧ್ಯಮ ದಿಂದ ಮನಸ್ಸಿನ ಶಕ್ತಿಯ ಮೂಲಕ ನಾವು ಸಾಧಿಸಬಹುದಾದ ಎತ್ತರವನ್ನು ಹೇಳುತ್ತಾರೆ.

 ಲೋಕಡದೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ 
ನೆರೆಮನೆಯ ದುಃಖಕ್ಕೆ ಆಳುವವರ ಮೆಚ್ಚ ಕೂಡಲಸಂಗಮದೇವ
ಎನ್ನುವಲ್ಲಿ ನಮ್ಮ ಮನಸ್ಸನ್ನು ನಾವು ಸ್ವಸ್ಥವಾಗಿಡಬೇಕಾದ ಮಹತ್ವವನ್ನು ತಿಳಿಸುತ್ತಾರೆ.

ಅತ್ತ್ತಲಿತ್ತಲು ನೋಡದಂತೆ ಹೇಳವನ ಮಾಡಯ್ಯ ತಂದೇ
ಸುತ್ತಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ
ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯ ತಂದೆ
ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ

ಎನ್ನುವ ವಚನದಲ್ಲಿ ಇಂದ್ರಿಯಗಳ ನಿಗ್ರಹ ಅಂದರೆ ಪ್ರತ್ಯಾಹಾರ ವನ್ನು ಹೇಳಿದ್ದಾರೆ. ನಮಗಿಲ್ಲಿ ಮುಖ್ಯವಾಗುವುದು ಇವರ ಪ್ರತಿ ವಚನದಲ್ಲಿಯೂ ಬರುವ ಯೋಗಶಾಸ್ತ್ರದ ಅಷ್ಟಾಂಗಗಳು.  ಹೀಗೆ ಬಸವತತ್ವ ಬೇರೆಯಲ್ಲ ಯೋಗತತ್ವ ಬೇರೆಯಲ್ಲ. ಒಂದನ್ನು ನಾವು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಇನ್ನೊಂದು ತಾನಾಗಿಯೇ ನಮ್ಮ ಜೀವನದ ಭಾಗವಾಗುತ್ತದೆ.

ಮನಸ್ಸಿನ ಶೋಧನೆಯನ್ನು ಮಾಡುತ್ತಾ ಚಿತ್ತವೃತ್ತಿಯ ನಿರೋಧದ ಮೂಲಕ ಕೈವಲ್ಯವನ್ನು ವಿವರಿಸುವ ಯೋಗತತ್ವ; ತ್ರಿವಿಧ ದಾಸೋಹದ ಮೂಲಕ ಅನಾಚಾರವೇ ನರಕ, ಅಚಾರವೇ ಸ್ವರ್ಗ ಎಂದು ಹೇಳುವ ಬಸವತತ್ವ- ಎರಡೂ ಹೇಳುವುದು ಒಂದೇ ವಿಚಾರವನ್ನು. ಶುದ್ಧವಾದ ಮನಸ್ಸು ಮತ್ತು ಆರೋಗ್ಯವಂತ ದೇಹದ ಮೂಲಕ ಸಮಾಜಮುಖಿ ವ್ಯಕ್ತಿತ್ವ ವನ್ನು ಬೆಳೆಸಿಕೊಳ್ಳುವುದು ಎರಡರ ಮೂಲ ಉದ್ದೇಶ. ಎರಡು ತತ್ವಗಳ ಸ್ವಲ್ಪ ಭಾಗವನ್ನಾದರೂ ನಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡರೆ ಅದೇ ನಮ್ಮ ಸಾಫಲ್ಯ.

ಸುಧಾ ಶಶಿಕಾಂತ್ , ಮಸ್ಕತ್ 
(೨೦೨೧ ರ ಕೊರೋನಾ ಕಾಲದ ಅಂತರ್ಜಾಲದ ಯೋಗ ದಿನಾಚರಣೆಯಲ್ಲಿ ನೀಡಿದ ಭಾಷಣ )

ಉದಯವಾಣಿ ದೇಸೀಸ್ವರದಲ್ಲಿ  ಪ್ರಕಟವಾದ ಲೇಖನ 



ಭಾನುವಾರ, ಜೂನ್ 2, 2024

ಅಲೌಕಿಕ ಅನುಭವ ನೀಡಿದ ಆರೋಕಿ, ಟೆಕಾಪೋ , ಟಿ ಅನೌ ( ನ್ಯೂಜಿಲ್ಯಾಂಡ್ ಅನುಭವಗಳು-4)

ಸಮುದ್ರದ ಆಘಾದತೆಯನ್ನು  ಅನುಭವಿಸಿದವನು ದೇವರ ಅಸ್ತಿತ್ವವನ್ನು ಪ್ರಶ್ನಿಸುವುದಿಲ್ಲ ಎನ್ನುವ ಗೋವಿಂದ ಪೈ ಅವರ ಅನುಭವದ ಮಾತು ನನಗೆ ಅರ್ಥವಾಗಿದ್ದು,  ಅನುಭವಕ್ಕೆ ಬಂದಿದ್ದು ನ್ಯೂಜಿಲ್ಯಾಂಡಿನಲ್ಲಿ. ಪ್ರಕೃತಿಯ ಸೌಂದರ್ಯ ಮನಸ್ಸನ್ನು ಧ್ಯಾನ ಸ್ಥಿತಿಗೆ ಒಯ್ಯವ, ಮನಸ್ಸನ್ನು ಸ್ತಬ್ಧ ಗೊಳಿಸಿದ ಅನುಭವ ಇಲ್ಲಿನ ದಕ್ಷಿಣ ಅಲ್ಪ್ಸ್ ಪರ್ವತ ಶಿಖರಗಳ ದರ್ಶನ ನನಗೆ ನೀಡಿತು.
ಟ್ರಾಮ್ 
        ದಕ್ಷಿಣ ದ್ವೀಪ ಅಥವಾ ತೆ ವಾಯಿ ಪವನಾಮುವಿನ ನಮ್ಮ ಪ್ರವಾಸ ಕ್ರೈಸ್ಟ್ ಚರ್ಚ್ ಪಟ್ಟಣದಿಂದ ಆರಂಭವಾಯಿತು. ಚಿಕ್ಕ ಸುಂದರವಾದ  ಪಟ್ಟಣ ಕ್ರೈಸ್ಟ್ ಚರ್ಚ್ ಊರನ್ನು ಕ್ರಿಕೆಟ್ ಆಟಗಳ ನೇರಪ್ರಸಾರದಲ್ಲಿ ಬಾಲ್ಯದಿಂದ ಟಿವಿಯಲ್ಲಿ ನೋಡಿ ಇದು ದೊಡ್ಡ ನಗರ ಎಂದು ಭಾವಿಸಿದ್ದ ನಮಗೆ ಇದು ಇಷ್ಟು ಚಿಕ್ಕ ಊರೆಂದು ನೋಡಿ ಆಶ್ಚರ್ಯವಾಯಿತು. ಶಾಂತ ಪುಟ್ಟ ಊರಿನ ಪ್ರವಾಸೀ ತಾಣಗಳನ್ನು ಕಾಲ್ನಡಿಗೆಯಲ್ಲಿಯೇ ನೋಡಿಕೊಂಡು ಬರಬಹುದಿತ್ತು.

 ಪಟ್ಟಣದಲ್ಲಿ  ಕೆಲವು ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿದೆವು. ಟ್ರಾಮ್ ಪ್ರವಾಸದ ಮೂಲಕ ನಗರ ವೀಕ್ಷಣೆ ಮಾಡಿದೆವು.  ಟ್ರಾಮಿನ ಚಾಲಕ/ ಚಾಲಾಕಿ ಸುತ್ತ ಕಾಣುವ ಕಟ್ಟಡಗಳ ಬಗೆಗೆ ಮಾಹಿತಿಯನ್ನು ಕೊಡುತ್ತಾ ಕರೆದೊಯ್ಯುತ್ತಿದ್ದರು. ಒಮ್ಮೆ ಟಿಕೇಟು ತೆಗೆದುಕೊಂಡರೆ ಪೂರ್ತಿ ದಿನ ಎಲ್ಲಿ ಬೇಕೋ ಅಲ್ಲಿ ಇದನ್ನು ಹತ್ತಿಕೊಂಡು ಎಲ್ಲಿಬೇಕೋ ಅಲ್ಲಿ ಇಳಿಯಬಹುದಿತ್ತು. 2011 ರ ಭೂಕಂಪದಲ್ಲಿ ಬಹಳ ಹಾನಿಗೊಳಗಾದ ಊರು ಇದಂತೆ. ಈಗ ಕಾಣುವ ಪಟ್ಟಣ ಆ ಹಾನಿಯ ಆಘಾತವನ್ನು ಸಹಿಸಿ ಮೇಲೆದ್ದು ನಿಂತ ಪಟ್ಟಣವಂತೆ. ಅನೇಕ ಪ್ರವಾಸಿ ಆಕರ್ಷಣೆಗಳು ಇನ್ನೂ ದುರಸ್ತಿಯಲ್ಲಿರುವುದು ಕಂಡುಬಂತು.
  ಇಲ್ಲಿನ ದೊಡ್ಡ ಬೋಟಾನಿಕಲ್ ಉದ್ಯಾನ ಅಗಾಧವಾದ ಸಸ್ಯ ವೈವಿಧ್ಯ, ಪಕ್ಷಿಗಳ ಕಲರವದಿಂದ ಒಳ್ಳೆಯ ಅನುಭವವನ್ನು ಕೊಟ್ಟಿತು. ಸುಮಾರು 150 ವರ್ಷಗಳಿಗೂ ಮಿಕ್ಕಿ ಇತಿಹಾಸ ಇರುವ ಈ ಉದ್ಯಾನ ಸಂದರ್ಶಿಸಬೇಕಾದ ಸ್ಥಳ.
ಬೊಟಾನಿಕಲ್ ಉದ್ಯಾನ 
 ಇಲ್ಲಿಯೇ ನಾವು ಬಾಡಿಗೆ ಕಾರನ್ನು ಪಡೆದು ನಾವೇ ಚಲಾಯಿಸಿಕೊಂಡು ಇನ್ನುಳಿದ ನಮ್ಮ ಪ್ರವಾಸವನ್ನು ಮಾಡುವವರಿದ್ದೆವು. ಇದು ನಾವು  ದ್ವೀಪದಲ್ಲಿ  ಮುಂದೆ ಸಂದರ್ಶಿಸುವ ಪ್ರದೇಶಗಳಿಗೆ ಹೋಲಿಸಿದರೆ ಸ್ವಲ್ಪ ದೊಡ್ಡ ಪಟ್ಟಣವಾಗಿದ್ದರಿಂದ ಇಲ್ಲಿನ ಭಾರತೀಯ ದಿನಸಿ ಅಂಗಡಿಗೆ ಹೋಗಿ ಮುಂದಿನ ನಮ್ಮ ಪ್ರವಾಸಕ್ಕೆ ಬೇಕಾದ ಅಡಿಗೆಯ ಸಾಮಾನುಗಳ ಖರೀದಿಯನ್ನೂ ಇಲ್ಲಿ ಮಾಡಿ ಪ್ರವಾಸಕ್ಕೆ ತಯಾರಾದೆವು.

ಕ್ರೈಸ್ಟ್  ಚರ್ಚ್ to  ಟೆಕಾಪೂ:-

ಗೆರಾಲ್ಡಿನ್ ಪಟ್ಟಣ 
ಕ್ರೈಸ್ಟ್ ಚರ್ಚಿನಿಂದ ನಮ್ಮ ಮುಂದಿನ ತಾಣ ಟೆಕಾಪೂ ಸುಮಾರು 200 ಕಿ ಮಿ ದೂರದಲ್ಲಿತ್ತು. ರಸ್ತೆಗಳು ವ್ಯವಸ್ಥಿತವಾಗಿ ಒಳ್ಳೆಯ ಸ್ಥಿತಿಯಲ್ಲಿತ್ತು. ಇಲ್ಲಿನ ಜನರು ಸಂಚಾರಿ ನಿಯಮಗಳಿಗೆ ತುಂಬಾ ಪ್ರಾಶಸ್ತ್ಯ ಕೊಡುತ್ತಾರೆ ಎಂದು ನಮ್ಮ ಅನುಭವಕ್ಕೆ ಬಂತು. ವೇಗದ ಮಿತಿಯನ್ನು ಚಾಚೂ ತಪ್ಪದೇ ಪಾಲಿಸುವ ಜನರ ಶಿಸ್ತು ನಮಗೆ ಮೆಚ್ಚುಗೆಯಾಯಿತು. ಮಧ್ಯದಲ್ಲಿ ಮುಂದಿನ ವಾಹನವನ್ನು ದಾಟಿ ಮುಂದೆ ಹೋಗಲೆಂದೇ ರಸ್ತೆಯನ್ನು ಅಗಲ ಮಾಡಿಟ್ಟಿರುತ್ತಾರೆ. ವೇಗವಾಗಿ ಹೋಗಬೇಕಾದವರು ನಿಗದಿತ ಜಾಗದಲ್ಲಿ. ನಿಧಾನವಾಗಿ ಹೋಗುತ್ತಿರುವ ವಾಹನವನ್ನು ಹಿಂದಿಕ್ಕಿ ಹೋಗಬಹುದು. ಎಲ್ಲರೂ ನಿಯಮವನ್ನು ಪಾಲಿಸುವವರಾದ್ದರಿಂದ ಇಲ್ಲಿ ವಾಹನ ಚಾಲನೆ ಬಹಳ ಆಹ್ಲಾದಕರ ಅನುಭವ. ನ್ಯೂಜಿಲೆಂಡಿನ ರೋಡ್ ಟ್ರಿಪ್ ಬಗೆಗೆ ಬಹಳ ಕೇಳಿದ್ದ ನಮಗೆ ಅದರ ಅನುಭವ ನಿರಾಸೆಗೊಳಿಸಲಿಲ್ಲ.
ಬಣ್ಣ ಬದಲಿಸಿ ನಿಂತ ಮರಗಳು 
    ಇದೀಗ ಎಲೆ ಉದುರುವ ಕಾಲವಾದ್ದರಿಂದ ಮರಗಳು ಬಣ್ಣ ಬದಲಿಸಿಕೊಂಡು ರಸ್ತೆಯ ಇಕ್ಕೆಲ ವಿವಿಧ ಬಣ್ಣಗಳಿಂದ ಸುಂದರವಾಗಿ ಕಾಣುತ್ತಿತ್ತು. ದಾರಿಯಲ್ಲಿ ಸಿಕ್ಕಿದ  ಜೆರಾಲ್ಡಿನ್ ಮತ್ತು ಆಶ್ ಬರ್ಟನ್   ಚಂದದ ಪುಟ್ಟ ಪಟ್ಟಣಗಳು ನಮ್ಮ ಪ್ರವಾಸದ ಉಲ್ಲಾಸವನ್ನು ಹೆಚ್ಚಿಸಿತು. 


             ಮನೆಗಳು ರಸ್ತೆಯ ಪಕ್ಕದಲ್ಲೇ ಇದ್ದರೂ ಕಿಟಕಿಗಳಿಗೆ ಗ್ರಿಲ್ ಗಳೇ ಇರದೇ ಇರುವುದನ್ನು ನೋಡಿ ಇಲ್ಲಿ  ಅಪರಾಧಗಳ ಸಂಖ್ಯೆ ಬಹಳ ಕಡಿಮೆ ಇರಬಹುದೆನ್ನಿಸಿತು. ದೇಶದಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ದಾರಿಯಲ್ಲಿ ಜನಗಳು ವಿರಳವಾಗಿ  ಕಾಣಸಿಗುತ್ತಿದ್ದರು. 

ಟೆಕಾಪೂ ಸರೋವರ ಮತ್ತು ಪಟ್ಟಣ:-

ಟೇಕಾಪು ಸರೋವರ 
ದೊಡ್ಡ ಸರೋವರ ಟೆಕಾಪೂ ಹೆಸರಿನದೇ ಪಟ್ಟಣ. ಚಿಕ್ಕ ಚಂದದ ಊರು. ನಾವು ನಿಗದಿಗೊಳಿಸಿದ ನಮ್ಮ ಮನೆಯೂ ಅದಕ್ಕೆ ತಕ್ಕಂತೆ ಚೆನ್ನಾಗಿತ್ತು. ಇಂದಿನ ಹವಾಮಾನದ ಮುನ್ಸೂಚನೆಯಂತೆ ಭಾರೀ ಮಳೆ ಯಾಗುತ್ತಿತ್ತು. ಮಳೆ, ಚಳಿಗೆ ಎಲ್ಲ ವ್ಯವಸ್ಥೆ ನಮ್ಮ ಮನೆಯಲ್ಲಿತ್ತು. ಕೋಣೆಯನ್ನು ಬಿಸಿ ಮಾಡುವ ಹಿಟರುಗಳಲ್ಲದೇ ಎಲೆಕ್ಟ್ರಿಕ್ ಹೊದಿಕೆಗಳೂ ಇದ್ದವು. 
ನಮ್ಮ ಊಟ 
ನಮ್ಮ ಮನೆ 


ಮಳೆಯಲ್ಲಿ ಕೊಡೆ ಹಿಡಿದು ಹೋಗಿ ಮುಸ್ಸಂಜೆಯಲ್ಲಿ ಸರೋವರದ ತೀರಕ್ಕೆ ಹೋಗಿ ಅಗಾಧವಾದ ಜಲರಾಶಿಯನ್ನು ಕಣ್ತುಂಬಿ ಕೊಂಡು, ಇಲ್ಲಿನ ಮಾರುಕಟ್ಟೆಗೆ ಹೋಗಿ ಬೆಳಗಿನ ಉಪಾಹಾರಕ್ಕೆ ಬೇಕಾದ ಹಾಲು, ಬ್ರೆಡ್, ಹಣ್ಣುಗಳನ್ನು ಕೊಂಡುಕೊಂಡು ಬಂದೆವು. ನಮ್ಮ ಸುತ್ತಮುತ್ತಲಿನ ಮನೆಗಳಲ್ಲೆಲ್ಲ ನಮ್ಮಂತಹ ಪ್ರವಾಸಿಗರೇ ಇದ್ದರು. ಇನ್ನೂ ಕೆಲವರು ನಮ್ಮಂತೆ ಸಾಮಾನು ತರುತ್ತಿರುವುದು ಕಂಡಿತು. ಎರಡು ಖಂಡಗಳನ್ನು ದಾಟಿ ಯಾವುದೋ ಅಪರಿಚಿತ ದೇಶದಲ್ಲಿ ಅಕ್ಕ ತಂಗಿಯರ ಸಂಸಾರ ಮನೆ ಮಾಡಿಕೊಂಡು ದಿನಸಿ ತಂದು ಅಡಿಗೆ ಮಾಡಿ ಊಟಮಾಡಿದ್ದು  ಒಂದು ಅನನ್ಯ ಅನುಭವ. 
      ಈ ಪ್ರದೇಶವೇ ಆಕಾಶ ವೀಕ್ಷಣೆಗೆ ಮೀಸಲಾಗಿರುವ ಪ್ರದೇಶ. ಹಾಗಾಗಿ ಇಲ್ಲಿ ಬೆಳಕಿನ ಮಾಲಿನ್ಯವಾಗದ ಹಾಗೆ ತುಂಬಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ರಾತ್ರಿ ರಸ್ತೆಯ ದೀಪಗಳಿರುವುದಿಲ್ಲ. ಇದು ಪ್ರಪಂಚದ ೧೭ ಇಂತಹ ಆಕಾಶ ವೀಕ್ಷಣೆಯ ತಾಣಗಳಲ್ಲಿ ಒಂದು. ಚಳಿಗಾಲದಲ್ಲಿ  ಇಲ್ಲಿಯಾ ಆಕಾಶ ಅತ್ಯಂತ ಸುಂದರವಾಗಿರುತ್ತದಂತೆ. ಶುಭ್ರ ಆಕಾಶವಿದ್ದರೆ ಇಲ್ಲಿ ರಾತ್ರಿ ಆಕಾಶವನ್ನು ನೋಡುವುದು ಒಂದು ವಿಶಿಷ್ಟವಾದ ಅನುಭವ. ಮೋಡ ಮತ್ತು ಮಳೆಯ ವಾತಾವರಣದ ಕಾರಣ ನಮಗೆ ಆಕಾಶ ವೀಕ್ಷಣೆಯ  ಅನುಭವವಾಗಲಿಲ್ಲ.

ಆರೋಕಿ /ಮೌಂಟ್ ಕುಕ್:-

ಹೂಕರ್ ಕಣಿವೆಯ ದಾರಿಯಲ್ಲಿ ಕಾಣುವ ಅರೋಕಿ ಪರ್ವತ 
ದಕ್ಷಿಣ ಅಲ್ಪ್ಸ್ ಪರ್ವತ ಶ್ರೇಣಿಯ ಅತ್ಯಂತ ಎತ್ತರದ ಪರ್ವತ ಆರೋಕಿ, ಇದು  ಇದರ ಮಾವೊರಿ ಹೆಸರು. ಅದಕ್ಕೆ ಇಂಗ್ಲಿಷ್ ಹೆಸರು ಮೌಂಟ್ ಕುಕ್. ಟೆಕಾಪೂ ಪಟ್ಟಣದಿಂದ 110 ಕಿ. ಮಿ ದೂರದಲ್ಲಿರುವ ಇದಕ್ಕೆ ಕಾರು ಚಲಾಯಿಸಿಕೊಂಡು ಹೋಗಲು ಉತ್ತಮವಾದ ರಸ್ತೆ , ದಾರಿಯಲ್ಲಿ ತಂಗುದಾಣಗಳು, ಮಾರ್ಗಸೂಚಿಗಳೆಲ್ಲವೂ ಇದೆ. ನಿನ್ನೆ ರಾತ್ರಿಯಿಂದಲೇ ಸುರಿಯಿತ್ತಿದ್ದ ಮಳೆ ಬೆಳಗ್ಗಾದ ಮೇಲೆ ಸ್ವಲ್ಪ ಕಡಿಮೆಯಾಗಿತ್ತು. ಮೋಡ ಕವಿದಿದ್ದರೆ ಪರ್ವತದ ನೋಟ ನಮಗೆ  ಸಿಗುವುದಿಲ್ಲ ಎಂಬ ಆತಂಕ. ನಾವು ಹೋಗುತ್ತಿದ್ದಂತೆ ವಾತಾವರಣ ತಿಳಿಯಾಗತೊಡಗಿತು. ಟೆಕಾಪೂ ಸರೋವರ, ಅದರ ದಡದಲ್ಲಿರುವ ಮೊನಾಸ್ಟರಿಯೆಲ್ಲ ಸುಂದರವಾಗಿ ಕಾಣತೊಡಗಿತು. ಸ್ವಲ್ಪ ಮುಂದೆ ಹೋದಂತೆ ಇನ್ನೊಂದು ವಿಶಾಲವಾದ ಪುಕಾಕಿ ಸರೋವರ ಹಿಮಾಚ್ಚಾಡಿತ ಬೆಟ್ಟಗಳ ಹಿನ್ನೆಲೆಯಲ್ಲಿ ಮನಮೋಹಕವಾಗಿ ಕಾಣುತ್ತಿತ್ತು. ಈ ಸರೋವರಗಳಿಗೆ ನೀರು ಹಿಮದ ಬೆಟ್ಟಗಳಿಂದ ಬರುತ್ತದೆ.  ಮುಂದುವರಿದು ಹೋಗುತ್ತಿದ್ದಂತೆ ಹಸಿರು ಗುಡ್ಡಗಳು, ಇವುಗಳ ಎಡೆಯಿಂದ ಧುಮುಕುವ ಜಲಪಾತಗಳು,, ಇನ್ನೊಂದು ಕಡೆ ಬಿಸಿಲು-ಮೋಡಗಳ ಕಣ್ಣುಮುಚ್ಚಾಲೆಯಲ್ಲಿ ಬಣ್ಣ ಬದಲಿಸುವ ಸರೋವರಗಳು, ನಡುನಡುವೆ ಹರಿಯುತ್ತಿರುವ ನದಿಗಳು- ಪರಿಸರದ ಭವ್ಯತೆ ನಮ್ಮೆದುರು ಅನಾವರಣಗೊಳ್ಳುತ್ತಾ ಹೋಯಿತು. ಆರೋಕಿ ಗ್ಲೇಶಿಯರ್ ತಲುಪಿ ಕಾರಿನಿಂದ ಇಳಿದು ನಡೆದು ಹೂಕರ್ ವ್ಯಾಲಿಯ ಚಾರಣದ ದಾರಿಯಲ್ಲಿ ಸಾಗತೊಡಗಿದೆವು. ಹೂಕರ್ ವ್ಯಾಲಿ ಚಾರಣದ ದಾರಿ ಇಲ್ಲಿನ ಅತ್ಯಂತ ಪ್ರಸಿದ್ಧ ಕಾಲ್ನಡಿಗೆಯ ದಾರಿ. ಹೆಸರಿಗೆ ತಕ್ಕಂತೆ ವಿಶಿಷ್ಟವಾಗಿದೆ. ತುಂಬಾ ಕಷ್ಟಕರ ಎನ್ನಿಸದ ಈ ನಡಿಗೆಯನ್ನು ಚಾರಣದ ಅಭ್ಯಾಸ ಇಲ್ಲದವರು ಮಾಡಬಹುದು. ನಡೆಯುತ್ತಾ ಹೋದಂತೆ ಸುತ್ತಲಿನ ಪರಿಸರ ಒಂದೊಂದು ತಿರುವಿನಲ್ಲಿ ಒಂದೊಂದು ಹೊಸಮುಖವನ್ನು ತೋರಿಸುತ್ತಾ ಸಾಗುತ್ತದೆ. ನಡುವೆ ಸಿಗುವ ತೂಗು ಸೇತುವೆ ಅವಿಸ್ಮರಣೀಯ ದೃಶ್ಯದ ಸೊಬಗನ್ನು ಕೊಡುತ್ತದೆ. 
ಪುಕಾಕಿ ಸರೋವರದ ವಿಹಂಗಮ ನೋಟ 
ಇಲ್ಲಿ ಆರೋಕಿ ಪರ್ವತ ಶಿಖರದ ತುತ್ತತುದಿಯ ದರ್ಶನ ನಮಗಾಯಿತು. ಆ ಪರ್ವತದಿಂಡುತಾದ ಸರೋವರ, ಅದರಿಂದ ರಭಸವಾಗಿ ಹರಿದು ಬರುತ್ತಿರುವ ನೀರು- ಇವುಗಳ ಸೌಂದರ್ಯ ವನ್ನು ಸಾಧ್ಯವಾದಷ್ಟು ಕಣ್ಣು ತುಂಬಿಕೊಳ್ಳುತ್ತಾ ಮನಸ್ಸು ಅರಿವೇ ಇಲ್ಲದಂತೆ ಓಂ ನಮಃ ಶಿವಾಯ ಎಂದು ಪ್ರಕೃತಿಯ ಈ ಭವ್ಯತೆಗೆ ನಮಿಸಿತು. ಇತ್ತೀಚೆಗೆ ಓದಿದ್ದ  'ದೇವಭೂಮಿಗೊಂದು ಪಯಣ ಪುಸ್ತಕದಲ್ಲಿದ್ದ ಮಾನಸಗಂಗೋತ್ರಿಯ ವರ್ಣನೆ ನನ್ನ ಮನಸ್ಸಿಗೆ ಬಂತು. ಅದೂ ಹೀಗೆಯೇ ಇರಬಹುದೆನಿಸಿತು. ಹೀಗೆಯೇ ಇಲ್ಲಿಯೇ ಇದ್ದುಬಿಡೋಣ ಎನ್ನುವಷ್ಟು ಮೋಡಿ ಆ ಪರಿಸರ ನಮ್ಮ ಮೇಲೆ ಮಾಡಿತ್ತು. 
ಹಿಮ ಸರಿಸಿ ನಮಗೆ ದರ್ಶನ ಕೊಟ್ಟ ಆರೋಕಿ ಪರ್ವತ ಶಿಖರ 

ತೆ ಅನೌ:-

ದಕ್ಷಿಣ ನ್ಯೂಜಿಲೆಂಡಿನ ಇನ್ನೊಂದು ಸುಂದರ ಶಾಂತ ಪಟ್ಟಣ ತೆ ಅನೌ. ಇದು ಫಿಯೋರ್ಡ್ ಲ್ಯಾಂಡ್ ನೇಷನಲ್ ಪಾರ್ಕಿನ ಭಾಗ. ಈ ಊರು ಫಿಯೋರ್ಡ್ ಲಾಂಡಿನ ದ್ವಾರದಂತಿದ್ದು ಮುಂದಿನ ಎಲ್ಲ ಚಟುವಟಿಕೆಗಳನ್ನು ಮಾಡಲು ಅನುಕೂಲವಾದ ಜಾಗದಲ್ಲಿರುವುದರಿಂದ ಇಲ್ಲಿ ಉಳಿಯಲು ವಿವಿಧ ತರಹದ ಹೋಟೆಲುಗಳು ದೊರೆಯುತ್ತದೆ. ವಿಶಾಲವಾದ  ತೇ ಅನೌ ಸರೋವರ ನ್ಯೂಜಿಲಾಂಡಿನ ಎರಡನೆಯ ಅತಿ ದೊಡ್ಡ ಸರೋವರವಾಗಿದೆ. ಸರೋವರಕ್ಕೆ ಹೊಂದಿಕೊಂಡು ಇರುವ ಈ ಊರಿನಲ್ಲಿ ನಾವಿದ್ದ  ಮರಾ ಕುರಾ .ಮೋಟಲ್ ಸರೋವರದ ತೀರದಲ್ಲಿ ಅತ್ಯಂತ ಸುಂದರವಾದ ದೃಶ್ಯವನ್ನು ನಾವು ದಿನವಿಡೀ ಆಸ್ವಾದಿಸುವಂತೆ ಮಾಡಿತು. ಸಂಜೆಯ ಸರೋವರದ ಪಕ್ಕದ ನಡಿಗೆ, ಆ ರಾತ್ರಿ ರೂಮಿನಲ್ಲಿ ಅಡಿಗೆ ಮಾಡಿ ಸರೋವರದ, ಆಕಾಶದ ನೋಟವನ್ನು ಸವಿಯುತ್ತಾ ಮಾಡಿದ ಊಟ ಮರೆಯಲಾರದ ಅನುಭವ. ಇಲ್ಲಿನ ಹಕ್ಕಿಗಳ ಉದ್ಯಾನವು ಪಕ್ಷಿ ವೀಕ್ಷಕರ ಮೆಚ್ಚಿನ ತಾಣ. 
ತೇ ಅನೌ ಸರೋವರ 
    ಬೆಳಗ್ಗೆದ್ದು ಸರೋವರದ ಮೇಲಿನಿಂದ ಹಾರಿ ಸುತ್ತಲಿನ ವೈಮಾನಿಕ ದೃಶ್ಯವನ್ನು ತೋರಿಸುವ ಸೀ-ಪ್ಲೇನ್(sea plane) ನಲ್ಲಿನ ಸವಾರಿ ಒಂದು ವಿಶಿಷ್ಟವಾದ ಅನುಭವ. ಹೊರಗಿನಿಂದ ತುಂಬಾ ಚಿಕ್ಕದಾಗಿ ಕಾಣುತ್ತಿದ್ದ ವಿಮಾನದೊಳಗೆ ಚಾಲಕರಲ್ಲದೆ ನಾಲ್ಕು ಜನ ಕುಳಿತುಕೊಳ್ಳುವ ಜಾಗವಿತ್ತು. ಹತ್ತಿ ಕುಳಿತ ನಂತರ ನೀರಿನ ಮೇಲೆ ಸ್ವಲ್ಪ ಹೊತ್ತು ಚಲಿಸಿ ಆಕಾಶಕ್ಕೆ ಜಿಗಿಯುವ ವಿಮಾನದಿಂದ ಸುತ್ತಲಿನ ಪ್ರದೇಶದ ಸೌಂದರ್ಯವನ್ನು ಮೇಲಿನಿಂದ ನೋಡಿ ಖುಷಿಪಡಲು ಸಾಧ್ಯವಾಗಿಸುತ್ತದೆ. ನಮ್ಮ ರಾಜಕಾರಣಿಗಳು ನೆರೆಪೀಡಿತ ಪ್ರದೇಶದಲ್ಲಿ ಮಾಡುವ ವೈಮಾನಿಕ ಸರ್ವೇಕ್ಷಣೆಯನ್ನು ನೆನಪಾಯಿತು. ಅವರಿಗೂ ಹೀಗೆಯೇ ಮೋಜಿನ ಸವಾರಿಯಾಗಿರಬಹುದು ಎನ್ನಿಸಿ ಮನಸ್ಸಿಗೆ ಸ್ವಲ್ಪ ಕಸಿವಿಸಿಯೂ ಆಯಿತು. 
       
ನಮ್ಮ ವಿಮಾನ 

ಸುಮಾರು 20 ನಿಮಿಷಗಳಲ್ಲಿ ಸುತ್ತಲಿನ ಪ್ರದೇಶಗಳ ಬಗೆಗೆ ಮಾಹಿತಿಯನ್ನು ಕೊಡುತ್ತ ಸಾಗಿದ ನಮ್ಮ ಚಾಲಕಿಯು  ವಿಮಾನ ಚಾಲನೆ ಎಷ್ಟು ಸುಲಭ ಎನ್ನಿಸುವಂತೆ ಈ ಸವಾರಿಯನ್ನ ಮುಗಿಸಿದಳು. ಅವಳೇ ನಮಗೆ ಟಿಕೇಟು ನೀಡಿ ಅವಳೇ ಕರೆದುಕೊಂಡು ಹೋಗಿ ಕರೆದುಕೊಂಡು ಬಂದಳು. ಅವಳದ್ದೊಂದು ಪುಟ್ಟ ನಾಯಿ ಅವಳ ಸಂಗಾತಿ. ಅದು ಅವಳೊಂದಿಗೆ ಪ್ರತಿದಿನ ಬಂದು ಅವಳು ಸವಾರಿಗೆ ಹೋದಾಗ ಆಫೀಸು ಕಾಯುತ್ತದೆ. ಅಲ್ಲೇ ಸುತ್ತಮುತ್ತಲು ಓಡಾಡಿಕೊಂಡು ಹತ್ತಿರ ಬರುವ ಬಾತುಕೋಳಿಗಳು ಓಡಿಸುತ್ತಾ ಮೋಜಿನ ಜೀವನ ನಡೆಸಿಕೊಂಡಿದೆ.

ವಿಮಾನ ಚಾಲಕಿಯ ನಾಯಿಯೊಂದಿಗೆ 



ಉಪಸಂಹಾರ:-

ನಮ್ಮ ಆರು ಜನರ ಗುಂಪು ೪-೫ ತಿಂಗಳ ತಯಾರಿ, ಚರ್ಚೆ, ಯೋಜನೆಗಳ ಮೂಲಕ ಬೆಂಗಳೂರು ಮತ್ತು ಮಸ್ಕತ್ತಿನಿಂದ ಹೊರಟು ದೂರದ ದೇಶ ನ್ಯುಜಿಲ್ಯಾಂಡನ್ನು ನೋಡಲು ಹೊರಟಿದ್ದೆವು. ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ನಮ್ಮೆಲ್ಲರ ಆಸಕ್ತಿ ಯಂತೆ ನೋಡುವ ಜಾಗಗಳನ್ನು, ಉಳಿಯುವ ತಾಣಗಳನ್ನು ನಿಗದಿಗೊಳಿಸಿ ಇಲ್ಲಿಗೆ ಬಂದೆವು. ದಕ್ಷಿಣ ದ್ವೀಪವನ್ನು ಮೊದಲು ಸುತ್ತಿದೆವು. ನಂತರ ಉತ್ತರ ದ್ವೀಪದ ಸುತ್ತಾಟ ಎಲ್ಲವೂ ನಾವು ಅಂದುಕೊಂಡಂತೆ ನಡೆಯಿತು.
     ನಾವು ಹೊರಡುವಾಗ ನಮ್ಮ ಒಮಾನ್ ಏರ್ ವಿಮಾನದ ಮೂಲಕ ದೊಹಾಕ್ಕೆ ಹೋಗಿ ಅಲ್ಲಿಂದ ಆಕ್ಲ್ಯಾಂಡಿಗೆ  ಹೋಗುವವರಿದ್ದೆವು. ಮಸ್ಕತ್ತಿನಿಂದ ದೋಹಾಗೆ ಹೋದರೆ ಅಲ್ಲಿಂದ ಮುಂದಿನ ವಿಮಾನದಲ್ಲಿ ನಮ್ಮ ಮುಂಗಡ ಬುಕಿಂಗ್ ಇಲ್ಲ ಎನ್ನುವ ಆಘಾತಕಾರಿ ಸುದ್ದಿಯೊಂದಿಗೆ ನಮ್ಮ ಪ್ರವಾಸ ಆರಂಭವಾದರೂ ಹೇಗೋ ನಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡು ಮುಂದಿನ ವಿಮಾನ ಹತ್ತಿ ಸರಿಯಾದ ಸಮಯಕ್ಕೆ ಕ್ರೈಸ್ಟ್ ಚರ್ಚ್ ತಲುಪಿ ನಮ್ಮ ಪ್ರವಾಸ ಆರಂಭಿಸಿದ್ದೆವು. ಕ್ರೈಸ್ಟ್ ಚರ್ಚ್ ನಿಂದ ಟೇಕಾಪೋಗೆ ಹೋಗುವಾಗ ನಮ್ಮ ಪಾಸ್ಪೋರ್ಟ್ ಮತ್ತು ಲ್ಯಾಪ್ಟಾಪ್ ಇದ್ದ ಬ್ಯಾಗನ್ನು ಹೋಗುವ ಅವಸರದಲ್ಲಿ ನಮ್ಮ ಹೋಟೆಲಿನ ಲಾಬಿಯಲ್ಲಿ ಬಿಟ್ಟು ಹೋಗಿದ್ದು ನಮ್ಮ ಗಮನಕ್ಕೆ ಬಂದಿದ್ದು ಆ ದಿನ ರಾತ್ರಿ ಮಲಗುವಾಗ! ಏನು ಮಾಡುವುದು ಮತ್ತೆ ೨೦೦ ಕಿ ಮೀ ಕಾರು ಚಲಾಯಿಸಿಕೊಂಡು ಮರು ದಿನ ಬೆಳಗ್ಗೆ ಬೇಗ ಎದ್ದು ಟೇಕಾಪೋದಿಂದ ಮತ್ತೆ ಮರಳಿ ಹೋಗಿ ಬಿಟ್ಟು ಬಂದ ಸಾಮಾನನ್ನು ಮರಳಿ ತಂದುಕೊಂಡೆವು.ಮತ್ತೆ ಅರ್ಧ ದಿನ ವ್ಯರ್ಥವಾಗಿ ಕಳೆಯಬೇಕಾದರೂ ಇಲ್ಲಿನ ರೋಡ್ ಟ್ರಿಪ್ಪಿನ ಅನುಭವ ಜಾಸ್ತಿಯಾಯಿತೆಂದು ಸಮಾಧಾನ ಮಾಡಿಕೊಂಡೆವು. ದಕ್ಷಿಣ ದ್ವೀಪದ ಪ್ರವಾಸ ಮುಗಿಸಿ ಕ್ವೀನ್ಸ್ ಟೌನಿನ್ನಿಂದ  ಆಕ್ಲ್ಯಾಂಡಿಗೆ ಹೋಗಲು ಬೆಳಗ್ಗೆ ೧೦ ಗಂಟೆಗೆ ವಿಮಾನ ನಿಲ್ದಾಣ ತಲುಪಿದವರು ಸಂಜೆ ೫,೩೦ರ ವಿಮಾನದಲ್ಲಿ ಆಕ್ಲ್ಯಾಂಡಿಗೆ ಹೋಗಬೇಕಾಯಿತು. ತಾಂತ್ರಿಕ ಕಾರಣದಿಂದ ನಮ್ಮ ವಿಮಾನ ಮತ್ತೆ ಮತ್ತೆ ವಿಳಂಬವಾಗಿತ್ತು. ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕುಳಿತು ಊಟ, ತಿಂಡಿಯ ಚೀಟಿಗಳನ್ನು ಪಡೆದು ಕಾಲ ಕಳೆಯಬೇಕಾಯಿತು. ಹಾಗೆ ಕುಳಿತಾಗ ನನ್ನ ಒಬ್ಬಳು ಬ್ಯಾಡ್ಮಿಂಟನ್ ಗೆಳತಿ ಎಂಟು ವರ್ಷಗಳ ನಂತರ ಇಲ್ಲಿ ಭೇಟಿಯಾಗಿದ್ದು ಒಂದು ವಿಶೇಷ. ಅವಳು ಮಸ್ಕತ್ತಿನಲ್ಲಿ ನಮ್ಮೊಡನೆ ಇದ್ದವಳು ಮಸ್ಕತ್ ಬಿಟ್ಟು ಅಮೆರಿಕಾದಲ್ಲಿ ಕೆಲವು ವರ್ಷ ನೆಲಸಿ ಈಗ ತನ್ನ ತಾಯ್ನಾಡು ಮಲೇಷಿಯಾದಲ್ಲಿ ನೆಲಸಿದ್ದಾಳಂತೆ. ಅವಳೂ ಅವಳ ಪರಿವಾರದೊಡನೆ ಪ್ರವಾಸಕ್ಕೆ ಬಂದಿದ್ದಳು. 
                ಈಗ ಎಲ್ಲವೂ ಅಂತರ್ಜಾಲದ ಯುಗ. ನಾವು ಹೊಸ ದೇಶ, ನೆಲಕ್ಕೆ ಇಳಿದು ಮೊದಲು ಮಾಡುವ ಕೆಲಸ ಅಲ್ಲಿನ ಒಂದು ಮೊಬೈಲ್ ಸಿಮ್ ತೆಗೆದುಕೊಂಡು ಅಂತರ್ಜಾಲವನ್ನು ನಮ್ಮ ಫೋನಿನಲ್ಲಿ ಜೀವಂತಗೊಳಿಸುವುದು, ಮುಂದೆ ಈ ಹೊಸ ನೆಲದ ನಮ್ಮ ಮಿತ್ರ, ಮಾರ್ಗದರ್ಶಕ ನಮ್ಮ ಕೈಯಲ್ಲಿರುವ ಮೊಬೈಲ್ ಆಗಿರುತ್ತದೆ. ಹಾಗಾಗಿ ಹೊಸ ಜನರೊಂದಿಗೆ ಮಾತನಾಡುವ ಅಗತ್ಯ ಬೀಳುವುದು ಬಹಳ ಕಡಿಮೆ. ನಾವು ಎಲ್ಲಿರುವುದು, ಅಲ್ಲಿಗೆ  ಹೇಗೆ ಹೋಗುವುದು, ಯಾವ ಹೋಟೆಲಿನಲ್ಲಿ ತಿಂಡಿ ತಿನ್ನಬೇಕು, ಏನೆಲ್ಲಾ ನೋಡಬೇಕು  ಎಲ್ಲವೂ ಮೊಬೈಲ್ ನೋಡಿಯೇ ತಿಳಿಯುತ್ತದೆ! ಏನಾದರೂ ತಿಳಿಯದಿದ್ದರೆ ಯಾರನ್ನಾದರೂ ಕೇಳಲು  ಹೋರಡುತ್ತಿದ್ದ ನಾನು, ಅಷ್ಟರಲ್ಲಿ ಮೊಬೈಲ್ ನೋಡಿಯೇ ಉತ್ತರ ಪಡೆಯುತ್ತಿದ್ದ ನನ್ನ ಪರಿವಾರ; ಬರಬರುತ್ತಾ ಮನುಷ್ಯರ ನಡುವಿನ ಸಂಪರ್ಕವನ್ನೇ ಈ ಅಂತರ್ಜಾಲ, ನಕಲಿ ಬುದ್ದಿಮತ್ತೆ ನುಂಗಿಹಾಕುತ್ತದೆ ಎನ್ನಿಸಿತು. 
       ದೊಡ್ಡ ದೇಶ ನ್ಯೂಜಿಲಾಂಡನ್ನು ೧೦ ಹತ್ತು ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ನೋಡಿ ಈ ಬಾರಿಯ ಪ್ರವಾಸ ಮುಗಿಸಿದ್ದೆವು.  ಸಪರಿವಾರವಾಗಿ ಇನ್ನೊಂದು ದೇಶವನ್ನು ಪ್ರವಾಸ ಮಾಡಿದ ಅನುಭವಕ್ಕೆ, ಅವಕಾಶಕ್ಕೆ ಅಭಿನಂದನೆ ಸಲ್ಲಿಸುತ್ತಾ ಈ ಪ್ರವಾಸ ಮುಗಿಸಿದೆ. ಒಟ್ಟಿನಲ್ಲಿ ಹತ್ತು ಹಲವು ಹೊಸ ಅನುಭವಗಳೊಂದಿಗೆ ಇನ್ನೊಮ್ಮೆ ಇಲ್ಲಿಗೆ ಬರಬೇಕು ಎಂಬ ಆಸೆಯನ್ನು ಉಳಿಸಿದ  ಒಂದು ವಿಶಿಷ್ಟ ಪ್ರವಾಸವಾಗಿ ನ್ಯೂಜಿಲಾಂಡ್ ನನ್ನ ನೆನಪಿನಲ್ಲಿ ಯಾವಾಗಲೂ ಉಳಿಯುತ್ತದೆ. 
 

ಲೇಖನ: ಸುಧಾ ಶಶಿಕಾಂತ್ , ಮಸ್ಕತ್ 

Published in Desiswara NRI Edition of Udayavani on 17-05-2025