ಮಂಗಳವಾರ, ನವೆಂಬರ್ 25, 2025

ಭಾಗ 4- ನಮ್ಮ ಭಾಷೆ , ನಮ್ಮ ಹೆಮ್ಮೆ


"ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್" -
ಕವಿರಾಜಮಾರ್ಗ (9ನೆಯ ಶತಮಾನ)

ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣಿತಮತಿಗಳ್- ಕವಿರಾಜಮಾರ್ಗ(9ನೆಯ ಶತಮಾನ)

ನೆನೆವುದೆನ್ನ ಮನ  ಬನವಾಸಿ (ಕರ್ಣಾಟ) ದೇಶಮ್- ಆದಿಕವಿ ಪಂಪ(10ನೆಯ ಶತಮಾನ)

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು- ಕುವೆಂಪು(20ನೆಯ ಶತಮಾನ)

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು (21ನೆಯ ಶತಮಾನ)

ನಮ್ಮ ನಾಡು ಭಾಷೆಯ ಬಗೆಗೆ ಹೆಮ್ಮೆಯನ್ನು ತರಿಸುವ, ಸುಮಾರು ಕ್ರಿ.ಶ 9ನೆಯ ಶತಮಾನದಿಂದ ಇಂದಿನ 21ನೆಯ ಶತಮಾನದ ಕಾಲಘಟ್ಟದವರೆಗೆ ಹರಡಿ ಕೊಂಡಿರುವ ಘೋಷಣೆಗಳನ್ನು  ಕೇಳಿದೊಡನೆ ನಮ್ಮ ಭಾಷಾಭಿಮಾನ ನಮ್ಮಲ್ಲಿ ಜಾಗ್ರತಗೊಳ್ಳುತ್ತದೆ. ನಮ್ಮ ಭಾಷೆಯ ಬಗೆಗೆ ನಮ್ಮ ಹೆಮ್ಮೆ ಉಕ್ಕುತ್ತದೆ.

2000 ವರ್ಷಕ್ಕೂ ಮಿಕ್ಕಿದ ಇಂತಹ ಭವ್ಯ ಪರಂಪರೆಯಿರುವ  ಕನ್ನಡ ಭಾಷೆಯ ಮತ್ತು ಸಂಸ್ಕ್ರತಿಯ ಹಿನ್ನೆಲೆಯುಳ್ಳ ಅದರ ವಾರಿಸುದಾರರಾಗುರುವ ನಾವೆಲ್ಲ  ಆ ಪರಂಪರೆಯನ್ನು ಮುನ್ನೆಡೆಸಲು ಯೋಗ್ಯತೆಯನ್ನು ಗಳಿಸಿದರೆ ಮಾತ್ರ ಅದರ ನಿಜವಾದ ಬೆಲೆ ನಮಗೆ ಅರ್ಥವಾಗುತ್ತದೆ. ನಾನು ಇತ್ತೀಚೆಗೆ ಭಾಗವಹಿಸುತ್ತಿದ್ದ ಒಂದು ಸಭೆಯಲ್ಲಿ ಅನೇಕ ಭಾಷಣಕಾರರು ನಮ್ಮ ಭಾಷೆಯನ್ನು ಉಳಿಸುವ ಬೆಳೆಸುವ ಬಗೆಗೆ ಭಾಷಣಗಳನ್ನು ಮಾಡುತ್ತಿದ್ದರು ಘೋಷಣೆ ಗಳನ್ನು ಕೂಗುತ್ತಿದ್ದರು. ಈ ತರಹದ ಘೋಷಣೆಗಳು ಇತ್ತೀಚೆಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ನವೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಭಾಷೆಯ ಉಳಿವಿಗೆ ಇಂತಹ ಘೋಷಣೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ

        ಕನ್ನಡದ ಮೊದಲ ಲಿಖಿತ ದಾಖಲೆ ಹಲ್ಮಿಡಿ ಶಾಸನದ ಆಧಾರದ ಮೇಲೆ ಹೇಳುವುದಾದರೆ ನಮ್ಮ ಭಾಷೆ ಬರೆಯುವಷ್ಟು , ಆಡಳಿತ ಭಾಷೆಯಾಗುವಷ್ಟು ಸಾಮರ್ಥ್ಯ ಪಡೆದೇ 1500 ವರ್ಷಗಳಾಗಿವೆ. ಅದಕ್ಕೂ ಮೊದಲು ಅದು ಎಷ್ಟು ವರ್ಷಗಳಿಂದ ಮಾತನಾಡುತ್ತಿದ್ದರು ಎನ್ನುವುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ.  ಜನರ ಆಡು ಮಾತಿನಲ್ಲಿ, ಜನಪದ ಹಾಡಿನಲ್ಲಿ, ಜಾನಪದ ಕಲೆಗಳಲ್ಲಿ ಭಾಷೆ ಸಹಜವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಿರುತ್ತದೆ. ಅಂದರೆ ಯಾರ ಸಹಾಯವೂ ಇಲ್ಲದೇ ತನ್ನಲ್ಲಿರುವ ಶಕ್ತಿಯಿಂದ ಭಾಷೆ ತಾನಾಗಿ ಇಷ್ಟು ಸಹಸ್ರಾರು ವರ್ಷ ಭವ್ಯವಾಗಿ ಬೆಳೆದು ಬಂದಿದೆ. 

ಒಬ್ಬ ಮನುಷ್ಯನ ಜೀವಿತಾವಧಿ ಹೆಚ್ಚೆಂದರೆ ನೂರು ವರ್ಷ. ಭಾಷೆಯ ಇತಿಹಾಸಕ್ಕೆ ಹೋಲಿಸಿದರೆ ನೂರು ವರ್ಷ ಅತ್ಯಂತ ಕಡಿಮೆ. ಈ ಭಾಷೆಯನ್ನು ಉಳಿಸಲು ನಾವು ಯಾರೂ ಅಲ್ಲ. ಈಗ ನಮಗೆ ಅದನ್ನು ಬಳಸುವ, ಅದರ ಭವ್ಯತೆಯನ್ನು ಮನಗಾಣುವ ಅಭಿಮಾನ ಶೂನ್ಯತೆ ತುಂಬಿದ್ದರೆ ಅದು ನಮ್ಮ ನಷ್ಟವೇ ಹೊರತು ಆ ಭಾಷೆಯ, ಪರಂಪರೆಯ ನಷ್ಟವಲ್ಲ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಕನ್ನಡ ಅಥವಾ ಪ್ರಪಂಚದ ಯಾವುದೇ ಭಾಷೆ ಬೆಳೆಯಬೇಕಾದರೆ ಅದು ಜನರ ದೈನಂದಿನ ಜೀವನದಲ್ಲಿ ಬಳಕೆಯಾಗಬೇಕು, ಮಕ್ಕಳು ಬೆಳೆಯುವಾಗ ಅವರು ಬೌದ್ಧಿಕವಾಗಿ ಆ ಭಾಷೆಯಲ್ಲಿ ಯೋಚಿಸಲು, ಚಿಂತಿಸಲು ತೊಡಗಬೇಕು. ಅವಾಗ ಮಾತ್ರ ಭಾಷೆ ಮುಂದಿನ ತಲೆಮಾರುಗಳಿಗೆ ಹರಿಯುತ್ತದೆ.  ನಮ್ಮ ಬೌದ್ಧಿಕ ಬೆಳವಣಿಗೆ ನಾವು ಪರ ಭಾಷೆಯಲ್ಲಿ ಮಾತನಾಡಿದಾಗ ಮಾತ್ರವೆಂದು ಜನ ಯೋಚಿಸತೊಡಗಿದಾಗ ಭಾಷೆ ಬಲಹೀನವಾಗುತ್ತದೆ. ಕನ್ನಡಿಗರು ಭಾಷೆಯ ಬಗೆಗೆ ಅಭಿಮಾನ ಶೂನ್ಯರು ಎನ್ನುವ ಅಭಿಮತ ಈಗ ಎಲ್ಲ ಕಡೆ ಇದೆ. ಹಾಗಾಗಿ ಕನ್ನಡಿಗರಾಗಿ ನಮ್ಮೆಲ್ಲರ ಮೊದಲ ಕರ್ತವ್ಯ ನಮ್ಮ ಮಕ್ಕಳಿಗೆ ನಾವು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಕನ್ನಡ ಮಾತನಾಡಲು, ಓದಲು ಬರೆಯಲು ಕಲಿಸುವುದು. ಮನೆಯಲ್ಲಿ ಖಡ್ಡಾಯವಾಗಿ ಕನ್ನಡ ಮಾತನಾಡುವುದು. ಇಷ್ಟು ಮಾಡಿದರೆ ಉಳಿದದ್ದೆಲ್ಲ ತಂತಾನೇ ಆಗುತ್ತದೆ. ಕನ್ನಡ ಭಾಷೆ ಮುಂದುವರಿಯುತ್ತದೆ, ಬೆಳೆಯುತ್ತದೆ.

ಈಗ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಪರಭಾಷೆಗಳ ಪ್ರಾಬಲ್ಯ, ಬೆಂಗಳೂರಿಗರ ಕಂಗ್ಲೀಷ್ ಕೇಳಿದಾಗ  ಕನ್ನಡದ ಭವಿಷ್ಯದ ಬಗೆಗೆ ಸ್ವಲ್ಪ ದಿಗಿಲಾಗುವುದು ಸಹಜ. ಆದರೆ ವಿಶಾಲ ಕರ್ನಾಟಕದ ಉಳಿದ ಕಡೆ ಕನ್ನಡ ಇನ್ನೂ ಭದ್ರವಾಗಿದೆ ಎನ್ನುವುದು ಸುಳ್ಳಲ್ಲ. ನಾನು ಕಳೆದವಾರದ ನನ್ನ ಲೇಖನದಲ್ಲಿ ಹೇಳಿದಂತೆ ತಂತ್ರಜ್ಞಾನದಲ್ಲಿ ಕನ್ನಡವನ್ನು ಬಳಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಕನ್ನಡದ ವಿವಿಧ ಪ್ರಾಂತಗಳ ವಿಶಿಷ್ಟವಾದ ಭಾಷೆಗಳೆಲ್ಲ ಸಾಮಾಜಿಕ ಜಾಲತಾಣಗಳ ಪ್ರಭಾವ ಆರಂಭವಾದ ಮೇಲೆ ತಮ್ಮ ಬಲವನ್ನು, ಪ್ರಭಾವವನ್ನು ಹೆಚ್ಚಿಸಿಕೊಂಡಿದೆ ಎಂದೇ ಹೇಳಬಹುದು. ಉದಾಹರಣೆಗೆ ಕುಂದಾಪುರ ಕನ್ನಡ ಈಗ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಮನು ಹಂದಾಡಿಯವರ ಕುಂದಗನ್ನಡದ ಹಾಸ್ಯ ಪ್ರಪಂಚದ ಎಲ್ಲೆಡೆ ಪಸರಿಸಲು ಸಾಧ್ಯವಾಗಿದ್ದು, ವಿಶ್ವ ಕುಂದಾಪ್ರ ಕನ್ನಡ ದಿನವೆಂದು ಕನ್ನಡದ ಈ ಉಪಭಾಷೆಯನ್ನು ವಿಶ್ವದಾದ್ಯಂತ ಸಂಭ್ರಮಿಸಲು ಸಾಧ್ಯವಾಗಿದ್ದು ತಂತ್ರಜ್ಞಾನದ ಸಹಾಯದಿಂದ. ಕಳೆದವಾರ ಬೆಂಗಳೂರಿನ ಒಂದು ಪುಸ್ತಕಸಂತೆಯಲ್ಲಿ ಜನ ಮುಗಿಬಿದ್ದು ಕನ್ನಡ ಪುಸ್ತಕಗಳನ್ನು ಕೊಳ್ಳುವುದನ್ನು ನೋಡಿದಾಗ ನಮ್ಮ ಭಾಷೆಗೆ ಇನ್ನೂ ಸಾವಿರಾರು ವರ್ಷಗಳ ಭದ್ರವಾದ ಭವಿಷ್ಯವಿದೆ ಅನ್ನಿಸಿತು. ಹಾಗಾಗಿ ಕನ್ನಡ ಭಾಷೆ ತನ್ನೆದುರಿಗೆ ಬಂದ ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಶಕ್ತಿಯನ್ನು ತಾನೇ ಪಡೆದಿದೆ. "ಕಲಿಯೋಕೆ ನೂರು ಭಾಷೆ, ಆಡೋಕೆ ಒಂದೇ ಭಾಷೆ- ಕನ್ನಡ" ಎಂಬ ನಿಯಮವನ್ನು ಕನ್ನಡಿಗರು ಖಡ್ಡಾಯವಾಗಿ ಪಾಲಿಸುವಂತಾಗಲಿ. ನಮ್ಮ ಭಾಷೆಯು ಅಚಂದ್ರಾರ್ಕವಾಗಿ ಉಳಿಯುವಂತಾಗಲಿ ಎನ್ನುವ ಆಶಯವನ್ನು  ಸಂಕಲ್ಪವನ್ನು ಈ ರಾಜ್ಯೋತ್ಸವದ ತಿಂಗಳಲ್ಲಿ ಮಾಡೋಣ

"ಸುಲಿದ ಬಾಳೆಯ ಹಣ್ಣಿನಂದದಿ,
ತೆಗೆದ ಸಿಗುರಿನ ಕಬ್ಬಿನಂದದಿ ,
ಅಳಿದ ಉಷ್ಣದ ಹಾಲಿನಂದದಿ
ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನಿನ್ನೇನು?" - ಎಂದು ಹದಿನೇಳನೆಯ ಶತಮಾನದಲ್ಲಿ ಮಹಾಲಿಂಗಕವಿ ಅವರು ಬರೆದ "ಅನುಭವಾಮೃತ" ಎಂಬ ಕೃತಿಯ ಒಂದು ಪದ್ಯಭಾಗದ ಸಾಲುಗಳಿಗೆ
"ಆಂಗ್ಲಭಾಷೆಯಿಲಿನ್ನೇನು? ಪರಭಾಷೆಗಳಲಿನ್ನೇನು?"- ಎಂದು ಸೇರಿಸುತ್ತಾ ನಮ್ಮ ಸುಂದರ ಭಾಷೆಯಾದ ಕನ್ನಡವನ್ನು ಸಹಜವಾಗಿ ಶುದ್ಧವಾಗಿ ಬಳಸೋಣ ; ಅತಿ ಅಗತ್ಯವಿಲ್ಲದೇ ಅನ್ಯ ಭಾಷೆಗಳಲ್ಲಿ ಸಂವಹನ ಮಾಡವುದು ಬೇಡ ಎಂಬ ಕಿವಿಮಾತನ್ನು ಹೇಳುತ್ತಾ ನನ್ನ ಈ ರಾಜ್ಯೋತ್ಸವ ತಿಂಗಳಿನ ವಿಶೇಷ ಲೇಖನ ಸರಣಿಯನ್ನು ಮುಗಿಸುತ್ತೇನೆ.

ಲೇಖನ: ಸುಧಾ ಶಶಿಕಾಂತ್, ಮಸ್ಕತ್




ಸೋಮವಾರ, ನವೆಂಬರ್ 17, 2025

ಭಾಗ 3- ತಂತ್ರಜ್ಞಾನದ ಯುಗದಲ್ಲಿ ಕನ್ನಡ





"ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು" - ಎನ್ನುವ ಪ್ರಸಿದ್ಧ ಕನ್ನಡ ಚಿತ್ರ ಗೀತೆಯ ಸಾಲು ಜೀವನದ ಗಹನವಾದ ತತ್ವವನ್ನು ಸರಳವಾಗಿ ಹೇಳುತ್ತದೆ. ಒಂದು ಭಾಷೆಯ ಪ್ರಸ್ತುತತೆಗೂ ಈ ತತ್ವವನ್ನು ಅಳವಡಿಸಬಹುದು. ಭಾಷೆ ಒಂದು ಜೀವಂತ ವಸ್ತು. ಅದು ಬದಲಾಗುತ್ತಾ, ಅಭಿವೃದ್ಧಿ ಹೊಂದುತ್ತಾ, ಕಾಲಕ್ಕೆ ತಕ್ಕಂತೆ ಇದ್ದಾಗ ಮಾತ್ರ ಅದರ ಬದುಕು ಸಫಲವಾಗುತ್ತದೆ.

ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಪಠ್ಯ ಸಂಗ್ರಹ, ಇ-ಗ್ರಂಥಾಲಯ, ಆನ್ಲೈನ್‌ ಶಿಕ್ಷಣ, ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣಗಳು - ಇವೆಲ್ಲ ಇಂದಿನ ಜೀವನದ ಅವಿಭಾಜ್ಯ ಅಂಗ. ಅವುಗಳಿಲ್ಲದೆ ನಮ್ಮ ದಿನವನ್ನು ಯೋಚಿಸಲು ಸಾಧ್ಯವಿಲ್ಲ. ಮನೆಯಲ್ಲಿನ ದೀಪವನ್ನು ಬೆಳಗಿಸಲು, ಕಚೇರಿಯ ಕೆಲಸ, ಬ್ಯಾಂಕಿಂಗ್, ವೈದ್ಯಕೀಯ, ಪ್ರಯಾಣ, ಪಾಠಗಳು, ತರಬೇತಿಗಳು, ಸಂಗೀತ ನ್ರತ್ಯ ಮುಂತಾದ ಕಲೆಗಳ ಕಲಿಕೆ—ಎಲ್ಲೆಲ್ಲೂ ಯಂತ್ರ, ಡೇಟಾ ಮತ್ತು ತಂತ್ರಜ್ಞಾನ ನಮ್ಮ ಅವಿಭಾಜ್ಯ ಸಂಗಾತಿ. ಜೀವನದ ಯಾವ ಭಾಗವೂ ತಂತ್ರಜ್ಞಾನದ ಪ್ರಭಾವದಿಂದ ಹೊರತಾಗಿಲ್ಲ. ಅಂತೆಯೇ ತಂತ್ರಜ್ಞಾನ ವನ್ನು ಬಿಟ್ಟು ಯಾವುದೇ ಭಾಷೆ ಉಳಿಯುವುದು ಅಸಾಧ್ಯವೆನ್ನುವುದು ಸತ್ಯ. ಹಾಗಾಗಿ ನಮ್ಮ ಭಾಷೆಯನ್ನು ಈ ಮಾಧ್ಯಮಗಳ ಮೂಲಕ ಹೇಗೆ ಸಶಕ್ತಗೊಳಿಸಬಹುದು ಎಂದು ನಾವು ಯೋಚಿಸುವುದು ಬಹಳ ಅಗತ್ಯ ಅನಿಸುತ್ತದೆ. ಈ ಪೈಪೋಟಿಯ ಜಗತ್ತಿನಲ್ಲಿ ನಮ್ಮ ಕನ್ನಡವೂ ತಂತ್ರಜ್ಞಾನವನ್ನು ಅಪ್ಪಿಕೊಂಡಾಗ ಮಾತ್ರ ತನ್ನ ಸ್ಥಾನವನ್ನು ಉಳಿಸಿಕೊಳ್ಳುತ್ತದೆ. 

 *ಡಿಜಿಟಲ್ ಕನ್ನಡದ ಬೆಳವಣಿಗೆ* 
ಇಂದು ಭಾಷೆ ಬದುಕಲು ಕಾಗದ-ಪುಸ್ತಕ ಸಾಕಾಗುವುದಿಲ್ಲ. ಡಿಜಿಟಲ್‌ ಜಗತ್ತಿನಲ್ಲಿ ತನ್ನ ಸ್ಥಳವನ್ನು ಗೆಲ್ಲಬೇಕು.ಈಗಾಗಲೇ ಕನ್ನಡದ ಬಳಕೆಯನ್ನು ಸಾಕಷ್ಟು ಅಂತರ್ಜಾಲ ದಲ್ಲಿ ಕಾಣುತ್ತಿದ್ದೇವೆ. 
• ಡಿಜಿಟಲ್ ಪುಸ್ತಕಗಳು, ಆಡಿಯೋ ಪುಸ್ತಕಗಳು, ಈ-ಮ್ಯಾಗಜೀನ್‌ಗಳು ಲಭ್ಯವಾಗುತ್ತಿವೆ - ಇವುಗಳೆಲ್ಲ ನಮ್ಮ ಅಂಗೈಯಲ್ಲಿ ಬೇಕೆಂದಾಗ ಓದಲು ಸಿಗುವುದರಿಂದ ಆಸಕ್ತರಿಗೆ ಬೇಕಾದ ಪುಸ್ತಕಗಳನ್ನು ಪಡೆದುಕೊಳ್ಳುವುದು ಸುಲಭವಾಗಿದೆ. ಲೇಖಕರಿಗೆ ವಾಚಕರನ್ನು ತಲುಪುವುದೂ ಬಹಳ ಸುಲಭ
• ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳು ಆನ್ಲೈನ್‌ನಲ್ಲಿ ದೊರೆಯುತ್ತಿವೆ
• ಕನ್ನಡದಲ್ಲಿ ಮೊಬೈಲ್ ಕೀಬೋರ್ಡ್‌ ಮತ್ತು ಧ್ವನಿ ಆಧಾರಿತ ಟೈಪಿಂಗ್ ಕನ್ನಡದಲ್ಲಿ ಬರೆಯುವುದನ್ನು ಸುಲಭವಾಗಿಸಿದೆ
• ಅನುವಾದ ವ್ಯವಸ್ಥೆಗಳು (ಗೂಗಲ್ ಲೈವ್ ಭಾಷಾಂತರ) ಮತ್ತು ಕನ್ನಡ ಚಾಟ್‌ಬಾಟ್‌ಗಳು ಬೆಳೆಯುತ್ತಿವೆ - ಇವುಗಳಿಂದ ಭಾಷಾಂತರ, ಪರಭಾಷಿಕರೊಡನೆ ಸಂವಹನ ಸುಲಭವಾಗಿದೆ
• ಯೂಟ್ಯೂಬ್ ಚಾನಲ್‌ಗಳು, ಪಾಡ್‌ಕಾಸ್ಟ್‌ಗಳು, ಬ್ಲಾಗ್‌ಗಳು ಕನ್ನಡ ಅಭಿರುಚಿಯನ್ನು ಬೆಳೆಸುತ್ತಿವೆ - ಲೇಖಕರ ಮತ್ತು ಓದುಗರ ನಡುವಿನ ಸಂವಹನವನ್ನು ಇದು ಹಿಂದೆಂದಿಗಿಂತಲೂ ಸಮರ್ಥವಾಗಿ ಈ ಅಂತರ್ಜಾಲದ ಮಾಧ್ಯಮಗಳು ಮಾಡುತ್ತಿವೆ.
• ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇಂಸ್ಟಾ ಗ್ರಾಮ್ ಗಳಲ್ಲಿ ಸಾಹಿತ್ಯಪ್ರಿಯರ ಗುಂಪುಗಳನ್ನು ಮಾಡಿಕೊಂಡು ಪುಸ್ತಕ ವಿಮರ್ಶೆ, ಓದು, ಸಂದರ್ಶನಗಳು ನಡೆಯುತ್ತಿವೆ. 
• ಗೋಖಲೆ ಸಂಸ್ಥೆ ಮುಂತಾದ ಕನ್ನಡದ ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ಯೌಟ್ಯೂಬ್ ನೇರಪ್ರಸಾರ ಮಾಡುವುದರಿಂದ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ನಿಮ್ಮ ಆಸಕ್ತಿಯ ಕ್ಷೇತ್ರದ ಕಾರ್ಯಕ್ರಮಗಳನ್ನು ನೋಡುವುದು ಬಹಳ ಸುಲಭ. ಹಾಗಾಗಿ ದೇಶ, ಗಡಿಗಳ ನಿರ್ಬಂಧವಿಲ್ಲದೇ ಕಾರ್ಯಕ್ರಮಗಳನ್ನು ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯ

ಇವುಗಳೆಲ್ಲ ತಲೆಮಾರುಗಳ ನಡುವಣ ಕೊಂಡಿಯಾಗಿ ನಮ್ಮ ಭಾಷೆಯನ್ನು ಅಂತರ್ಜಾಲದ ಯುಗಕ್ಕೆ ಸಿದ್ದ ಮಾಡುತ್ತಿದೆ.  ಈ ಹೊಸ ಸನ್ನಿವೇಶದಲ್ಲಿ ದೇಶದ ಗಡಿ ಭಾಷೆಯನ್ನು ನಿರ್ಬಂಧಿಸುವುದಿಲ್ಲ. ತಂತ್ರಜ್ಞಾನದ ಮೂಲಕ ಭಾಷೆಯ ಹೊಸ ಸಾಧ್ಯತೆಗಳನ್ನು ಅರಿತು ನಮ್ಮ ಭಾಷೆಯನ್ನು ವಿಶ್ವಭಾಷೆಯನ್ನಾಗಿಸುವುದು ಸುಲಭ.
ಇನ್ನೂ ಕನ್ನಡದಲ್ಲಿ ರಚನೆಯಾಗುವ  ವಿಷಯಗಳ ಪ್ರಮಾಣ ಹೆಚ್ಚಬೇಕು. ಕನ್ನಡದಲ್ಲಿ ಗೂಗಲ್, ಯೂಟ್ಯೂಬ್‌, ವಿಕಿಪೀಡಿಯಾ, ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಗುಣಮಟ್ಟದ ವಿಷಯಗಳು ಹೆಚ್ಚಿದಂತೆ ನಮ್ಮ ಭಾಷೆ ವಿಶ್ವಮಟ್ಟಕ್ಕೆ ತಲುಪುತ್ತದೆ. ಇವೆಲ್ಲವೂ ಕನ್ನಡವನ್ನು ಜನಜೀವನದಲ್ಲಿ ಬಲವಾಗಿಸಿ ಹೊಸ ತಲೆಮಾರಿಗೆ ಕನ್ನಡ ಆಧುನಿಕತೆಯಿಂದ ಕೂಡಿದ ಭಾಷೆ ಎಂಬ ಭಾವವನ್ನು ಹುಟ್ಟಿಸುತ್ತಿವೆ.


 *ಕನ್ನಡ ಕಲಿಕೆಯಲ್ಲಿ ತಂತ್ರಜ್ಞಾನ:-* 

ಕನ್ನಡದಲ್ಲಿ ಬರೆಯುವಂತೆ, ಮಾತನಾಡುವಂತೆ, ಕಲಿಯುವಂತೆ ಮಾಡುವ ಕೆಲಸ ಮನೆ, ಶಾಲೆ ಮತ್ತು ಸಮುದಾಯದಿಂದಲೇ ಆರಂಭವಾಗಬೇಕು. 
ಪರಭಾಷಾ ದಾಸ್ಯ ಭಾವನೆಯನ್ನು ಬಿಟ್ಟು ಭಾಷೆಗಳ ಬಗೆಗೆ ಮಕ್ಕಳಿಗೆ ಪ್ರೀತಿಯನ್ನು ಬೆಳೆಸುವುದು, ಸಾಧ್ಯವಾದಷ್ಟು ಭಾಷೆಯನ್ನು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸುವುದು ನಿಜವಾಗಿ ತಂದೆತಾಯಿಗಳು ಮಾಡಬೇಕಾದ ಕೆಲಸ. ಮಾತೃಭಾಷೆಯನ್ನು ಶುದ್ಧವಾಗಿ ಮಾತನಾಡಲು ಬರುವುದು ಮಕ್ಕಳ ವ್ಯಕ್ತಿತ್ವಕ್ಕೆ ಉತ್ತಮ ಆತ್ಮವಿಶ್ವಾಸ ವನ್ನು ಕೊಡುತ್ತದೆ. ತಂತ್ರಜ್ಞಾನದ ಲಾಭವನ್ನು ಪಡೆದು ಕನ್ನಡ ಭಾಷಾ ಕಲಿಕೆಯಲ್ಲಿ ಇದನ್ನು ಬಳಸುವ ಕೆಲಸ ಆಗಲೇ ಆರಂಭವಾಗಿದೆ.
ವಿದೇಶದಲ್ಲಿ ವಾಸಿಸುವ ಅನೇಕ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ತಂತ್ರಜ್ಞಾನವನ್ನು ಕನ್ನಡ ಕಲಿಕೆಯಲ್ಲಿ ಬಳಸಲು ಮಾಡಿದ ಕೆಲಸಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ

• ಕನ್ನಡ ಶಾಲೆಗಳು, ಕನ್ನಡ ಸಾಹಿತ್ಯ ವೇದಿಕೆಗಳು, ಆನ್ಲೈನ್‌ ತರಗತಿಗಳು - ಎಲ್ಲ ಕನ್ನಡದಲ್ಲಿ ನಡೆಯುತ್ತಿವೆ. 
• ಮಕ್ಕಳಿಗೆ ಕನ್ನಡ ಕಲಿಸಲು ಅನೇಕ ಆಪ್ ಗಳ ಬೆಳವಣಿಗೆಯಾಗಿದೆ. 
• ಅಮೆರಿಕದಲ್ಲಿ ಆರಂಭಗೊಂಡ ಕನ್ನದ ಅಕಾಡೆಮಿ ಕನ್ನಡವನ್ನು ಮಕ್ಕಳಿಗೆ ಕಲಿಸಲು ಅಂತರ್ಜಾಲದಲ್ಲಿಯೇ ಬೇಕಾದ ಎಲ್ಲ ಪರಿಕರಗಳನ್ನು ತಯಾರಿಸಿ ಕನ್ನಡ ಕಲಿಕೆಯನ್ನು ಕಂಪ್ಯೂಟರೀಕರಿಸಿದೆ

ಮಕ್ಕಳು ಮೊಬೈಲ್ ಹಿಡಿದುಕೊಂಡಾಗ ಅವರನ್ನು ಕನ್ನಡದಲ್ಲಿ ಸಂವಹಿಸಲು ಪ್ರೋತ್ಸಾಹಿಸಬೇಕು. ಅವರಿಗೆ ಆಸಕ್ತಿ ಹುಟ್ಟಿಸುವಂತಹ ಚಟುವಟಿಕೆಯನ್ನು ನಮ್ಮ ಭಾಷೆಯಲ್ಲಿ ಮೊಬೈಲಿನಲ್ಲಿಯೇ ದಿನಕ್ಕೆ ಸ್ವಲ್ಪಹೊತ್ತು ಮಾಡಬಹುದು.  ನಾವೆಲ್ಲ ಮಾತನಾಡುವುದು ಮಾತ್ರವಲ್ಲ ಸಾಧ್ಯವಾದಲ್ಲೆಲ್ಲ ಅಂದರೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವಾಗ, ಹಬ್ಬಗಳ ಶುಭಾಶಯಕೋರಿಕೊಳ್ಳುವಾಗ ಕನ್ನಡದಲ್ಲಿಯೇ ಖಡ್ಡಾಯವಾಗಿ ಬರೆದರೆ ನಮ್ಮ ಮಕ್ಕಳು ಅದನ್ನು ಓದಿಯೇ ಓದುತ್ತಾರೆ.


 ಕೇವಲ ಭಾವನಾತ್ಮಕವಾಗಿ ಭಾಷೆಯನ್ನು ಪ್ರೀತಿಸುವುದರಿಂದ ಸಾಕಾಗದು; ಅದನ್ನು ಉಪಯೋಗಿಸುವ, ಪೋಷಿಸುವ, ತಂತ್ರಜ್ಞಾನದಲ್ಲಿ ಬೆಳೆಸುವ ಜವಾಬ್ದಾರಿಯೂ ನಮ್ಮದೆ ಎನ್ನುವುದನ್ನು ಎಲ್ಲರೂ ಅರಿತರೆ ಕನ್ನಡವು ಇನ್ನೂ ಉಜ್ವಲ ಭವಿಷ್ಯದ ಹೊಸ್ತಿಲಿನಲ್ಲಿದೆ ಎನ್ನುವುದು ಖಂಡಿತಾ.ಈಗ ನಡೆಯುತ್ತಿರುವ ಪ್ರಯತ್ನ ವನ್ನು ಸಮರ್ಥವಾಗಿ ಮುಂದುವರಿಸಿ ಪ್ರಪಂಚದಾದ್ಯಂತ ಬೆಳೆಯುವ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ  ಇನ್ನೂ ಹೆಚ್ಚಿನ ಉತ್ಸಾಹದಿಂದ ನಡೆಯಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು ಎನ್ನುವ ಕಗ್ಗದ ಸಾಲುಗಳಂತೆ ತಂತ್ರಜ್ಞಾನ ವೆಂಬ ಹೊಸಚಿಗುರಿನೊಂದಿಗೆ  ಸಮೃದ್ಧ ಕನ್ನಡ ಭಾಷೆಯೆಂಬ ಹಳೆ ಬೇರನ್ನು ಕೂಡಿಸಿ ಸೊಗಸಾದ ಮರವನ್ನು ಬೆಳೆಸಲು ಖಂಡಿತಾ ಸಾಧ್ಯ. 

ಲೇಖನ: ಸುಧಾ ಶಶಿಕಾಂತ್, ಮಸ್ಕತ್


Published in Desiswara on 22-11-2025







 ಮತ್ತೆ ಬಂದಿತು ರಾಜ್ಯೋತ್ಸವ 

 (ಭಾಗ 2): ಹೊರನಾಡ ಕನ್ನಡಿಗರು ಮತ್ತು ಕನ್ನಡ ಭಾಷೆ 


ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ, ಹೆಮ್ಮೆ ಉಂಟಾಗುವುದು ನಾವು ನಮ್ಮ ಮಣ್ಣಿನಿಂದ ದೂರ ಹೋದಾಗ ಎನ್ನುವುದು ನನ್ನ ಸ್ವಂತ ಅನುಭವ.  ನನ್ನ ವೈವಾಹಿಕ ಜೀವನದ 30ವರ್ಷಗಳಲ್ಲಿ ಮೊದಲ 10 ವರ್ಷ ಹೊರನಾಡ ಕನ್ನಡಿಗಳಾಗಿ ಕಳೆದಿದ್ದೇನೆ ; ಉಳಿದ ಇಪ್ಪತ್ತು ವರ್ಷವಿದೇಶಿ ಕನ್ನಡಿಗಳಾಗಿ ಕಳೆದಿದ್ದೇನೆ. ಆದರೆ ಅಷ್ಟೂ ವರ್ಷಗಳೂ ಕನ್ನಡದೊಂದಿಗಿನ ನನ್ನ ನಂಟು ಜಾಸ್ತಿಯಾಗಿದ್ದಲ್ಲದೇ ಸ್ವಭಾಷೆಯ ದೊಡ್ಡ ಸ್ನೇಹಿತರ ಬಳಗವನ್ನು, ವಿವಿಧ ಕನ್ನಡ ಚಟುವಟಿಕೆಗಳಲ್ಲಿ  ತೊಡಗಿಕೊಳ್ಳುವ ಅವಕಾಶವನ್ನೂ ಈ ಜೀವನ ನನಗೆ ಒದಗಿಸಿ ನನ್ನನ್ನು ಅಪ್ಪಟ ಹೆಮ್ಮೆಯ ಕನ್ನಡಿಗಳನ್ನಾಗಿಸಿದೆ. ಅನ್ಯ ಭಾಷೆಯ  ನೆಲದಲ್ಲಿ ಜೀವನ ಮಾಡಲು ಅರಂಭಿಸಿದಾಗ ಕಿವಿಯ ಮೇಲೆ ನಮ್ಮ ಭಾಷೆ ಬಿದ್ದರೆ — ಅನಾಯಾಸವಾಗಿ ಮುಖದಲ್ಲಿ ನಗು ಮೂಡುತ್ತದೆ,  ಕೂಡಲೇ ತಿರುಗಿ ಕೇಳುತ್ತೇವೆ — "ನೀವು ಕನ್ನಡದವರಾ? ಯಾವ ಊರಿನವರು?" - ಹೀಗೆ ಸಂಭಾಷಣೆ ಆರಂಭವಾಗಿ ಅಜ್ಞಾತರ ನಡುವಿನ ಬಂಧವೂ ರೂಪುಗೊಳ್ಳುತ್ತದೆ. ಭಾಷೆ ನಮ್ಮನ್ನು ಹತ್ತಿರಕ್ಕೆ ತರುವ ಸೇತುವೆಯಂತೆ ಕೆಲಸ ಮಾಡುತ್ತದೆ. ಅದರ ಫಲವೇ ಭಾರತದ ಬೇರೆ ಬೇರೆ ಊರುಗಳಲ್ಲಿ, ಪ್ರಪಂಚದಾದ್ಯಂತ ಬೆಳೆಯುತ್ತಿರುವ ಕನ್ನಡ ಸಂಘಗಳು ಮತ್ತು ಸಂಘಟನೆಗಳು. ಹೊರನಾಡ ಮತ್ತು ಹೊರದೇಶದ ಕನ್ನಡಿಗರು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಅಸಾಧಾರಣ ಪಾತ್ರವಹಿಸಿದ್ದಾರೆ, ವಹಿಸುತ್ತಿದ್ದಾರೆ.

ಹೊರನಾಡ ಕನ್ನಡಿಗರು:- 

ಭಾರತದ ಪುಣೆ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಅಹ್ಮದಾಬಾದ್ ಮುಂತಾದ ಕನ್ನಡೇತರ ಮಹಾನಗರಗಳಲ್ಲಿ ಕನ್ನಡಿಗರು ಸಂಘಟಿತರಾಗಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ಕನ್ನಡದ ಕಾಯಕವನ್ನು ಹಲವು ದಶಕಗಳಿಂದ ಮಾಡುತ್ತಿದ್ದಾರೆ. ಅವರ ಮಕ್ಕಳಿಗೆ ಕನ್ನಡ ಕಲಿಸುವ ಕನ್ನಡ ಶಾಲೆಗಳು, ಹಬ್ಬ ಹರಿದಿನಗಳಲ್ಲಿ ಆಯೋಜಿಸುವ ಕನ್ನಡ ಹಬ್ಬಗಳು, ನಾಟಕಗಳು, ಕಾವ್ಯಗೋಷ್ಠಿಗಳು — ಇವೆಲ್ಲ ಭಾಷೆಯನ್ನು ಉಳಿಸಲು, ಬೆಳೆಸಲು ಉತ್ತಮ ದಾರಿಗಳು. ಮುಂಬೈ ಮತ್ತು ದೆಹಲಿಯ  ವಿಶ್ವ ವಿದ್ಯಾಲಯಗಳಲ್ಲಿರುವ ಕನ್ನಡ ಪೀಠ ಕನ್ನಡದ ಬಗೆಗೆ ಸಂಶೋಧನೆ ಮಾತ್ರವಲ್ಲದೆ ಅನೇಕ  ಲೇಖಕರನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದೆ. ದೆಹಲಿ, ಮುಂಬೈ ಕನ್ನಡ ಸಂಘಗಳಂತೂ ತಮ್ಮ ವಿವಿಧ ಚಟುವಟಿಕೆಗಳ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಮುಂಚೂಣಿಯಲ್ಲಿ ನಿಂತಿವೆ. ದೆಹಲಿಯ ಕನ್ನಡ ಭವನ, ಮುಂಬೈ ಕನ್ನಡಿಗರ ಅನೇಕ ಸಾಂಸ್ಕೃತಿಕ ಕೇಂದ್ರಗಳು ಹಲವು ದಶಕಗಳಿಂದ ಕನ್ನಡ ಭಾಷೆ ಸಂಸ್ಕೃತಿಯು ಅನ್ಯ ಭಾಷೆಯ ನೆಲದಲ್ಲಿ  ನೆಲೆಯೂರಲು ಕಾರಣವಾಗಿದೆ. ಪುಣೆಯ ಕನ್ನಡ ಸಂಘದ ಭಾಗವಾಗಿದ್ದ ನಾನು ಎಸ್. ಎಲ್. ಭೈರಪ್ಪನವರ ಸಂಪೂರ್ಣ ಸಾಹಿತ್ಯವನ್ನು ಅಲ್ಲಿನ ಗ್ರಂಥಾಲಯದಲ್ಲಿಯೇ ಓದಿದ್ದು !! - ಅನ್ಯ ನೆಲದಲ್ಲಿ ನಮ್ಮ ಭಾಷೆಯವರ ಗುಂಪು ಸಾಧ್ಯವಾಗಿಸಬಹುದಾದ ಕನ್ನಡಮಯ ಪರಿಸರಕ್ಕೆ ಇದೊಂದು ಚಿಕ್ಕ ಉದಾಹರಣೆ. 


 ವಿದೇಶಿ/ಅನಿವಾಸಿ  ಕನ್ನಡಿಗರು:- 

ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಮಲೇಶಿಯಾ, ಸಿಂಗಪೂರ್, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳಲ್ಲಿ ಅನಿವಾಸಿ ಕನ್ನಡಿಗರು ಅನೇಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅವರ ಕಾರ್ಯಕ್ರಮಗಳಲ್ಲಿ “ಕನ್ನಡ ರಾಜ್ಯೋತ್ಸವ”, “ಯುಗಾದಿ”, “ದಸರಾ”, “ದೀಪಾವಳಿ” ಹೀಗೆ ಹಬ್ಬಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುತ್ತಿದ್ದಾರೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ನಡೆಯುವ  ವಾರ್ಷಿಕ ಅಕ್ಕ (AKKA) ,  ನಾವಿಕ (NAVIKA) ಸಮ್ಮೇಳನಗಳಂತೂ  ಕನ್ನಡದ ಕಲಾವಿದರಿಗೆ, ಸಾಹಿತಿಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಒದಗಿಸುತ್ತಾ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. 

         ನಾನಿರುವ ಮಸ್ಕತ್ತಿನಲ್ಲಿ  ಕನ್ನಡ ಸಂಘ, ಓಂಕಾರ ಸಮಿತಿ, ಚಾಲುಕ್ಯ ಕೂಟ, ಬಸವ ಬಳಗ, ಮುಂತಾದ ವೇದಿಕೆಗಳ ಮೂಲಕ ಕನ್ನಡ ಚಟುವಟಿಕೆಗಳು ಅನೇಕ ವಿಧವಾಗಿ ನಡೆಯುತ್ತಿದೆ. ಈ ವೇದೀಕೆಗಳ ಮುಖಾಂತರ ರಾ. ಗಣೇಶ, ಗುರುರಾಜ ಕರ್ಜಗಿ, ಪ್ರಭಾತ್ ಕಲಾವಿದರು, ಸಿ ಅಶ್ವಥ್, ವಿಜಯಪ್ರಕಾಶ್, ಮೈಸೂರು ಮಹಾರಾಜರು, ಪಾವಗಡ ಪ್ರಕಾಶ ರಾವ್, ಬಿ. ಎಂ. ಹೆಗ್ಡೆ, ವಿಶ್ವೇಶ್ವರ ಭಟ್ - ಮುಂತಾದ ಕನ್ನಡದ ಹೆಸರಾಂತ ವ್ಯಕ್ತಿಗಳನ್ನು ಬೇಟಿಮಾಡುವ ಸೌಭಾಗ್ಯ ಇಲ್ಲಿನ ಕನ್ನಡಿಗರದ್ದಾಗಿದೆ.

        ಇಲ್ಲೆಲ್ಲ ವಾರಾಂತ್ಯದ ಕನ್ನಡ ತರಗತಿಗಳ ಮೂಲಕ ಇಲ್ಲಿ ಬೆಳೆಯುವ ಮಕ್ಕಳಿಗೆ ಕನ್ನಡ ಓದಲು ಬರೆಯಲು ಕಲಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ “ವಾಟ್ಸಪ್ ಕನ್ನಡ ಗುಂಪುಗಳು”, “ಯೂಟ್ಯೂಬ್ ಕನ್ನಡ ಚಾನೆಲ್‌ಗಳು”, “ಆನ್‌ಲೈನ್ ಪಾಠಗಳು” ಅವರ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸುತ್ತಿವೆ. ನಮ್ಮ ಭಾಷೆಯ ಜನರನ್ನು ಒಂದುಗೂಡಿಸಲು ತಂತ್ರಜ್ಞಾನವೂ ಉತ್ತಮ ಕೊಡುಗೆಯನ್ನು ನೀಡುತ್ತಿದೆ.  ಕೊರೋನಾ ಸಮಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಾಗಾಭರಣ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ನಡೆಯುವ ಕನ್ನಡ ತರಗತಿಗಳ ಶಿಕ್ಷಕರನ್ನು ಒಂದು ವಾಟ್ಸಾಪ್ ಗುಂಪಿನ ಒಳಗಡೆ ತಂದಿದ್ದು ಒಂದು ದೊಡ್ಡ ಸಾಧನೆ. ಈ ಗುಂಪು ಈಗಲೂ ಕನ್ನಡ ಚಟುವಟಿಕೆಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಎಲ್ಲ ಕಡೆಯಲ್ಲಿನ ಕನ್ನಡ ಸಂಘಗಳು ಹೊರತರುವ ಈ-ಪತ್ರಿಕೆಗಳೂ ಈ ಗುಂಪಿನ ಮೂಲಕ ಪ್ರಸಾರವಾಗುತ್ತಿವೆ. 

     ನಡುನಾಡೆ ಇರಲಿ ಗಡಿನಾಡೇ ಇರಲಿ ಕನ್ನಡದ ಕಳೆಯ ಕೆಚ್ಛೆವು ಎನ್ನುವ ಕರ್ಕಿಯವರ ಸಾಲುಗಳ್ಳನ್ನು ಸಾಕಾರಗೊಳಿಸುತ್ತಾ  ಈ ಚಟುವಟಿಕೆಗಳು ಹೊರನಾಡ ಕನ್ನಡಿಗರ ಮನದಲ್ಲಿ ‘ ನಾನು ಕನ್ನಡಿಗ’ ಎಂಬ ಭಾವನೆಯನ್ನು ಮೂಡಿಸುತ್ತವೆ ಮತ್ತು ಭಾಷೆಯನ್ನೂ ಬೆಳೆಸಲು ಅವರು ಮಾಡುವ ಈ ಪ್ರಯತ್ನಗಳು ಕರ್ನಾಟಕದಲ್ಲಿರುವ ಕನ್ನಡಿಗರಿಗೂ ಪ್ರೇರಣೆಯಾಗಿ ನಿಂತಿವೆ. ಭಾಷೆಯನ್ನು ಮಾತನಾಡುವುದರಿಂದಲೇ ಅಲ್ಲ, ಅದನ್ನು ಬದುಕುವುದರಿಂದ, ಹಂಚಿಕೊಳ್ಳುವುದರಿಂದ, ಮುಂದಿನ ಪೀಳಿಗೆಗೆ ನೀಡುವುದರಿಂದ ಮಾತ್ರ ಅದು ಜೀವಂತವಾಗಿರುತ್ತದೆ. ಹೊರನಾಡ ಮತ್ತು ಅನಿವಾಸಿ ಕನ್ನಡಿಗರ ಎಲ್ಲ ಪ್ರಯತ್ನಗಳೂ ಭಾಷೆಯನ್ನೂ ಬಲಗೊಳಿಸುವಲ್ಲಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. 


ಲೇಖನ: ಸುಧಾ ಶಶಿಕಾಂತ್, ಮಸ್ಕತ್

Published in Udayavani Desiswara


ಬುಧವಾರ, ನವೆಂಬರ್ 5, 2025

ಭಾಗ 1- ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಸ್ತುತತೆ


"ಬಾರಿಸು ಕನ್ನಡ ಡಿಂಡಿಮವ"
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"
"ಹಚ್ಛೆವು ಕನ್ನಡದ ದೀಪ"
"ಜಯ ಭಾರತ ಜನನಿಯ ತನುಜಾತೆ"

ಇವೆಲ್ಲ ನವೆಂಬರ್ ಹತ್ತಿರ ಬರುತ್ತಿದ್ದಂತೆ ಹೆಚ್ಚು ಅನ್ನಿಸುವಷ್ಟು ನಮ್ಮ ಕಿವಿಗಳ, ಕಣ್ಣುಗಳ ಮೇಲೆ  ಅನಾಯಾಸವಾಗಿ ಬೀಳುವ ಸಾಲುಗಳು.  ಮಸ್ಕತ್ತಿನಿಂದ ನಿನ್ನೆ ನನ್ನೂರಿಗೆ ಬರುತ್ತಿದ್ದಂತೆ ನಮ್ಮ ಮನೆಯ ಎಲ್ಲ ಹೊಸ ನಿಯತಕಾಲಿಕಗಳು ಕನ್ನಡಮ್ಮನ ಚಿತ್ರಗಳಿಂದ, ಕರ್ನಾಟಕದ ಬಾವುಟದ ಚಿತ್ರಗಳಿಂದ ನನ್ನನ್ನು ಸ್ವಾಗತಿಸಿದವು. ಇವತ್ತು ಬೆಳಗ್ಗೆಯಿಂದ ಎಲ್ಲ ಪತ್ರಿಕೆಗಳು, ಫೋನಿನಲ್ಲಿನ ವಾಟ್ಸಾಪ್ ಗುಂಪುಗಳು ರಾಜ್ಯೋತ್ಸವದ ಶುಭ ಸಂದೇಶಗಳಿಂದ ತುಂಬಿ ಹೋಗಿವೆ.  ಊರಲ್ಲಿ ನಡೆಯುವ ಕನ್ನಡ ಹಬ್ಬಗಳ ಆಮಂತ್ರಣ ಪತ್ರಿಕೆಗಳು ನಮ್ಮಮ್ಮನ ಟೇಬಲ್ ಮೇಲೆ ಅಟ್ಟಿಯಾಗಿ ಕುಳಿತಿದ್ದವು. ಇವೆಲ್ಲ ರಾಜ್ಯೋತ್ಸವ ದ ಸಮಯದಲ್ಲಿ ಊರಿಗೆ ಬಂದ ನನ್ನ ಸಂಭ್ರಮವನ್ನು ಹೆಚ್ಚಿಸಿದವು.

ನಮ್ಮ ಮಾತೃಭಾಷೆಯ, ಭವ್ಯ ಸಂಸ್ಕೃತಿಯ  ಎರಡು ಸಾವಿರಕ್ಕೂ ಮಿಕ್ಕಿದ ಇತಿಹಾಸ ನನ್ನ ಕಣ್ಣ ಮುಂದೆ ಒಮ್ಮೆ ಬಂದು ಹೋಯಿತು. ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ- ಮುಂತಾದ ರಾಜ ಮನೆತನಗಳ ಸಾಂಸ್ಕೃತಿಕ ಕೊಡುಗೆಗಳು, ಕರ್ನಾಟಕ ಸಾಮ್ರಾಜ್ಯವನ್ನು ಸ್ಥಾಪಿಸಲು ವಿದ್ಯಾರಣ್ಯರು ಮಾಡಿದ ತಪಸ್ಸು, ಮೈಸೂರು ಸಾಮ್ರಾಜ್ಯದ ಒಡೆಯರಿಂದ ಶ್ರೀಮಂತಗೊಂಡ ನಮ್ಮ ಭಾಷೆ ಸಂಸ್ಕೃತಿ ಅದಕ್ಕೆ ಕಾರಣರಾದ ಅರಸು ಮನೆತನ, ನಂತರ ಬಂದ ಕರ್ನಾಟಕ ಏಕೀಕರಣ ಚಳವಳಿ, ಈ ಕಾರಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಆಲೂರು ವೆಂಕಟರಾಯರು, ಬಿ ಎಂ ಶ್ರೀ ಮುಂತಾದ ಮಹನೀಯರು; ಕ್ರಿ.ಶ. ಒಂಭತ್ತನೇಯ ಶತಮಾನದ ಕವಿರಾಜಮಾರ್ಗದಿಂದ ಈ ಶತಮಾನದಲ್ಲಿ ಕನ್ನಡ ಭಾಷೆಯನ್ನು ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ  ಡಿವಿಜಿ, ಕುವೆಂಪು, ಶಿವರಾಮ ಕಾರಂತರು, ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್  ಮುಂತಾದ ಲೇಖಕರು ಇವರೆಲ್ಲ ನನ್ನ ಮನಸ್ಸಿನಲ್ಲಿ ಹಾದು ಹೋದರು. ಮನಸ್ಸು ಒಮ್ಮೆ ಹೆಮ್ಮೆಯಿಂದ ಬೀಗಿತು.

ನಂತರ ಈಗಿನ ಮಾಹಿತಿ ತಂತ್ರಜ್ಞಾನದ ಕೃತಕ ಬುದ್ದಿ ಮತ್ತೆಯ ಇಂಸ್ಟಾ ರೀಲುಗಳ ಯುಗದಲ್ಲಿ ನಮ್ಮ ಈ ಭಾಷೆ ಸಂಸ್ಕೃತಿಯು ಹೇಗೆ ಪ್ರಸ್ತುತವಾಗಿದೆ. ನಮ್ಮ ಮುಂದಿನ ಪೀಳಿಗೆಯೂ ನಮ್ಮಂತೆ ಈ ಸಂಸ್ಕೃತಿಯ ಬಗೆಗೆ ಅಭಿಮಾನವನ್ನು ಹೊಂದಿರುತ್ತಾರೆಯೇ ಎಂಬ ಪ್ರಶ್ನೆ ನನ್ನ ಮನಸ್ಸನ್ನು ಕಾಡತೊಡಗಿತು. ಡಿವಿಜಿಯವರು ಹೇಳುವಂತೆ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು. ನಮ್ಮ ಹಳೆಯ ಭದ್ರವಾದ ಬೇರನ್ನು ಬುನಾದಿ ಮಾಡಿಕೊಂಡು ನಮ್ಮ ಮುಂದಿನ ತಲೆಮಾರು ಚಿಗುರೊಡೆಯುತ್ತೋದೆಯೇ ಎಂಬ ಪ್ರಶ್ನೆ ಈಗ ನಿಜವಾಗಿ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಎನ್ನಿಸಿತು.

ಹುಟ್ಟುತ್ತಲೇ ಮೊಬೈಲ್ ಹಿಡಿದು ಬೆಳೆಯುವ ಮಕ್ಕಳು,  ಮಾತ್ರ ಭಾಷೆ ಸರಿಯಾಗಿ ಮಾತನಾಡಲು ಬರುವ ಮೊದಲೇ ಅವರ ಮೇಲೆ ಇಂಗ್ಲಿಷ್ ಹೇರುತ್ತಿರುವ ಪೋಷಕರು, ಕಂಗ್ಲೀಷ್ ಮಾತನಾಡದಿರೆ ಮಾತ್ರ ತಾವು ಸುಸಂಕ್ರತರು ಎಂದು ತಿಳಿದಿರುವ  ಜನರ ನಡುವೆ ಶುದ್ಧವಾದ ಭಾಷೆಯನ್ನೇ ಕೇಳದೆ ಬೆಳೆಯುತ್ತಿರುವ ಮಕ್ಕಳು ತಮ್ಮ ಸಂಸ್ಕೃತಿಯ ಬಗೆಗೆ ಹೇಗೆ ಹೆಮ್ಮೆಯನ್ನು ಹೊಂದಲು ಸಾಧ್ಯ ಎನ್ನಿಸುತ್ತದೆ. ಇಂಗ್ಲೀಷ್ ಭಾಷೆಯ ಮೂಲಕವೇ ಭವಿಷ್ಯ ಸಾಧ್ಯ ಎಂಬ ಗಾಢವಾದ ಭಾವನೆ ಜನರಲ್ಲಿ ಬೇರೂರಿರುವುದು, ಶಿಕ್ಷಣ ಕ್ಷೇತ್ರದ ವ್ಯಾಪಾರಿಕರಣ ಈಗಿನ ಶಿಕ್ಷಣಕ್ರಮ  - ಇವೆಲ್ಲ ಮಕ್ಕಳಲ್ಲಿ ಮಾತೃಭಾಷೆಯ ಅಭಿಮಾನವನ್ನು ತರಿಸುತ್ತಿಲ್ಲ ಎನ್ನಿಸುತ್ತಿದೆ. ನಮ್ಮ ಇಷ್ಟು ಸಮೃದ್ಧ ಸಹಸ್ರಾರು ವರ್ಷಗಳ ಸಂಸ್ಕೃತಿ ಇಂಗ್ಲಿಷಿನ ಸಹಾಯವಿಲ್ಲದೆಯೇ ಬೆಳದಿದೆ ಎಂದು ಅರ್ಥೈಸಿಕೊಳ್ಳಲು ನಾವು ವಿಫಲರಾಗಿರುವುದೇ ಒಂದು ವಿಪರ್ಯಾಸ

ಭಾಷೆಯ ಶಕ್ತಿ ಇರುವುದು ಅದರ ಸಮರ್ಥ ಬಳಕೆಯಲ್ಲಿ. ಭಾಷೆ ನಿಂತ ನಿರಲ್ಲ. ಪರಿವರ್ತನೆ ಜೀವನದ ಸಹಜ ನಿಯಮವೆಂದು ನಮಗೆಲ್ಲರಿಗೂ ಗೊತ್ತೇ ಇದೆ. ಈ ಪರಿವರ್ತನೆಯಿಂದ ಭಾಷೆಗಳೂ ಹೊರತಾಗಿಲ್ಲವೆಂದು ಪ್ರಪಂಚದ ಯಾವುದೇ ಭಾಷೆಯ ಇತಿಹಾಸವನ್ನು ನೋಡಿ ನಾವು ತಿಳಿದುಕೊಳ್ಳಬಹುದು. ಪರಭಾಷೆಯ ಸಂಪರ್ಕ ನಮ್ಮ ಭಾಷೆಗೆನೂ ಹೊಸತಲ್ಲ. ಸಂಸ್ಕ್ರತ, ಅರೇಬಿಕ್, ಪರ್ಷಿಯನ್ ಭಾಷೆಗಳ ನಂಟು ಕನ್ನಡಕ್ಕೆ ಶತಮಾನಗಳಿಂದ ಇದೆ. ಅವುಗಳ ಸಂಪರ್ಕದಿಂದ  ಪದಗಳ ವಿನಿಮಯದಿಂದ ಎರಡೂ ಭಾಷೆಗಳು ಬೆಳೆದಿವೆ. ಈಗ ನಡೆಯುತ್ತಿರುವುದು ಆಂಗ್ಲ ಭಾಷೆಯ ಅತಿಯಾದ ದಾಸ್ಯ. ಆ ಮನಃಸ್ಥಿತಿಯನ್ನು ಬಿಟ್ಟು ಅಗತ್ಯವಿದ್ದಷ್ಟು ಮಾತ್ರ ಪರ ಭಾಷೆಯನ್ನು ಬಳಸುವುದನ್ನು ನಾವೆಲ್ಲ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ.  ಪರಭಾಷಾ ವ್ಯಾಮೋಹವನ್ನು ಬಿಟ್ಟು ನಮ್ಮ ಭಾಷೆ, ಸಂಸ್ಕೃತಿಯ ಬಗೆಗೆ ನಾವು ಹೆಮ್ಮೆಯನ್ನು ತೆಳೆದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಈ ಭಾಷೆಯನ್ನು ಕಲಿಯುವುದು, ಇದನ್ನು ಪ್ರೀತಿಸುವುದು ಸಾಧ್ಯ. ಹಾಗಾಗಿ ನಾವು ಮನೆಯಲ್ಲಿ ಕನ್ನಡದಲ್ಲಿ ಮಾತನಾಡಿ, ಕನ್ನಡದ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಬೇಕು. ಈ ರಾಜ್ಯೋತ್ಸವದಂದು ಪ್ರಪಂಚದ ಎಲ್ಲ ಭಾಗದಲ್ಲಿರುವ ಕನ್ನಡಿಗರು ಈ ಬಗೆಗೆ ದೃಢ ಸಂಕಲ್ಪ ಮಾಡಬೇಕಾಗಿದೆ. ಕೇವಲ ಈ ಒಂದು ದಿನದ ಆಚರಣೆಗೆ ಮಾತ್ರ ರಾಜ್ಯೋತ್ಸವವನ್ನು ಸೀಮಿತಗೊಳಿಸದೇ ನಮ್ಮ ಮನೆ ಮನಸ್ಸನ್ನು ಕನ್ನಡಮಯಗೊಳಿಸಿ ನಮ್ಮ ಮಕ್ಕಳ ಮನಸ್ಸಿನಲ್ಲಿ ಸಹಜವಾಗಿ ಈ ಭಾಷೆಯ ಬಗೆಗೆ ಪ್ರೀತಿ, ಹೆಮ್ಮೆ ಮೂಡಿಸುವತ್ತ ಗಮನಹರಿಸಿಸೋಣ

ಲೇಖನ: ಸುಧಾ ಶಶಿಕಾಂತ್, ಮಸ್ಕತ್



Published in Desiswara on 8th November