ಶುಕ್ರವಾರ, ಜನವರಿ 30, 2026

ಕೌಲಾಲಂಪುರ ಕಥೆಗಳು

ಕಳೆದ ಇಪ್ಪತ್ತು ವರ್ಷಗಳ ವಿದೇಶದ ವಾಸದಲ್ಲಿ ಅನೇಕ ದೇಶಗಳನ್ನು ನಗರಗಳಿಗೆ ಪ್ರವಾಸ ಹೋಗುವ ಸಂಧರ್ಭಗಳು ನನಗೆ ಬಂದಿವೆ. ಅವುಗಳಲ್ಲಿ ಮಲೇಶಿಯಾ ದೇಶದ ರಾಜಧಾನಿ ಕೌಲಾಲಂಪುರ ಇತ್ತೀಚಿನದು ಮತ್ತು ವಿಶಿಷ್ಟವಾದದು. ಎಲ್ಲ ನಗರಗಳಂತೆ ಇದೊಂದು ಮಹಾನಗರ. ಅಲ್ಲೇನು ಹೊಸತು ಇರಲು ಸಾಧ್ಯ ಎನ್ನುವ ಅನ್ಯಮನಸ್ಕತೆಯಿಂದಲೇ ಹೋದರೂ ಈ ನಗರ ನಾವಿದ್ದ ಮೂರು ದಿನಗಳಲ್ಲಿ ನನ್ನ ಮೇಲೆ ವಿಶೇಷವಾದ ಮೋಡಿಯನ್ನೇ ಮಾಡಿತು. ಸ್ವಚ್ಚತೆ, ಹಸಿರಿನಿಂದ ಕೂಡಿದ ಪರಿಸರ, ವೈವಿಧ್ಯಮಯ ಸಂಸ್ಕತಿಯ ಜನರು, ಸುಂದರವಾದ ಮತ್ತು ಒಳ್ಳೆಯ ಗುಣಮಟ್ಟದ ರಸ್ತೆಗಳು, ನಗುಮೊಗದ ಸ್ಥಳೀಯ ಜನತೆ- ಇಲ್ಲಿನ ಪ್ರವಾಸವನ್ನು ಮೆಚ್ಚುವಂತೆ ಮಾಡುವ ಕೆಲವು ಆಂಶಗಳು. ಭಾರತಿಯರಿಗೆ ಉಚಿತ ಪ್ರವೇಶವಿರುವುದರಿಂದ ವೀಸಾ ಪಡೆಯುವ ಗೋಜು ಇಲ್ಲ. ಪ್ರಪಂಚದಲ್ಲಿ ವರ್ಷದಲ್ಲಿ ಅತಿ ಹೆಚ್ಚು ಜನರು ಸಂದರ್ಶಿಸುವ ನಗರಗಳಲ್ಲಿ ಒಂದಾಗಿರುವ ಈ ನಗರ ಮಲೇಷ್ಯಾ ನಿಜವಾದ ಏಷ್ಯಾ (Malaysia truly Asia) ಎನ್ನುವ ಸಾಲನ್ನು ಸಾರ್ಥಕಗೊಳಿಸುತ್ತದೆ.

ಸಂಸ್ಕೃತಿಗಳ ಮಿಶ್ರಣ:-
      ಚೀನಿ, ಮಾಲೆ ಮತ್ತು ಭಾರತೀಯ ಸಂಸ್ಕೃತಿಯ ಸುಂದರ ಮಿಲನದ ಪ್ರತೀಕದಂತಿರುವ ಈ ನಗರದಲ್ಲಿ ಈ ಎಲ್ಲ ಸಂಸ್ಕೃತಿ ಗಳ ಗುರುತನ್ನು ಕಾಣಬಹುದು. ನಗರದಲ್ಲಿರುವ  ಚೀನಿ ದೇವಸ್ಥಾನಗಳು ಶಾಂತಿಯ ಕೇಂದ್ರಗಳಾಗಿದ್ದು ನಿಜವಾಗಿ ಭೇಟಿನೀಡಬೇಕಾದ ಸ್ಥಳಗಳಾಗಿವೆ. ಸುಂದರವಾಗಿ ನಿರ್ಮಿತವಾದ ಅನೇಕ ಮಸೀದಿಗಳಿವೆ.

ಬಾತುಮಿ ಗುಹೆಗಳು:-
ಕೌಲಾಲಂಪುರ ನಗರ ಕೇಂದ್ರದ ಸಮೀಪದಲ್ಲಿರುವ ಈ ನೈಸರ್ಗಿಕ ಗುಹೆಗಳು ಇಲ್ಲಿನ ಹಿಂದೂ ದೇವಾಲಯಗಳ ಜಾಗವಾಗಿ ಮಾರ್ಪಟ್ಟಿವೆ. ಇಲ್ಲಿ ಕೆಲಸಕ್ಕಾಗಿ ಭಾರತದಿಂದ ಆಗಮಿಸಿದ ತಮಿಳರು ತಾವು ನಂಬಿದ ದೇವರಾದ ವೇಲಾಯುಧನನ್ನು ಈ ಗುಹೆಯಲ್ಲಿ ಸುಮಾರು 200 ವರ್ಷಗಳಷ್ಟು ಹಿಂದೆ ಸ್ಥಾಪಿಸಿ ಪೂಜಿಸಲು ಆರಂಭಿಸಿದರು. ಈಗಲೂ ಪ್ರತಿದಿನ ಪೂಜೆಗೊಳ್ಳಲ್ಪಡುವ ಇದು ಒಂದು ಯಾತ್ರಾಸ್ಥಳ ವಾಗಿಯೂ, ಪ್ರವಾಸೀ ತಾಣವಾಗಿಯೂ ಪ್ರಸಿದ್ಧವಾಗಿದೆ. ವರ್ಷದಲ್ಲಿ ಒಮ್ಮೆ ನಡೆಯುವ------- ಇಲ್ಲಿನ ವಾರ್ಷಿಕ ಅತ್ಯಂತ ಜನಪ್ರಿಯ ಉತ್ಸವ. ಇಲ್ಲಿನ ರಾಮಾಯಣದ ಗುಹೆಯಲ್ಲಿ ರಾಮಾಯಣದ ಸಂಪೂರ್ಣ ಕಥೆಯನ್ನು ಮೂರ್ತಿಗಳಲ್ಲಿ ಮನಮೋಹಕವಾಗಿ ಕಟ್ಟಿಟ್ಟಿದ್ದಾರೆ. ಇಲ್ಲೊಂದು ಹನುಮಾನ್ ದೇವಾಲಯವೂ ಇದೆ. ಹಸಿರಿನಿಂದ ತುಂಬಿದ ಈ ಜಾಗದಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ಈ ದೇವಾಲಯಗಳನ್ನು ನಿರ್ಮಿಸಿರುವುದು ಅದರ ಸೌಂದರ್ಯವನ್ನು ಹೆಚ್ಚಿಸಿದೆ.
       ಕೌಲಾಲಂಪುರ ನಗರ ಕೇಂದ್ರದಲ್ಲಿಯೂ ಭಾರತೀಯರ ಪ್ರಾಬಲ್ಯವನ್ನು ಕಾಣಬಹುದು. ನಗರದಲ್ಲಿಯೂ ಅನೇಕ ಜನಪ್ರಿಯ ದೇವಸ್ಥಾನಗಳಿವೆ. ಲಿಟಲ್ ಇಂಡಿಯಾ ಎಂದು ಕರೆಯಲ್ಪಡುವ ರಸ್ತೆಯಂತೂ ಭಾರತದ ಯಾವುದೋ ನಗರವನ್ನು ಸಂದರ್ಶಿಸಿದಂತೆ ಅನಿಸುತ್ತದೆ. ಇಲ್ಲಿ ಅನೇಕ ಭಾರತೀಯರು ಮನೆಗಳನ್ನು ಖರೀದಿಸಿ ಅಲ್ಲಿಯೇ ದೀರ್ಘಕಾಲದ ವೀಸಾವನ್ನು ಪಡೆದು ನೆಲಸಿಯೂ ಇದ್ದಾರೆ.

ಆಧುನಿಕ ಕೌಲಾಲಂಪುರ:-
ಕೌಲಾಲಂಪುರದ ಮತ್ತೊಂದು ಮುಖವೆಂದರೆ ಇದರ ಆಧುನಿಕತೆ. ಉನ್ನತ ಕಟ್ಟಡಗಳು, ವಿಶಾಲ ರಸ್ತೆಗಳು, ವೇಗದ ಸಾರಿಗೆ ವ್ಯವಸ್ಥೆ, ಮಿಂಚುವ ಶಾಪಿಂಗ್ ಮಾಲ್‌ಗಳು. ಆದರೆ ಇಲ್ಲಿನ ವಿಶಿಷ್ಟತೆ ಎಂದರೆ ಈ ಎಲ್ಲ ಆಧುನಿಕತೆಯ ಮಧ್ಯೆಯೂ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಸರ್ಕಾರ ನೀಡಿರುವ ಆದ್ಯತೆ.

ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ಪೆಟ್ರೋನಾಸ್ ಟವರ್ಸ್ (Petronas Twin Towers) ಕೌಲಾಲಂಪುರದ ಹೆಮ್ಮೆಯ ಚಿಹ್ನೆ. ಈ ಟವರ್‌ಗಳು ರಾತ್ರಿ ಹೊತ್ತಿನಲ್ಲಿ ಬೆಳಕಿನ ಹೊಳಪಿನಲ್ಲಿ ಮಿಂಚುತ್ತಾ ನೋಟಕ್ಕೆ ಅಸಾಧಾರಣ ಸೌಂದರ್ಯ ನೀಡುತ್ತವೆ. ಇವುಗಳ ಪಕ್ಕದಲ್ಲಿಯೇ ಸುಂದರವಾದ ಕೆಎಲ್‌ಸಿಸಿ ಪಾರ್ಕ್ (KLCC Park) ಇದೆ, ಇದು ಸ್ಥಳೀಯರು ಹಾಗೂ ಪ್ರವಾಸಿಗರು ವಿಶ್ರಾಂತಿ ಪಡೆಯಲು, ನಡಿಗೆ ಹೋಗಲು ಅತ್ಯಂತ ಇಷ್ಟಪಡುವ ಸ್ಥಳ.

ನಗರದ ಮೋನೊರೈಲ್ ಮತ್ತು ಮೆಟ್ರೋ ವ್ಯವಸ್ಥೆ ಅತ್ಯಂತ ಸುಗಮವಾಗಿದ್ದು, ಟ್ರಾಫಿಕ್ ಜಾಮಿನಿಂದ ದೂರವಾಗಲು ಸಹಾಯಮಾಡುತ್ತದೆ. ಈ ನಗರದಲ್ಲಿನ ಶಾಪಿಂಗ್ ಮಾಲ್‌ಗಳು—ಪೆವಿಲಿಯನ್ ಮಾಲ್, ಸುನ್‌ವೇ ಪಿರಮಿಡ್, ಮಿಡ್ ವ್ಯಾಲಿ ಮೆಗಾ ಮಾಲ್ ಮುಂತಾದವು—ಆಧುನಿಕ ಜೀವನಶೈಲಿಯ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತವೆ.

ಆಹಾರದ ವಿಷಯದಲ್ಲಿಯೂ ಕೌಲಾಲಂಪುರ ಅಚ್ಚರಿಯುಂಟುಮಾಡುತ್ತದೆ. ಚೀನೀ, ಮಾಲೆ, ಭಾರತೀಯ, ಪಾಶ್ಚಾತ್ಯ—ಎಲ್ಲ ಸಂಸ್ಕೃತಿಯ ಊಟಗಳನ್ನು ಇಲ್ಲಿ ರುಚಿಸಬಹುದು. ಬೀದಿ ಆಹಾರದಿಂದ ಹಿಡಿದು ಐದು ನಕ್ಷತ್ರದ ರೆಸ್ಟೋರೆಂಟ್‌ಗಳ ತನಕ ಪ್ರತಿಯೊಂದು ಹಂತದಲ್ಲಿಯೂ ವೈವಿಧ್ಯಮಯ ಆಯ್ಕೆಗಳಿವೆ. ಜಾಲನ್ ಅಲೋರ್- ಎನ್ನುವ ತಿನಿಸುಗಳ ರಸ್ತೆ ಬಹಳ ಪ್ರಸಿದ್ಧವಾದ ರಸ್ತೆಯಲ್ಲಿ ರಾತ್ರಿ ನಡೆಯುವುದೇ ಒಂದು ಅನುಭವ.ಕಿಕ್ಕಿರಿದ ಜನರಿಂದ ಕೂಡಿರುವ ಈ ಗಲ್ಲಿಯ ಇಕ್ಕೆಲಗಳಲ್ಲಿ ಎಲ್ಲ ರೀತಿಯ ಮಾಂಸಾಹಾರ ಮಾರುವ ಅಂಗಡಿಗಳು, ತಿನ್ನುವ ಜನಗಳು! 

ಗಗನ ಚುಂಬಿ ಕಟ್ಟಡಗಳ ಜಗಮಗಿಸುವ ಕೌಲಾಲಂಪುರದ ರಾತ್ರಿಯ ನೋಟ ಬಹಳ ಸುಂದರವಾಗಿರುತ್ತದೆ. ಆದ್ದರಿಂದಲೇ ಇಲ್ಲಿನ ಗಗನಚುಂಬಿ ಕಟ್ಟಡಗಳ ಮೇಲ್ಛಾವಣಿಯಲ್ಲಿನ ಹೋಟೆಲುಗಳು ಬಹಳ ಪ್ರಸಿದ್ಧ. ಪೆಟ್ರೋನಾಸ್ ಗೋಪುರದ ನೋಟವಿರುವ ಇಂತಹ ಹೋಟೆಲುಗಳಲ್ಲಿ ಜಾಗ ಕಾಯ್ದಿರಿಸಬೇಕಾಗುತ್ತದೆ. ಇಂದಿನ ಸಾಮಾಜಿಕ ಮಾಧ್ಯಮದ ರೀಲುಗಳ ಸಮಯದಲ್ಲಿ ಈ ಹೋಟೆಲುಗಳಲ್ಲಿ ಜಾಗ ಕಾಯ್ದಿರಿಸಿಕೊಂಡು ರೀಲು ಮಾಡಲೆಂದೇ ಜನರು ಬರುತ್ತಾರೆ !!!

ನಿದ್ರಿಸದ ನಗರ: -

ಪಬ್ ಸಂಸೃತಿಯ ಊರಾದ ಈ.ನಗರದ ತುಂಬೆಲ್ಲ ಪಬ್ಬುಗಳನ್ನು ಕಾಣಬಹುದು. ಮೋಜಿಗೆಂದೇ ಇಲ್ಲಿಗೆ ಬರುವ ಜನರು ರಾತ್ರಿಯಿಡೀ ಪಬ್ ನಿಂದ ಪಬ್ಬಿಗೆ ಸುತ್ತುತ್ತಾ ಮೋಜು ಮಾಡುತ್ತಾರೆ. ಮಸಾಜು ಮಾಡುವವರು, ಬೆಳೆವೆಣ್ಣುಗಳು- ಎಲ್ಲವೂ ಇಲ್ಲಿ ಅತ್ಯಂತ ಸುಲಭದಲ್ಲಿ ದೊರೆಯುತ್ತದೆ. ಇಲ್ಲಿನ ಬಹುತೇಕ ಮಸಾಜು ಕೇಂದ್ರಗಳು ರಾತ್ರಿಯಿಡೀ ತೆರೆದಿರುತ್ತದಂತೆ


ಕೌಲಾಲಂಪುರದಲ್ಲಿ ದಿನ ಕಳೆದರೆ ಅದು ಕೇವಲ ಪ್ರವಾಸವಲ್ಲ, ಅದು ಒಂದು ಅನುಭವ. ಸಂಸ್ಕೃತಿ, ಪ್ರಕೃತಿ, ಆಧುನಿಕತೆ, ಮನುಷ್ಯತ್ವ—ಎಲ್ಲವೂ ಸಮ್ಮಿಲನಗೊಂಡಿರುವ ಈ ನಗರ ಒಮ್ಮೆ ಭೇಟಿ ಮಾಡಬೇಕಾದ ಜಾಗ









ಗುರುವಾರ, ಜನವರಿ 29, 2026

ಮಸ್ಕತ್ತಿನಲ್ಲಿನಿರೂಪಕಿಯಾಗಿ ನಾನು:-



ಬದುಕೆಂಬ ಜಟಕಾ ಬಂಡಿ ನಮ್ಮನ್ನು ಇಪ್ಪತ್ತು ವರ್ಷಗಳ ಹಿಂದೆ ತಂದು ಹಾಕಿದ್ದು ಮಸ್ಕತ್ತೆಂಬ ಸುಂದರ ಊರಿಗೆ. ಯಾವುದೇ ನಿರೀಕ್ಷೆ ಇಲ್ಲದೇ ಕೇವಲ ಕುತೂಹಲದಿಂದ ಇನ್ನೊಂದು ದೇಶ ನೋಡೋಣ ಎಂದು ಈ ಊರಿಗೆ ಬಂದ ನಾವು ಇಲ್ಲಿಯೇ ಉಳಿದುಕೊಂಡೆವು. ಆಗ 6ವರ್ಷದ ಮಗಳ ತಾಯಿಯಾಗಿದ್ದ ನಾನು ಈಗ ಮಗಳ ಮದುವೆ ಮುಗಿಸಿ ಜೀವನದ ಇನ್ನೊಂದು ಹಂತದಲ್ಲಿದ್ದೇನೆ.

ಹಿಂದಿರುಗಿ ನೋಡಿದಾಗ ಮಸ್ಕತ್ ನಗರ ನನಗೆ ಎಷ್ಟೊಂದು ಸುಂದರ ನೆನಪುಗಳನ್ನು ಕೊಟ್ಟಿದೆಯಲ್ಲಪ್ಪ ಅನಿಸುತ್ತದೆ. ಸ್ನಾತಕೋತ್ತರ ಕಾನೂನು ಪಧವಿಧರೆಯಾಗಿ ನಾನು ಓದಿದ ವಿಷಯದಲ್ಲಿ ಇಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂದು ನನ್ನದೊಂದು ಬಯೋಡಾಟ ಮಾಡಲು ಹೆಣಗುತ್ತಲೇ ಇಲ್ಲಿನ ಕನ್ನಡ ಸಂಘದ ಸದಸ್ಯರಾದೆವು. ಕನ್ನಡ ಸಂಘದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಮಗಳನ್ನು ಸೇರಿಸಿಕೊಂಡು ಭಾಗವಹಿಸಲು ಆರಂಭಿಸಿದೆ. ಅದು ನನ್ನನ್ನು ಈ ಸಂಘದ ಒಳಗೆ ಕರೆದೊಯ್ದಿತು.
ಕನ್ನಡ ಸಂಘದ ವೇದಿಕೆಯಲ್ಲಿ ನೃತ್ಯ, ಶಾಸ್ತ್ರೀಯ ನೃತ್ಯ , ಅಡುಗೆ ಸ್ಪರ್ಧೆಯಲ್ಲಿ ಗೆಲುವು, ಕನ್ನಡ ಶಿಕ್ಸಕಿಯಾಗಿ ನನ್ನ ಸೇರ್ಪಡೆ - ಹೀಗೆ ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚುತ್ತಾ ಹೋಯಿತು.

ಒಮ್ಮೆ 2012 ರಲ್ಲಿ ಕರ್ನಾಟಕ ಸಂಘ ಆಯೋಜಿಸಿದ ನಾಟಕ ಕಾರ್ಯಕ್ರಮದ ನಿರೂಪಕಿಯ ಜವಾಬ್ದಾರಿ ನನ್ನ ಹೆಗಲೇರಿತು. ನಿರೂಪಕಿಯಾಗಿ  ನನಗೆ ದೊರೆತ ಮೆಚ್ಚುಗೆ ಮತ್ತು ಹೆಚ್ಚಿದ ಆತ್ಮವಿಶ್ವಾಸದಿಂದ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಮಸ್ಕತ್ ಭೇಟಿಯ ಕಾರ್ಯಕ್ರಮದ ನಿರೂಪಣೆಯನ್ನು ಒಪ್ಪಿಕೊಂಡೆ. ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದು ನಿಜವಾಗಿ ಒಂದು ಧನ್ಯತೆಯ ಭಾವವನ್ನು ತಂದಿತು. ಮುಂದೆ ಕನ್ನಡ ಸಂಘದ ಯುಗಾದಿ ಕಾರ್ಯಕ್ರಮ, ನಾಡಹಬ್ಬ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಓಂಕಾರ ಸಮಿತಿಯ ಜ್ಞಾನಾಮೃತ ಕಾರ್ಯಕ್ರಮದ ಶ್ರೀ ಗುರುರಾಜ ಕರ್ಜಗಿ ಮತ್ತು ಪಾವಗಡ ಪ್ರಕಾಶ್ ರಾವ್ ಅವರ ಕಾರ್ಯಕ್ರಮಗಳ ನಿರೂಪಣೆ. ಕಾರ್ಯಕ್ರಮದ ನಿರೂಪಕಿಯಾಗಿ ಅಷ್ಟು ದೊಡ್ಡ ವಿದ್ವಾಂಸರ ಹತ್ತಿರದ ಒಡನಾಟ ಒಂದು ಒಳ್ಳೆಯ ಅನುಭವ. ದೊಡ್ಡ ವಿದ್ವಾಂಸರ ಕಾರ್ಯಕ್ರಮವನ್ನು ನಿರೂಪಿಸಲು ಅವರ ಬಗೆಗೆ ನಾವು ಮಾಡುವ ಅಧ್ಯಯನ ನಮ್ಮ ಜ್ಞಾನವೃದ್ಧಿಗೆ ಕಾರಣವಾಗುವುದು ಒಂದು ಲಾಭ. ಪ್ರಕಾಶ್ ರಾವ್ ಅವರಿಂದ ಮೆಚ್ಚುಗೆ ಗಳಿಸಿದ್ದು ನನ್ನ ನಿರೂಪಣಾ ಅನುಭವಗಳ ಅತ್ಯುತ್ತಮ ಉಡುಗೊರೆ.

ಕನ್ನಡ ವಿದ್ಯಾರ್ಥಿಗಳಿಂದ ನಿರೂಪಣೆ:-

ಮಸ್ಕತ್ ಕನ್ನಡ ತರಗತಿಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ಗಳನ್ನು ನಿರೂಪಣೆ ಮಾಡಿಸಿದ್ದು ನನ್ನ ಇಲ್ಲಿನ ಕಾರ್ಯಕ್ರಮ ನಿರೂಪಣೆಗಳ ಇನ್ನೊಂದು ಗರಿ.  ಇಲ್ಲಿ ತಮ್ಮ ಮಾತೃಭಾಷೆಯನ್ನು ಓದಲು ಬರೆಯಲು ಕಲಿಯುತ್ತಿರುವ ಮಕ್ಕಳು ಕನ್ನಡದಲ್ಲಿ ನಿರೂಪಣೆ ಮಾಡುವುದು ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಕನ್ನಡ ಸಂಘದ ನಾಡಹಬ್ಬ ದಸರಾದ ಕಾರ್ಯಕ್ರಮವನ್ನು ನನ್ನ ವಿದ್ಯಾರ್ಥಿಗಳಾದ ಶಿಶಿರ ಮತ್ತು ಪ್ರೀತಿ ಸುಂದರವಾಗಿ ನಿರೂಪಿಸಿ ಎಲ್ಲರ ಮೆಚ್ಚಗೆ ಗಳಿಸಿದ್ದು ಒಂದು ಸವನೆನಪು. ಕಳೆದ ಹತ್ತು ವರ್ಷಗಳಿಂದ ಮಸ್ಕತ್ ಕನ್ನಡ ಶಾಲೆಯ ವಿದ್ಯಾರ್ಥಿಗಳೇ   ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ.

ಮಂಗಳವಾರ, ನವೆಂಬರ್ 25, 2025

ಭಾಗ 4- ನಮ್ಮ ಭಾಷೆ , ನಮ್ಮ ಹೆಮ್ಮೆ


"ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್" -
ಕವಿರಾಜಮಾರ್ಗ (9ನೆಯ ಶತಮಾನ)

ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣಿತಮತಿಗಳ್- ಕವಿರಾಜಮಾರ್ಗ(9ನೆಯ ಶತಮಾನ)

ನೆನೆವುದೆನ್ನ ಮನ  ಬನವಾಸಿ (ಕರ್ಣಾಟ) ದೇಶಮ್- ಆದಿಕವಿ ಪಂಪ(10ನೆಯ ಶತಮಾನ)

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು- ಕುವೆಂಪು(20ನೆಯ ಶತಮಾನ)

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು (21ನೆಯ ಶತಮಾನ)

ನಮ್ಮ ನಾಡು ಭಾಷೆಯ ಬಗೆಗೆ ಹೆಮ್ಮೆಯನ್ನು ತರಿಸುವ, ಸುಮಾರು ಕ್ರಿ.ಶ 9ನೆಯ ಶತಮಾನದಿಂದ ಇಂದಿನ 21ನೆಯ ಶತಮಾನದ ಕಾಲಘಟ್ಟದವರೆಗೆ ಹರಡಿ ಕೊಂಡಿರುವ ಘೋಷಣೆಗಳನ್ನು  ಕೇಳಿದೊಡನೆ ನಮ್ಮ ಭಾಷಾಭಿಮಾನ ನಮ್ಮಲ್ಲಿ ಜಾಗ್ರತಗೊಳ್ಳುತ್ತದೆ. ನಮ್ಮ ಭಾಷೆಯ ಬಗೆಗೆ ನಮ್ಮ ಹೆಮ್ಮೆ ಉಕ್ಕುತ್ತದೆ.

2000 ವರ್ಷಕ್ಕೂ ಮಿಕ್ಕಿದ ಇಂತಹ ಭವ್ಯ ಪರಂಪರೆಯಿರುವ  ಕನ್ನಡ ಭಾಷೆಯ ಮತ್ತು ಸಂಸ್ಕ್ರತಿಯ ಹಿನ್ನೆಲೆಯುಳ್ಳ ಅದರ ವಾರಿಸುದಾರರಾಗುರುವ ನಾವೆಲ್ಲ  ಆ ಪರಂಪರೆಯನ್ನು ಮುನ್ನೆಡೆಸಲು ಯೋಗ್ಯತೆಯನ್ನು ಗಳಿಸಿದರೆ ಮಾತ್ರ ಅದರ ನಿಜವಾದ ಬೆಲೆ ನಮಗೆ ಅರ್ಥವಾಗುತ್ತದೆ. ನಾನು ಇತ್ತೀಚೆಗೆ ಭಾಗವಹಿಸುತ್ತಿದ್ದ ಒಂದು ಸಭೆಯಲ್ಲಿ ಅನೇಕ ಭಾಷಣಕಾರರು ನಮ್ಮ ಭಾಷೆಯನ್ನು ಉಳಿಸುವ ಬೆಳೆಸುವ ಬಗೆಗೆ ಭಾಷಣಗಳನ್ನು ಮಾಡುತ್ತಿದ್ದರು ಘೋಷಣೆ ಗಳನ್ನು ಕೂಗುತ್ತಿದ್ದರು. ಈ ತರಹದ ಘೋಷಣೆಗಳು ಇತ್ತೀಚೆಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ನವೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಭಾಷೆಯ ಉಳಿವಿಗೆ ಇಂತಹ ಘೋಷಣೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ

        ಕನ್ನಡದ ಮೊದಲ ಲಿಖಿತ ದಾಖಲೆ ಹಲ್ಮಿಡಿ ಶಾಸನದ ಆಧಾರದ ಮೇಲೆ ಹೇಳುವುದಾದರೆ ನಮ್ಮ ಭಾಷೆ ಬರೆಯುವಷ್ಟು , ಆಡಳಿತ ಭಾಷೆಯಾಗುವಷ್ಟು ಸಾಮರ್ಥ್ಯ ಪಡೆದೇ 1500 ವರ್ಷಗಳಾಗಿವೆ. ಅದಕ್ಕೂ ಮೊದಲು ಅದು ಎಷ್ಟು ವರ್ಷಗಳಿಂದ ಮಾತನಾಡುತ್ತಿದ್ದರು ಎನ್ನುವುದನ್ನು ಅಂದಾಜು ಮಾಡಲು ಸಾಧ್ಯವಿಲ್ಲ.  ಜನರ ಆಡು ಮಾತಿನಲ್ಲಿ, ಜನಪದ ಹಾಡಿನಲ್ಲಿ, ಜಾನಪದ ಕಲೆಗಳಲ್ಲಿ ಭಾಷೆ ಸಹಜವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಿರುತ್ತದೆ. ಅಂದರೆ ಯಾರ ಸಹಾಯವೂ ಇಲ್ಲದೇ ತನ್ನಲ್ಲಿರುವ ಶಕ್ತಿಯಿಂದ ಭಾಷೆ ತಾನಾಗಿ ಇಷ್ಟು ಸಹಸ್ರಾರು ವರ್ಷ ಭವ್ಯವಾಗಿ ಬೆಳೆದು ಬಂದಿದೆ. 

ಒಬ್ಬ ಮನುಷ್ಯನ ಜೀವಿತಾವಧಿ ಹೆಚ್ಚೆಂದರೆ ನೂರು ವರ್ಷ. ಭಾಷೆಯ ಇತಿಹಾಸಕ್ಕೆ ಹೋಲಿಸಿದರೆ ನೂರು ವರ್ಷ ಅತ್ಯಂತ ಕಡಿಮೆ. ಈ ಭಾಷೆಯನ್ನು ಉಳಿಸಲು ನಾವು ಯಾರೂ ಅಲ್ಲ. ಈಗ ನಮಗೆ ಅದನ್ನು ಬಳಸುವ, ಅದರ ಭವ್ಯತೆಯನ್ನು ಮನಗಾಣುವ ಅಭಿಮಾನ ಶೂನ್ಯತೆ ತುಂಬಿದ್ದರೆ ಅದು ನಮ್ಮ ನಷ್ಟವೇ ಹೊರತು ಆ ಭಾಷೆಯ, ಪರಂಪರೆಯ ನಷ್ಟವಲ್ಲ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಕನ್ನಡ ಅಥವಾ ಪ್ರಪಂಚದ ಯಾವುದೇ ಭಾಷೆ ಬೆಳೆಯಬೇಕಾದರೆ ಅದು ಜನರ ದೈನಂದಿನ ಜೀವನದಲ್ಲಿ ಬಳಕೆಯಾಗಬೇಕು, ಮಕ್ಕಳು ಬೆಳೆಯುವಾಗ ಅವರು ಬೌದ್ಧಿಕವಾಗಿ ಆ ಭಾಷೆಯಲ್ಲಿ ಯೋಚಿಸಲು, ಚಿಂತಿಸಲು ತೊಡಗಬೇಕು. ಅವಾಗ ಮಾತ್ರ ಭಾಷೆ ಮುಂದಿನ ತಲೆಮಾರುಗಳಿಗೆ ಹರಿಯುತ್ತದೆ.  ನಮ್ಮ ಬೌದ್ಧಿಕ ಬೆಳವಣಿಗೆ ನಾವು ಪರ ಭಾಷೆಯಲ್ಲಿ ಮಾತನಾಡಿದಾಗ ಮಾತ್ರವೆಂದು ಜನ ಯೋಚಿಸತೊಡಗಿದಾಗ ಭಾಷೆ ಬಲಹೀನವಾಗುತ್ತದೆ. ಕನ್ನಡಿಗರು ಭಾಷೆಯ ಬಗೆಗೆ ಅಭಿಮಾನ ಶೂನ್ಯರು ಎನ್ನುವ ಅಭಿಮತ ಈಗ ಎಲ್ಲ ಕಡೆ ಇದೆ. ಹಾಗಾಗಿ ಕನ್ನಡಿಗರಾಗಿ ನಮ್ಮೆಲ್ಲರ ಮೊದಲ ಕರ್ತವ್ಯ ನಮ್ಮ ಮಕ್ಕಳಿಗೆ ನಾವು ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ಕನ್ನಡ ಮಾತನಾಡಲು, ಓದಲು ಬರೆಯಲು ಕಲಿಸುವುದು. ಮನೆಯಲ್ಲಿ ಖಡ್ಡಾಯವಾಗಿ ಕನ್ನಡ ಮಾತನಾಡುವುದು. ಇಷ್ಟು ಮಾಡಿದರೆ ಉಳಿದದ್ದೆಲ್ಲ ತಂತಾನೇ ಆಗುತ್ತದೆ. ಕನ್ನಡ ಭಾಷೆ ಮುಂದುವರಿಯುತ್ತದೆ, ಬೆಳೆಯುತ್ತದೆ.

ಈಗ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಪರಭಾಷೆಗಳ ಪ್ರಾಬಲ್ಯ, ಬೆಂಗಳೂರಿಗರ ಕಂಗ್ಲೀಷ್ ಕೇಳಿದಾಗ  ಕನ್ನಡದ ಭವಿಷ್ಯದ ಬಗೆಗೆ ಸ್ವಲ್ಪ ದಿಗಿಲಾಗುವುದು ಸಹಜ. ಆದರೆ ವಿಶಾಲ ಕರ್ನಾಟಕದ ಉಳಿದ ಕಡೆ ಕನ್ನಡ ಇನ್ನೂ ಭದ್ರವಾಗಿದೆ ಎನ್ನುವುದು ಸುಳ್ಳಲ್ಲ. ನಾನು ಕಳೆದವಾರದ ನನ್ನ ಲೇಖನದಲ್ಲಿ ಹೇಳಿದಂತೆ ತಂತ್ರಜ್ಞಾನದಲ್ಲಿ ಕನ್ನಡವನ್ನು ಬಳಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಕನ್ನಡದ ವಿವಿಧ ಪ್ರಾಂತಗಳ ವಿಶಿಷ್ಟವಾದ ಭಾಷೆಗಳೆಲ್ಲ ಸಾಮಾಜಿಕ ಜಾಲತಾಣಗಳ ಪ್ರಭಾವ ಆರಂಭವಾದ ಮೇಲೆ ತಮ್ಮ ಬಲವನ್ನು, ಪ್ರಭಾವವನ್ನು ಹೆಚ್ಚಿಸಿಕೊಂಡಿದೆ ಎಂದೇ ಹೇಳಬಹುದು. ಉದಾಹರಣೆಗೆ ಕುಂದಾಪುರ ಕನ್ನಡ ಈಗ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಮನು ಹಂದಾಡಿಯವರ ಕುಂದಗನ್ನಡದ ಹಾಸ್ಯ ಪ್ರಪಂಚದ ಎಲ್ಲೆಡೆ ಪಸರಿಸಲು ಸಾಧ್ಯವಾಗಿದ್ದು, ವಿಶ್ವ ಕುಂದಾಪ್ರ ಕನ್ನಡ ದಿನವೆಂದು ಕನ್ನಡದ ಈ ಉಪಭಾಷೆಯನ್ನು ವಿಶ್ವದಾದ್ಯಂತ ಸಂಭ್ರಮಿಸಲು ಸಾಧ್ಯವಾಗಿದ್ದು ತಂತ್ರಜ್ಞಾನದ ಸಹಾಯದಿಂದ. ಕಳೆದವಾರ ಬೆಂಗಳೂರಿನ ಒಂದು ಪುಸ್ತಕಸಂತೆಯಲ್ಲಿ ಜನ ಮುಗಿಬಿದ್ದು ಕನ್ನಡ ಪುಸ್ತಕಗಳನ್ನು ಕೊಳ್ಳುವುದನ್ನು ನೋಡಿದಾಗ ನಮ್ಮ ಭಾಷೆಗೆ ಇನ್ನೂ ಸಾವಿರಾರು ವರ್ಷಗಳ ಭದ್ರವಾದ ಭವಿಷ್ಯವಿದೆ ಅನ್ನಿಸಿತು. ಹಾಗಾಗಿ ಕನ್ನಡ ಭಾಷೆ ತನ್ನೆದುರಿಗೆ ಬಂದ ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಶಕ್ತಿಯನ್ನು ತಾನೇ ಪಡೆದಿದೆ. "ಕಲಿಯೋಕೆ ನೂರು ಭಾಷೆ, ಆಡೋಕೆ ಒಂದೇ ಭಾಷೆ- ಕನ್ನಡ" ಎಂಬ ನಿಯಮವನ್ನು ಕನ್ನಡಿಗರು ಖಡ್ಡಾಯವಾಗಿ ಪಾಲಿಸುವಂತಾಗಲಿ. ನಮ್ಮ ಭಾಷೆಯು ಅಚಂದ್ರಾರ್ಕವಾಗಿ ಉಳಿಯುವಂತಾಗಲಿ ಎನ್ನುವ ಆಶಯವನ್ನು  ಸಂಕಲ್ಪವನ್ನು ಈ ರಾಜ್ಯೋತ್ಸವದ ತಿಂಗಳಲ್ಲಿ ಮಾಡೋಣ

"ಸುಲಿದ ಬಾಳೆಯ ಹಣ್ಣಿನಂದದಿ,
ತೆಗೆದ ಸಿಗುರಿನ ಕಬ್ಬಿನಂದದಿ ,
ಅಳಿದ ಉಷ್ಣದ ಹಾಲಿನಂದದಿ
ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ
ತಿಳಿದು ತನ್ನೊಳು ತನ್ನ ಮೋಕ್ಷವ
ಗಳಿಸಿಕೊಂಡೊಡೆ ಸಾಲದೇ ಸಂಸ್ಕೃತದೊಳಿನ್ನಿನ್ನೇನು?" - ಎಂದು ಹದಿನೇಳನೆಯ ಶತಮಾನದಲ್ಲಿ ಮಹಾಲಿಂಗಕವಿ ಅವರು ಬರೆದ "ಅನುಭವಾಮೃತ" ಎಂಬ ಕೃತಿಯ ಒಂದು ಪದ್ಯಭಾಗದ ಸಾಲುಗಳಿಗೆ
"ಆಂಗ್ಲಭಾಷೆಯಿಲಿನ್ನೇನು? ಪರಭಾಷೆಗಳಲಿನ್ನೇನು?"- ಎಂದು ಸೇರಿಸುತ್ತಾ ನಮ್ಮ ಸುಂದರ ಭಾಷೆಯಾದ ಕನ್ನಡವನ್ನು ಸಹಜವಾಗಿ ಶುದ್ಧವಾಗಿ ಬಳಸೋಣ ; ಅತಿ ಅಗತ್ಯವಿಲ್ಲದೇ ಅನ್ಯ ಭಾಷೆಗಳಲ್ಲಿ ಸಂವಹನ ಮಾಡವುದು ಬೇಡ ಎಂಬ ಕಿವಿಮಾತನ್ನು ಹೇಳುತ್ತಾ ನನ್ನ ಈ ರಾಜ್ಯೋತ್ಸವ ತಿಂಗಳಿನ ವಿಶೇಷ ಲೇಖನ ಸರಣಿಯನ್ನು ಮುಗಿಸುತ್ತೇನೆ.

ಲೇಖನ: ಸುಧಾ ಶಶಿಕಾಂತ್, ಮಸ್ಕತ್




ಸೋಮವಾರ, ನವೆಂಬರ್ 17, 2025

ಭಾಗ 3- ತಂತ್ರಜ್ಞಾನದ ಯುಗದಲ್ಲಿ ಕನ್ನಡ





"ನಾವು ಕಾಲಕ್ಕೆ ತಕ್ಕಂತೆ ಕುಣಿಯಬೇಕು" - ಎನ್ನುವ ಪ್ರಸಿದ್ಧ ಕನ್ನಡ ಚಿತ್ರ ಗೀತೆಯ ಸಾಲು ಜೀವನದ ಗಹನವಾದ ತತ್ವವನ್ನು ಸರಳವಾಗಿ ಹೇಳುತ್ತದೆ. ಒಂದು ಭಾಷೆಯ ಪ್ರಸ್ತುತತೆಗೂ ಈ ತತ್ವವನ್ನು ಅಳವಡಿಸಬಹುದು. ಭಾಷೆ ಒಂದು ಜೀವಂತ ವಸ್ತು. ಅದು ಬದಲಾಗುತ್ತಾ, ಅಭಿವೃದ್ಧಿ ಹೊಂದುತ್ತಾ, ಕಾಲಕ್ಕೆ ತಕ್ಕಂತೆ ಇದ್ದಾಗ ಮಾತ್ರ ಅದರ ಬದುಕು ಸಫಲವಾಗುತ್ತದೆ.

ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡಿಜಿಟಲ್ ಪಠ್ಯ ಸಂಗ್ರಹ, ಇ-ಗ್ರಂಥಾಲಯ, ಆನ್ಲೈನ್‌ ಶಿಕ್ಷಣ, ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣಗಳು - ಇವೆಲ್ಲ ಇಂದಿನ ಜೀವನದ ಅವಿಭಾಜ್ಯ ಅಂಗ. ಅವುಗಳಿಲ್ಲದೆ ನಮ್ಮ ದಿನವನ್ನು ಯೋಚಿಸಲು ಸಾಧ್ಯವಿಲ್ಲ. ಮನೆಯಲ್ಲಿನ ದೀಪವನ್ನು ಬೆಳಗಿಸಲು, ಕಚೇರಿಯ ಕೆಲಸ, ಬ್ಯಾಂಕಿಂಗ್, ವೈದ್ಯಕೀಯ, ಪ್ರಯಾಣ, ಪಾಠಗಳು, ತರಬೇತಿಗಳು, ಸಂಗೀತ ನ್ರತ್ಯ ಮುಂತಾದ ಕಲೆಗಳ ಕಲಿಕೆ—ಎಲ್ಲೆಲ್ಲೂ ಯಂತ್ರ, ಡೇಟಾ ಮತ್ತು ತಂತ್ರಜ್ಞಾನ ನಮ್ಮ ಅವಿಭಾಜ್ಯ ಸಂಗಾತಿ. ಜೀವನದ ಯಾವ ಭಾಗವೂ ತಂತ್ರಜ್ಞಾನದ ಪ್ರಭಾವದಿಂದ ಹೊರತಾಗಿಲ್ಲ. ಅಂತೆಯೇ ತಂತ್ರಜ್ಞಾನ ವನ್ನು ಬಿಟ್ಟು ಯಾವುದೇ ಭಾಷೆ ಉಳಿಯುವುದು ಅಸಾಧ್ಯವೆನ್ನುವುದು ಸತ್ಯ. ಹಾಗಾಗಿ ನಮ್ಮ ಭಾಷೆಯನ್ನು ಈ ಮಾಧ್ಯಮಗಳ ಮೂಲಕ ಹೇಗೆ ಸಶಕ್ತಗೊಳಿಸಬಹುದು ಎಂದು ನಾವು ಯೋಚಿಸುವುದು ಬಹಳ ಅಗತ್ಯ ಅನಿಸುತ್ತದೆ. ಈ ಪೈಪೋಟಿಯ ಜಗತ್ತಿನಲ್ಲಿ ನಮ್ಮ ಕನ್ನಡವೂ ತಂತ್ರಜ್ಞಾನವನ್ನು ಅಪ್ಪಿಕೊಂಡಾಗ ಮಾತ್ರ ತನ್ನ ಸ್ಥಾನವನ್ನು ಉಳಿಸಿಕೊಳ್ಳುತ್ತದೆ. 

 *ಡಿಜಿಟಲ್ ಕನ್ನಡದ ಬೆಳವಣಿಗೆ* 
ಇಂದು ಭಾಷೆ ಬದುಕಲು ಕಾಗದ-ಪುಸ್ತಕ ಸಾಕಾಗುವುದಿಲ್ಲ. ಡಿಜಿಟಲ್‌ ಜಗತ್ತಿನಲ್ಲಿ ತನ್ನ ಸ್ಥಳವನ್ನು ಗೆಲ್ಲಬೇಕು.ಈಗಾಗಲೇ ಕನ್ನಡದ ಬಳಕೆಯನ್ನು ಸಾಕಷ್ಟು ಅಂತರ್ಜಾಲ ದಲ್ಲಿ ಕಾಣುತ್ತಿದ್ದೇವೆ. 
• ಡಿಜಿಟಲ್ ಪುಸ್ತಕಗಳು, ಆಡಿಯೋ ಪುಸ್ತಕಗಳು, ಈ-ಮ್ಯಾಗಜೀನ್‌ಗಳು ಲಭ್ಯವಾಗುತ್ತಿವೆ - ಇವುಗಳೆಲ್ಲ ನಮ್ಮ ಅಂಗೈಯಲ್ಲಿ ಬೇಕೆಂದಾಗ ಓದಲು ಸಿಗುವುದರಿಂದ ಆಸಕ್ತರಿಗೆ ಬೇಕಾದ ಪುಸ್ತಕಗಳನ್ನು ಪಡೆದುಕೊಳ್ಳುವುದು ಸುಲಭವಾಗಿದೆ. ಲೇಖಕರಿಗೆ ವಾಚಕರನ್ನು ತಲುಪುವುದೂ ಬಹಳ ಸುಲಭ
• ವಿಶ್ವವಿದ್ಯಾಲಯಗಳ ಪಠ್ಯಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳು ಆನ್ಲೈನ್‌ನಲ್ಲಿ ದೊರೆಯುತ್ತಿವೆ
• ಕನ್ನಡದಲ್ಲಿ ಮೊಬೈಲ್ ಕೀಬೋರ್ಡ್‌ ಮತ್ತು ಧ್ವನಿ ಆಧಾರಿತ ಟೈಪಿಂಗ್ ಕನ್ನಡದಲ್ಲಿ ಬರೆಯುವುದನ್ನು ಸುಲಭವಾಗಿಸಿದೆ
• ಅನುವಾದ ವ್ಯವಸ್ಥೆಗಳು (ಗೂಗಲ್ ಲೈವ್ ಭಾಷಾಂತರ) ಮತ್ತು ಕನ್ನಡ ಚಾಟ್‌ಬಾಟ್‌ಗಳು ಬೆಳೆಯುತ್ತಿವೆ - ಇವುಗಳಿಂದ ಭಾಷಾಂತರ, ಪರಭಾಷಿಕರೊಡನೆ ಸಂವಹನ ಸುಲಭವಾಗಿದೆ
• ಯೂಟ್ಯೂಬ್ ಚಾನಲ್‌ಗಳು, ಪಾಡ್‌ಕಾಸ್ಟ್‌ಗಳು, ಬ್ಲಾಗ್‌ಗಳು ಕನ್ನಡ ಅಭಿರುಚಿಯನ್ನು ಬೆಳೆಸುತ್ತಿವೆ - ಲೇಖಕರ ಮತ್ತು ಓದುಗರ ನಡುವಿನ ಸಂವಹನವನ್ನು ಇದು ಹಿಂದೆಂದಿಗಿಂತಲೂ ಸಮರ್ಥವಾಗಿ ಈ ಅಂತರ್ಜಾಲದ ಮಾಧ್ಯಮಗಳು ಮಾಡುತ್ತಿವೆ.
• ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇಂಸ್ಟಾ ಗ್ರಾಮ್ ಗಳಲ್ಲಿ ಸಾಹಿತ್ಯಪ್ರಿಯರ ಗುಂಪುಗಳನ್ನು ಮಾಡಿಕೊಂಡು ಪುಸ್ತಕ ವಿಮರ್ಶೆ, ಓದು, ಸಂದರ್ಶನಗಳು ನಡೆಯುತ್ತಿವೆ. 
• ಗೋಖಲೆ ಸಂಸ್ಥೆ ಮುಂತಾದ ಕನ್ನಡದ ಪ್ರಮುಖ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳನ್ನು ಯೌಟ್ಯೂಬ್ ನೇರಪ್ರಸಾರ ಮಾಡುವುದರಿಂದ ಪ್ರಪಂಚದ ಯಾವುದೇ ಭಾಗದಲ್ಲಿದ್ದರೂ ನಿಮ್ಮ ಆಸಕ್ತಿಯ ಕ್ಷೇತ್ರದ ಕಾರ್ಯಕ್ರಮಗಳನ್ನು ನೋಡುವುದು ಬಹಳ ಸುಲಭ. ಹಾಗಾಗಿ ದೇಶ, ಗಡಿಗಳ ನಿರ್ಬಂಧವಿಲ್ಲದೇ ಕಾರ್ಯಕ್ರಮಗಳನ್ನು ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ತಲುಪಲು ಸಾಧ್ಯ

ಇವುಗಳೆಲ್ಲ ತಲೆಮಾರುಗಳ ನಡುವಣ ಕೊಂಡಿಯಾಗಿ ನಮ್ಮ ಭಾಷೆಯನ್ನು ಅಂತರ್ಜಾಲದ ಯುಗಕ್ಕೆ ಸಿದ್ದ ಮಾಡುತ್ತಿದೆ.  ಈ ಹೊಸ ಸನ್ನಿವೇಶದಲ್ಲಿ ದೇಶದ ಗಡಿ ಭಾಷೆಯನ್ನು ನಿರ್ಬಂಧಿಸುವುದಿಲ್ಲ. ತಂತ್ರಜ್ಞಾನದ ಮೂಲಕ ಭಾಷೆಯ ಹೊಸ ಸಾಧ್ಯತೆಗಳನ್ನು ಅರಿತು ನಮ್ಮ ಭಾಷೆಯನ್ನು ವಿಶ್ವಭಾಷೆಯನ್ನಾಗಿಸುವುದು ಸುಲಭ.
ಇನ್ನೂ ಕನ್ನಡದಲ್ಲಿ ರಚನೆಯಾಗುವ  ವಿಷಯಗಳ ಪ್ರಮಾಣ ಹೆಚ್ಚಬೇಕು. ಕನ್ನಡದಲ್ಲಿ ಗೂಗಲ್, ಯೂಟ್ಯೂಬ್‌, ವಿಕಿಪೀಡಿಯಾ, ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಗುಣಮಟ್ಟದ ವಿಷಯಗಳು ಹೆಚ್ಚಿದಂತೆ ನಮ್ಮ ಭಾಷೆ ವಿಶ್ವಮಟ್ಟಕ್ಕೆ ತಲುಪುತ್ತದೆ. ಇವೆಲ್ಲವೂ ಕನ್ನಡವನ್ನು ಜನಜೀವನದಲ್ಲಿ ಬಲವಾಗಿಸಿ ಹೊಸ ತಲೆಮಾರಿಗೆ ಕನ್ನಡ ಆಧುನಿಕತೆಯಿಂದ ಕೂಡಿದ ಭಾಷೆ ಎಂಬ ಭಾವವನ್ನು ಹುಟ್ಟಿಸುತ್ತಿವೆ.


 *ಕನ್ನಡ ಕಲಿಕೆಯಲ್ಲಿ ತಂತ್ರಜ್ಞಾನ:-* 

ಕನ್ನಡದಲ್ಲಿ ಬರೆಯುವಂತೆ, ಮಾತನಾಡುವಂತೆ, ಕಲಿಯುವಂತೆ ಮಾಡುವ ಕೆಲಸ ಮನೆ, ಶಾಲೆ ಮತ್ತು ಸಮುದಾಯದಿಂದಲೇ ಆರಂಭವಾಗಬೇಕು. 
ಪರಭಾಷಾ ದಾಸ್ಯ ಭಾವನೆಯನ್ನು ಬಿಟ್ಟು ಭಾಷೆಗಳ ಬಗೆಗೆ ಮಕ್ಕಳಿಗೆ ಪ್ರೀತಿಯನ್ನು ಬೆಳೆಸುವುದು, ಸಾಧ್ಯವಾದಷ್ಟು ಭಾಷೆಯನ್ನು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸುವುದು ನಿಜವಾಗಿ ತಂದೆತಾಯಿಗಳು ಮಾಡಬೇಕಾದ ಕೆಲಸ. ಮಾತೃಭಾಷೆಯನ್ನು ಶುದ್ಧವಾಗಿ ಮಾತನಾಡಲು ಬರುವುದು ಮಕ್ಕಳ ವ್ಯಕ್ತಿತ್ವಕ್ಕೆ ಉತ್ತಮ ಆತ್ಮವಿಶ್ವಾಸ ವನ್ನು ಕೊಡುತ್ತದೆ. ತಂತ್ರಜ್ಞಾನದ ಲಾಭವನ್ನು ಪಡೆದು ಕನ್ನಡ ಭಾಷಾ ಕಲಿಕೆಯಲ್ಲಿ ಇದನ್ನು ಬಳಸುವ ಕೆಲಸ ಆಗಲೇ ಆರಂಭವಾಗಿದೆ.
ವಿದೇಶದಲ್ಲಿ ವಾಸಿಸುವ ಅನೇಕ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ತಂತ್ರಜ್ಞಾನವನ್ನು ಕನ್ನಡ ಕಲಿಕೆಯಲ್ಲಿ ಬಳಸಲು ಮಾಡಿದ ಕೆಲಸಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ

• ಕನ್ನಡ ಶಾಲೆಗಳು, ಕನ್ನಡ ಸಾಹಿತ್ಯ ವೇದಿಕೆಗಳು, ಆನ್ಲೈನ್‌ ತರಗತಿಗಳು - ಎಲ್ಲ ಕನ್ನಡದಲ್ಲಿ ನಡೆಯುತ್ತಿವೆ. 
• ಮಕ್ಕಳಿಗೆ ಕನ್ನಡ ಕಲಿಸಲು ಅನೇಕ ಆಪ್ ಗಳ ಬೆಳವಣಿಗೆಯಾಗಿದೆ. 
• ಅಮೆರಿಕದಲ್ಲಿ ಆರಂಭಗೊಂಡ ಕನ್ನದ ಅಕಾಡೆಮಿ ಕನ್ನಡವನ್ನು ಮಕ್ಕಳಿಗೆ ಕಲಿಸಲು ಅಂತರ್ಜಾಲದಲ್ಲಿಯೇ ಬೇಕಾದ ಎಲ್ಲ ಪರಿಕರಗಳನ್ನು ತಯಾರಿಸಿ ಕನ್ನಡ ಕಲಿಕೆಯನ್ನು ಕಂಪ್ಯೂಟರೀಕರಿಸಿದೆ

ಮಕ್ಕಳು ಮೊಬೈಲ್ ಹಿಡಿದುಕೊಂಡಾಗ ಅವರನ್ನು ಕನ್ನಡದಲ್ಲಿ ಸಂವಹಿಸಲು ಪ್ರೋತ್ಸಾಹಿಸಬೇಕು. ಅವರಿಗೆ ಆಸಕ್ತಿ ಹುಟ್ಟಿಸುವಂತಹ ಚಟುವಟಿಕೆಯನ್ನು ನಮ್ಮ ಭಾಷೆಯಲ್ಲಿ ಮೊಬೈಲಿನಲ್ಲಿಯೇ ದಿನಕ್ಕೆ ಸ್ವಲ್ಪಹೊತ್ತು ಮಾಡಬಹುದು.  ನಾವೆಲ್ಲ ಮಾತನಾಡುವುದು ಮಾತ್ರವಲ್ಲ ಸಾಧ್ಯವಾದಲ್ಲೆಲ್ಲ ಅಂದರೆ ವಾಟ್ಸಪ್ ನಲ್ಲಿ ಸಂದೇಶ ಕಳುಹಿಸುವಾಗ, ಹಬ್ಬಗಳ ಶುಭಾಶಯಕೋರಿಕೊಳ್ಳುವಾಗ ಕನ್ನಡದಲ್ಲಿಯೇ ಖಡ್ಡಾಯವಾಗಿ ಬರೆದರೆ ನಮ್ಮ ಮಕ್ಕಳು ಅದನ್ನು ಓದಿಯೇ ಓದುತ್ತಾರೆ.


 ಕೇವಲ ಭಾವನಾತ್ಮಕವಾಗಿ ಭಾಷೆಯನ್ನು ಪ್ರೀತಿಸುವುದರಿಂದ ಸಾಕಾಗದು; ಅದನ್ನು ಉಪಯೋಗಿಸುವ, ಪೋಷಿಸುವ, ತಂತ್ರಜ್ಞಾನದಲ್ಲಿ ಬೆಳೆಸುವ ಜವಾಬ್ದಾರಿಯೂ ನಮ್ಮದೆ ಎನ್ನುವುದನ್ನು ಎಲ್ಲರೂ ಅರಿತರೆ ಕನ್ನಡವು ಇನ್ನೂ ಉಜ್ವಲ ಭವಿಷ್ಯದ ಹೊಸ್ತಿಲಿನಲ್ಲಿದೆ ಎನ್ನುವುದು ಖಂಡಿತಾ.ಈಗ ನಡೆಯುತ್ತಿರುವ ಪ್ರಯತ್ನ ವನ್ನು ಸಮರ್ಥವಾಗಿ ಮುಂದುವರಿಸಿ ಪ್ರಪಂಚದಾದ್ಯಂತ ಬೆಳೆಯುವ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ  ಇನ್ನೂ ಹೆಚ್ಚಿನ ಉತ್ಸಾಹದಿಂದ ನಡೆಯಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು ಎನ್ನುವ ಕಗ್ಗದ ಸಾಲುಗಳಂತೆ ತಂತ್ರಜ್ಞಾನ ವೆಂಬ ಹೊಸಚಿಗುರಿನೊಂದಿಗೆ  ಸಮೃದ್ಧ ಕನ್ನಡ ಭಾಷೆಯೆಂಬ ಹಳೆ ಬೇರನ್ನು ಕೂಡಿಸಿ ಸೊಗಸಾದ ಮರವನ್ನು ಬೆಳೆಸಲು ಖಂಡಿತಾ ಸಾಧ್ಯ. 

ಲೇಖನ: ಸುಧಾ ಶಶಿಕಾಂತ್, ಮಸ್ಕತ್


Published in Desiswara on 22-11-2025







 ಮತ್ತೆ ಬಂದಿತು ರಾಜ್ಯೋತ್ಸವ 

 (ಭಾಗ 2): ಹೊರನಾಡ ಕನ್ನಡಿಗರು ಮತ್ತು ಕನ್ನಡ ಭಾಷೆ 


ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ, ಹೆಮ್ಮೆ ಉಂಟಾಗುವುದು ನಾವು ನಮ್ಮ ಮಣ್ಣಿನಿಂದ ದೂರ ಹೋದಾಗ ಎನ್ನುವುದು ನನ್ನ ಸ್ವಂತ ಅನುಭವ.  ನನ್ನ ವೈವಾಹಿಕ ಜೀವನದ 30ವರ್ಷಗಳಲ್ಲಿ ಮೊದಲ 10 ವರ್ಷ ಹೊರನಾಡ ಕನ್ನಡಿಗಳಾಗಿ ಕಳೆದಿದ್ದೇನೆ ; ಉಳಿದ ಇಪ್ಪತ್ತು ವರ್ಷವಿದೇಶಿ ಕನ್ನಡಿಗಳಾಗಿ ಕಳೆದಿದ್ದೇನೆ. ಆದರೆ ಅಷ್ಟೂ ವರ್ಷಗಳೂ ಕನ್ನಡದೊಂದಿಗಿನ ನನ್ನ ನಂಟು ಜಾಸ್ತಿಯಾಗಿದ್ದಲ್ಲದೇ ಸ್ವಭಾಷೆಯ ದೊಡ್ಡ ಸ್ನೇಹಿತರ ಬಳಗವನ್ನು, ವಿವಿಧ ಕನ್ನಡ ಚಟುವಟಿಕೆಗಳಲ್ಲಿ  ತೊಡಗಿಕೊಳ್ಳುವ ಅವಕಾಶವನ್ನೂ ಈ ಜೀವನ ನನಗೆ ಒದಗಿಸಿ ನನ್ನನ್ನು ಅಪ್ಪಟ ಹೆಮ್ಮೆಯ ಕನ್ನಡಿಗಳನ್ನಾಗಿಸಿದೆ. ಅನ್ಯ ಭಾಷೆಯ  ನೆಲದಲ್ಲಿ ಜೀವನ ಮಾಡಲು ಅರಂಭಿಸಿದಾಗ ಕಿವಿಯ ಮೇಲೆ ನಮ್ಮ ಭಾಷೆ ಬಿದ್ದರೆ — ಅನಾಯಾಸವಾಗಿ ಮುಖದಲ್ಲಿ ನಗು ಮೂಡುತ್ತದೆ,  ಕೂಡಲೇ ತಿರುಗಿ ಕೇಳುತ್ತೇವೆ — "ನೀವು ಕನ್ನಡದವರಾ? ಯಾವ ಊರಿನವರು?" - ಹೀಗೆ ಸಂಭಾಷಣೆ ಆರಂಭವಾಗಿ ಅಜ್ಞಾತರ ನಡುವಿನ ಬಂಧವೂ ರೂಪುಗೊಳ್ಳುತ್ತದೆ. ಭಾಷೆ ನಮ್ಮನ್ನು ಹತ್ತಿರಕ್ಕೆ ತರುವ ಸೇತುವೆಯಂತೆ ಕೆಲಸ ಮಾಡುತ್ತದೆ. ಅದರ ಫಲವೇ ಭಾರತದ ಬೇರೆ ಬೇರೆ ಊರುಗಳಲ್ಲಿ, ಪ್ರಪಂಚದಾದ್ಯಂತ ಬೆಳೆಯುತ್ತಿರುವ ಕನ್ನಡ ಸಂಘಗಳು ಮತ್ತು ಸಂಘಟನೆಗಳು. ಹೊರನಾಡ ಮತ್ತು ಹೊರದೇಶದ ಕನ್ನಡಿಗರು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಅಸಾಧಾರಣ ಪಾತ್ರವಹಿಸಿದ್ದಾರೆ, ವಹಿಸುತ್ತಿದ್ದಾರೆ.

ಹೊರನಾಡ ಕನ್ನಡಿಗರು:- 

ಭಾರತದ ಪುಣೆ, ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಅಹ್ಮದಾಬಾದ್ ಮುಂತಾದ ಕನ್ನಡೇತರ ಮಹಾನಗರಗಳಲ್ಲಿ ಕನ್ನಡಿಗರು ಸಂಘಟಿತರಾಗಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳ ಮೂಲಕ ಕನ್ನಡದ ಕಾಯಕವನ್ನು ಹಲವು ದಶಕಗಳಿಂದ ಮಾಡುತ್ತಿದ್ದಾರೆ. ಅವರ ಮಕ್ಕಳಿಗೆ ಕನ್ನಡ ಕಲಿಸುವ ಕನ್ನಡ ಶಾಲೆಗಳು, ಹಬ್ಬ ಹರಿದಿನಗಳಲ್ಲಿ ಆಯೋಜಿಸುವ ಕನ್ನಡ ಹಬ್ಬಗಳು, ನಾಟಕಗಳು, ಕಾವ್ಯಗೋಷ್ಠಿಗಳು — ಇವೆಲ್ಲ ಭಾಷೆಯನ್ನು ಉಳಿಸಲು, ಬೆಳೆಸಲು ಉತ್ತಮ ದಾರಿಗಳು. ಮುಂಬೈ ಮತ್ತು ದೆಹಲಿಯ  ವಿಶ್ವ ವಿದ್ಯಾಲಯಗಳಲ್ಲಿರುವ ಕನ್ನಡ ಪೀಠ ಕನ್ನಡದ ಬಗೆಗೆ ಸಂಶೋಧನೆ ಮಾತ್ರವಲ್ಲದೆ ಅನೇಕ  ಲೇಖಕರನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದೆ. ದೆಹಲಿ, ಮುಂಬೈ ಕನ್ನಡ ಸಂಘಗಳಂತೂ ತಮ್ಮ ವಿವಿಧ ಚಟುವಟಿಕೆಗಳ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಮುಂಚೂಣಿಯಲ್ಲಿ ನಿಂತಿವೆ. ದೆಹಲಿಯ ಕನ್ನಡ ಭವನ, ಮುಂಬೈ ಕನ್ನಡಿಗರ ಅನೇಕ ಸಾಂಸ್ಕೃತಿಕ ಕೇಂದ್ರಗಳು ಹಲವು ದಶಕಗಳಿಂದ ಕನ್ನಡ ಭಾಷೆ ಸಂಸ್ಕೃತಿಯು ಅನ್ಯ ಭಾಷೆಯ ನೆಲದಲ್ಲಿ  ನೆಲೆಯೂರಲು ಕಾರಣವಾಗಿದೆ. ಪುಣೆಯ ಕನ್ನಡ ಸಂಘದ ಭಾಗವಾಗಿದ್ದ ನಾನು ಎಸ್. ಎಲ್. ಭೈರಪ್ಪನವರ ಸಂಪೂರ್ಣ ಸಾಹಿತ್ಯವನ್ನು ಅಲ್ಲಿನ ಗ್ರಂಥಾಲಯದಲ್ಲಿಯೇ ಓದಿದ್ದು !! - ಅನ್ಯ ನೆಲದಲ್ಲಿ ನಮ್ಮ ಭಾಷೆಯವರ ಗುಂಪು ಸಾಧ್ಯವಾಗಿಸಬಹುದಾದ ಕನ್ನಡಮಯ ಪರಿಸರಕ್ಕೆ ಇದೊಂದು ಚಿಕ್ಕ ಉದಾಹರಣೆ. 


 ವಿದೇಶಿ/ಅನಿವಾಸಿ  ಕನ್ನಡಿಗರು:- 

ಅಮೆರಿಕಾ, ಆಸ್ಟ್ರೇಲಿಯಾ, ದುಬೈ, ಮಲೇಶಿಯಾ, ಸಿಂಗಪೂರ್, ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳಲ್ಲಿ ಅನಿವಾಸಿ ಕನ್ನಡಿಗರು ಅನೇಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅವರ ಕಾರ್ಯಕ್ರಮಗಳಲ್ಲಿ “ಕನ್ನಡ ರಾಜ್ಯೋತ್ಸವ”, “ಯುಗಾದಿ”, “ದಸರಾ”, “ದೀಪಾವಳಿ” ಹೀಗೆ ಹಬ್ಬಗಳನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುತ್ತಿದ್ದಾರೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ನಡೆಯುವ  ವಾರ್ಷಿಕ ಅಕ್ಕ (AKKA) ,  ನಾವಿಕ (NAVIKA) ಸಮ್ಮೇಳನಗಳಂತೂ  ಕನ್ನಡದ ಕಲಾವಿದರಿಗೆ, ಸಾಹಿತಿಗಳಿಗೆ ಅಂತಾರಾಷ್ಟ್ರೀಯ ವೇದಿಕೆ ಒದಗಿಸುತ್ತಾ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. 

         ನಾನಿರುವ ಮಸ್ಕತ್ತಿನಲ್ಲಿ  ಕನ್ನಡ ಸಂಘ, ಓಂಕಾರ ಸಮಿತಿ, ಚಾಲುಕ್ಯ ಕೂಟ, ಬಸವ ಬಳಗ, ಮುಂತಾದ ವೇದಿಕೆಗಳ ಮೂಲಕ ಕನ್ನಡ ಚಟುವಟಿಕೆಗಳು ಅನೇಕ ವಿಧವಾಗಿ ನಡೆಯುತ್ತಿದೆ. ಈ ವೇದೀಕೆಗಳ ಮುಖಾಂತರ ರಾ. ಗಣೇಶ, ಗುರುರಾಜ ಕರ್ಜಗಿ, ಪ್ರಭಾತ್ ಕಲಾವಿದರು, ಸಿ ಅಶ್ವಥ್, ವಿಜಯಪ್ರಕಾಶ್, ಮೈಸೂರು ಮಹಾರಾಜರು, ಪಾವಗಡ ಪ್ರಕಾಶ ರಾವ್, ಬಿ. ಎಂ. ಹೆಗ್ಡೆ, ವಿಶ್ವೇಶ್ವರ ಭಟ್ - ಮುಂತಾದ ಕನ್ನಡದ ಹೆಸರಾಂತ ವ್ಯಕ್ತಿಗಳನ್ನು ಬೇಟಿಮಾಡುವ ಸೌಭಾಗ್ಯ ಇಲ್ಲಿನ ಕನ್ನಡಿಗರದ್ದಾಗಿದೆ.

        ಇಲ್ಲೆಲ್ಲ ವಾರಾಂತ್ಯದ ಕನ್ನಡ ತರಗತಿಗಳ ಮೂಲಕ ಇಲ್ಲಿ ಬೆಳೆಯುವ ಮಕ್ಕಳಿಗೆ ಕನ್ನಡ ಓದಲು ಬರೆಯಲು ಕಲಿಸುವ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ “ವಾಟ್ಸಪ್ ಕನ್ನಡ ಗುಂಪುಗಳು”, “ಯೂಟ್ಯೂಬ್ ಕನ್ನಡ ಚಾನೆಲ್‌ಗಳು”, “ಆನ್‌ಲೈನ್ ಪಾಠಗಳು” ಅವರ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸುತ್ತಿವೆ. ನಮ್ಮ ಭಾಷೆಯ ಜನರನ್ನು ಒಂದುಗೂಡಿಸಲು ತಂತ್ರಜ್ಞಾನವೂ ಉತ್ತಮ ಕೊಡುಗೆಯನ್ನು ನೀಡುತ್ತಿದೆ.  ಕೊರೋನಾ ಸಮಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನಾಗಾಭರಣ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ನಡೆಯುವ ಕನ್ನಡ ತರಗತಿಗಳ ಶಿಕ್ಷಕರನ್ನು ಒಂದು ವಾಟ್ಸಾಪ್ ಗುಂಪಿನ ಒಳಗಡೆ ತಂದಿದ್ದು ಒಂದು ದೊಡ್ಡ ಸಾಧನೆ. ಈ ಗುಂಪು ಈಗಲೂ ಕನ್ನಡ ಚಟುವಟಿಕೆಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯಾಗಿ ಕೆಲಸ ಮಾಡುತ್ತಿದೆ. ಎಲ್ಲ ಕಡೆಯಲ್ಲಿನ ಕನ್ನಡ ಸಂಘಗಳು ಹೊರತರುವ ಈ-ಪತ್ರಿಕೆಗಳೂ ಈ ಗುಂಪಿನ ಮೂಲಕ ಪ್ರಸಾರವಾಗುತ್ತಿವೆ. 

     ನಡುನಾಡೆ ಇರಲಿ ಗಡಿನಾಡೇ ಇರಲಿ ಕನ್ನಡದ ಕಳೆಯ ಕೆಚ್ಛೆವು ಎನ್ನುವ ಕರ್ಕಿಯವರ ಸಾಲುಗಳ್ಳನ್ನು ಸಾಕಾರಗೊಳಿಸುತ್ತಾ  ಈ ಚಟುವಟಿಕೆಗಳು ಹೊರನಾಡ ಕನ್ನಡಿಗರ ಮನದಲ್ಲಿ ‘ ನಾನು ಕನ್ನಡಿಗ’ ಎಂಬ ಭಾವನೆಯನ್ನು ಮೂಡಿಸುತ್ತವೆ ಮತ್ತು ಭಾಷೆಯನ್ನೂ ಬೆಳೆಸಲು ಅವರು ಮಾಡುವ ಈ ಪ್ರಯತ್ನಗಳು ಕರ್ನಾಟಕದಲ್ಲಿರುವ ಕನ್ನಡಿಗರಿಗೂ ಪ್ರೇರಣೆಯಾಗಿ ನಿಂತಿವೆ. ಭಾಷೆಯನ್ನು ಮಾತನಾಡುವುದರಿಂದಲೇ ಅಲ್ಲ, ಅದನ್ನು ಬದುಕುವುದರಿಂದ, ಹಂಚಿಕೊಳ್ಳುವುದರಿಂದ, ಮುಂದಿನ ಪೀಳಿಗೆಗೆ ನೀಡುವುದರಿಂದ ಮಾತ್ರ ಅದು ಜೀವಂತವಾಗಿರುತ್ತದೆ. ಹೊರನಾಡ ಮತ್ತು ಅನಿವಾಸಿ ಕನ್ನಡಿಗರ ಎಲ್ಲ ಪ್ರಯತ್ನಗಳೂ ಭಾಷೆಯನ್ನೂ ಬಲಗೊಳಿಸುವಲ್ಲಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ. 


ಲೇಖನ: ಸುಧಾ ಶಶಿಕಾಂತ್, ಮಸ್ಕತ್

Published in Udayavani Desiswara


ಬುಧವಾರ, ನವೆಂಬರ್ 5, 2025

ಭಾಗ 1- ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಸ್ತುತತೆ


"ಬಾರಿಸು ಕನ್ನಡ ಡಿಂಡಿಮವ"
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು"
"ಹಚ್ಛೆವು ಕನ್ನಡದ ದೀಪ"
"ಜಯ ಭಾರತ ಜನನಿಯ ತನುಜಾತೆ"

ಇವೆಲ್ಲ ನವೆಂಬರ್ ಹತ್ತಿರ ಬರುತ್ತಿದ್ದಂತೆ ಹೆಚ್ಚು ಅನ್ನಿಸುವಷ್ಟು ನಮ್ಮ ಕಿವಿಗಳ, ಕಣ್ಣುಗಳ ಮೇಲೆ  ಅನಾಯಾಸವಾಗಿ ಬೀಳುವ ಸಾಲುಗಳು.  ಮಸ್ಕತ್ತಿನಿಂದ ನಿನ್ನೆ ನನ್ನೂರಿಗೆ ಬರುತ್ತಿದ್ದಂತೆ ನಮ್ಮ ಮನೆಯ ಎಲ್ಲ ಹೊಸ ನಿಯತಕಾಲಿಕಗಳು ಕನ್ನಡಮ್ಮನ ಚಿತ್ರಗಳಿಂದ, ಕರ್ನಾಟಕದ ಬಾವುಟದ ಚಿತ್ರಗಳಿಂದ ನನ್ನನ್ನು ಸ್ವಾಗತಿಸಿದವು. ಇವತ್ತು ಬೆಳಗ್ಗೆಯಿಂದ ಎಲ್ಲ ಪತ್ರಿಕೆಗಳು, ಫೋನಿನಲ್ಲಿನ ವಾಟ್ಸಾಪ್ ಗುಂಪುಗಳು ರಾಜ್ಯೋತ್ಸವದ ಶುಭ ಸಂದೇಶಗಳಿಂದ ತುಂಬಿ ಹೋಗಿವೆ.  ಊರಲ್ಲಿ ನಡೆಯುವ ಕನ್ನಡ ಹಬ್ಬಗಳ ಆಮಂತ್ರಣ ಪತ್ರಿಕೆಗಳು ನಮ್ಮಮ್ಮನ ಟೇಬಲ್ ಮೇಲೆ ಅಟ್ಟಿಯಾಗಿ ಕುಳಿತಿದ್ದವು. ಇವೆಲ್ಲ ರಾಜ್ಯೋತ್ಸವ ದ ಸಮಯದಲ್ಲಿ ಊರಿಗೆ ಬಂದ ನನ್ನ ಸಂಭ್ರಮವನ್ನು ಹೆಚ್ಚಿಸಿದವು.

ನಮ್ಮ ಮಾತೃಭಾಷೆಯ, ಭವ್ಯ ಸಂಸ್ಕೃತಿಯ  ಎರಡು ಸಾವಿರಕ್ಕೂ ಮಿಕ್ಕಿದ ಇತಿಹಾಸ ನನ್ನ ಕಣ್ಣ ಮುಂದೆ ಒಮ್ಮೆ ಬಂದು ಹೋಯಿತು. ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ- ಮುಂತಾದ ರಾಜ ಮನೆತನಗಳ ಸಾಂಸ್ಕೃತಿಕ ಕೊಡುಗೆಗಳು, ಕರ್ನಾಟಕ ಸಾಮ್ರಾಜ್ಯವನ್ನು ಸ್ಥಾಪಿಸಲು ವಿದ್ಯಾರಣ್ಯರು ಮಾಡಿದ ತಪಸ್ಸು, ಮೈಸೂರು ಸಾಮ್ರಾಜ್ಯದ ಒಡೆಯರಿಂದ ಶ್ರೀಮಂತಗೊಂಡ ನಮ್ಮ ಭಾಷೆ ಸಂಸ್ಕೃತಿ ಅದಕ್ಕೆ ಕಾರಣರಾದ ಅರಸು ಮನೆತನ, ನಂತರ ಬಂದ ಕರ್ನಾಟಕ ಏಕೀಕರಣ ಚಳವಳಿ, ಈ ಕಾರಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಆಲೂರು ವೆಂಕಟರಾಯರು, ಬಿ ಎಂ ಶ್ರೀ ಮುಂತಾದ ಮಹನೀಯರು; ಕ್ರಿ.ಶ. ಒಂಭತ್ತನೇಯ ಶತಮಾನದ ಕವಿರಾಜಮಾರ್ಗದಿಂದ ಈ ಶತಮಾನದಲ್ಲಿ ಕನ್ನಡ ಭಾಷೆಯನ್ನು ತಮ್ಮ ಸಾಹಿತ್ಯದಿಂದ ಶ್ರೀಮಂತಗೊಳಿಸಿದ  ಡಿವಿಜಿ, ಕುವೆಂಪು, ಶಿವರಾಮ ಕಾರಂತರು, ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್  ಮುಂತಾದ ಲೇಖಕರು ಇವರೆಲ್ಲ ನನ್ನ ಮನಸ್ಸಿನಲ್ಲಿ ಹಾದು ಹೋದರು. ಮನಸ್ಸು ಒಮ್ಮೆ ಹೆಮ್ಮೆಯಿಂದ ಬೀಗಿತು.

ನಂತರ ಈಗಿನ ಮಾಹಿತಿ ತಂತ್ರಜ್ಞಾನದ ಕೃತಕ ಬುದ್ದಿ ಮತ್ತೆಯ ಇಂಸ್ಟಾ ರೀಲುಗಳ ಯುಗದಲ್ಲಿ ನಮ್ಮ ಈ ಭಾಷೆ ಸಂಸ್ಕೃತಿಯು ಹೇಗೆ ಪ್ರಸ್ತುತವಾಗಿದೆ. ನಮ್ಮ ಮುಂದಿನ ಪೀಳಿಗೆಯೂ ನಮ್ಮಂತೆ ಈ ಸಂಸ್ಕೃತಿಯ ಬಗೆಗೆ ಅಭಿಮಾನವನ್ನು ಹೊಂದಿರುತ್ತಾರೆಯೇ ಎಂಬ ಪ್ರಶ್ನೆ ನನ್ನ ಮನಸ್ಸನ್ನು ಕಾಡತೊಡಗಿತು. ಡಿವಿಜಿಯವರು ಹೇಳುವಂತೆ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು. ನಮ್ಮ ಹಳೆಯ ಭದ್ರವಾದ ಬೇರನ್ನು ಬುನಾದಿ ಮಾಡಿಕೊಂಡು ನಮ್ಮ ಮುಂದಿನ ತಲೆಮಾರು ಚಿಗುರೊಡೆಯುತ್ತೋದೆಯೇ ಎಂಬ ಪ್ರಶ್ನೆ ಈಗ ನಿಜವಾಗಿ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಎನ್ನಿಸಿತು.

ಹುಟ್ಟುತ್ತಲೇ ಮೊಬೈಲ್ ಹಿಡಿದು ಬೆಳೆಯುವ ಮಕ್ಕಳು,  ಮಾತ್ರ ಭಾಷೆ ಸರಿಯಾಗಿ ಮಾತನಾಡಲು ಬರುವ ಮೊದಲೇ ಅವರ ಮೇಲೆ ಇಂಗ್ಲಿಷ್ ಹೇರುತ್ತಿರುವ ಪೋಷಕರು, ಕಂಗ್ಲೀಷ್ ಮಾತನಾಡದಿರೆ ಮಾತ್ರ ತಾವು ಸುಸಂಕ್ರತರು ಎಂದು ತಿಳಿದಿರುವ  ಜನರ ನಡುವೆ ಶುದ್ಧವಾದ ಭಾಷೆಯನ್ನೇ ಕೇಳದೆ ಬೆಳೆಯುತ್ತಿರುವ ಮಕ್ಕಳು ತಮ್ಮ ಸಂಸ್ಕೃತಿಯ ಬಗೆಗೆ ಹೇಗೆ ಹೆಮ್ಮೆಯನ್ನು ಹೊಂದಲು ಸಾಧ್ಯ ಎನ್ನಿಸುತ್ತದೆ. ಇಂಗ್ಲೀಷ್ ಭಾಷೆಯ ಮೂಲಕವೇ ಭವಿಷ್ಯ ಸಾಧ್ಯ ಎಂಬ ಗಾಢವಾದ ಭಾವನೆ ಜನರಲ್ಲಿ ಬೇರೂರಿರುವುದು, ಶಿಕ್ಷಣ ಕ್ಷೇತ್ರದ ವ್ಯಾಪಾರಿಕರಣ ಈಗಿನ ಶಿಕ್ಷಣಕ್ರಮ  - ಇವೆಲ್ಲ ಮಕ್ಕಳಲ್ಲಿ ಮಾತೃಭಾಷೆಯ ಅಭಿಮಾನವನ್ನು ತರಿಸುತ್ತಿಲ್ಲ ಎನ್ನಿಸುತ್ತಿದೆ. ನಮ್ಮ ಇಷ್ಟು ಸಮೃದ್ಧ ಸಹಸ್ರಾರು ವರ್ಷಗಳ ಸಂಸ್ಕೃತಿ ಇಂಗ್ಲಿಷಿನ ಸಹಾಯವಿಲ್ಲದೆಯೇ ಬೆಳದಿದೆ ಎಂದು ಅರ್ಥೈಸಿಕೊಳ್ಳಲು ನಾವು ವಿಫಲರಾಗಿರುವುದೇ ಒಂದು ವಿಪರ್ಯಾಸ

ಭಾಷೆಯ ಶಕ್ತಿ ಇರುವುದು ಅದರ ಸಮರ್ಥ ಬಳಕೆಯಲ್ಲಿ. ಭಾಷೆ ನಿಂತ ನಿರಲ್ಲ. ಪರಿವರ್ತನೆ ಜೀವನದ ಸಹಜ ನಿಯಮವೆಂದು ನಮಗೆಲ್ಲರಿಗೂ ಗೊತ್ತೇ ಇದೆ. ಈ ಪರಿವರ್ತನೆಯಿಂದ ಭಾಷೆಗಳೂ ಹೊರತಾಗಿಲ್ಲವೆಂದು ಪ್ರಪಂಚದ ಯಾವುದೇ ಭಾಷೆಯ ಇತಿಹಾಸವನ್ನು ನೋಡಿ ನಾವು ತಿಳಿದುಕೊಳ್ಳಬಹುದು. ಪರಭಾಷೆಯ ಸಂಪರ್ಕ ನಮ್ಮ ಭಾಷೆಗೆನೂ ಹೊಸತಲ್ಲ. ಸಂಸ್ಕ್ರತ, ಅರೇಬಿಕ್, ಪರ್ಷಿಯನ್ ಭಾಷೆಗಳ ನಂಟು ಕನ್ನಡಕ್ಕೆ ಶತಮಾನಗಳಿಂದ ಇದೆ. ಅವುಗಳ ಸಂಪರ್ಕದಿಂದ  ಪದಗಳ ವಿನಿಮಯದಿಂದ ಎರಡೂ ಭಾಷೆಗಳು ಬೆಳೆದಿವೆ. ಈಗ ನಡೆಯುತ್ತಿರುವುದು ಆಂಗ್ಲ ಭಾಷೆಯ ಅತಿಯಾದ ದಾಸ್ಯ. ಆ ಮನಃಸ್ಥಿತಿಯನ್ನು ಬಿಟ್ಟು ಅಗತ್ಯವಿದ್ದಷ್ಟು ಮಾತ್ರ ಪರ ಭಾಷೆಯನ್ನು ಬಳಸುವುದನ್ನು ನಾವೆಲ್ಲ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ.  ಪರಭಾಷಾ ವ್ಯಾಮೋಹವನ್ನು ಬಿಟ್ಟು ನಮ್ಮ ಭಾಷೆ, ಸಂಸ್ಕೃತಿಯ ಬಗೆಗೆ ನಾವು ಹೆಮ್ಮೆಯನ್ನು ತೆಳೆದರೆ ಮಾತ್ರ ನಮ್ಮ ಮುಂದಿನ ಪೀಳಿಗೆ ಈ ಭಾಷೆಯನ್ನು ಕಲಿಯುವುದು, ಇದನ್ನು ಪ್ರೀತಿಸುವುದು ಸಾಧ್ಯ. ಹಾಗಾಗಿ ನಾವು ಮನೆಯಲ್ಲಿ ಕನ್ನಡದಲ್ಲಿ ಮಾತನಾಡಿ, ಕನ್ನಡದ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಬೇಕು. ಈ ರಾಜ್ಯೋತ್ಸವದಂದು ಪ್ರಪಂಚದ ಎಲ್ಲ ಭಾಗದಲ್ಲಿರುವ ಕನ್ನಡಿಗರು ಈ ಬಗೆಗೆ ದೃಢ ಸಂಕಲ್ಪ ಮಾಡಬೇಕಾಗಿದೆ. ಕೇವಲ ಈ ಒಂದು ದಿನದ ಆಚರಣೆಗೆ ಮಾತ್ರ ರಾಜ್ಯೋತ್ಸವವನ್ನು ಸೀಮಿತಗೊಳಿಸದೇ ನಮ್ಮ ಮನೆ ಮನಸ್ಸನ್ನು ಕನ್ನಡಮಯಗೊಳಿಸಿ ನಮ್ಮ ಮಕ್ಕಳ ಮನಸ್ಸಿನಲ್ಲಿ ಸಹಜವಾಗಿ ಈ ಭಾಷೆಯ ಬಗೆಗೆ ಪ್ರೀತಿ, ಹೆಮ್ಮೆ ಮೂಡಿಸುವತ್ತ ಗಮನಹರಿಸಿಸೋಣ

ಲೇಖನ: ಸುಧಾ ಶಶಿಕಾಂತ್, ಮಸ್ಕತ್



Published in Desiswara on 8th November


ಶನಿವಾರ, ಡಿಸೆಂಬರ್ 28, 2024

ಹೊಸ ವರುಷ ಹೊಸ ಹರುಷ

ಮನುಷ್ಯ ನಿರಂತರ ಹೊಸತನ್ನು ನಿರೀಕ್ಷಿಸುವ, ಬಯಸುವ ಜೀವಿ. ಏಕತಾನತೆ ಅವನಿಗೆ ಬೇಸರ ತರುತ್ತದೆ. ಪ್ರತಿನಿತ್ಯ ಏನಾದರೊಂದು ಹೊಸತು ಎಲ್ಲರಿಗೂ ಬೇಕು. ಹೊಸದಕ್ಕೆ ತುಡಿಯುವ ಮನುಷ್ಯನ ಈ ಬುದ್ದಿಯೇ ನಮ್ಮ ಎಲ್ಲ ಹಬ್ಬಗಳಿಗೆ, ಆಚರಣೆಗಳಿಗೆ, ಆವಿಷ್ಕಾರಗಳಿಗೆ ಕಾರಣ. ಪ್ರಪಂಚದ ಎಲ್ಲ ಮಾನವ ಸಂಸ್ಕೃತಿಗಳಲ್ಲಿ ಕಂಡು ಬರುವ ಹಬ್ಬಗಳು, ಆಚರಣೆಗಳು ನನ್ನ ಈ ವಾದವನ್ನು ಪುಷ್ಟಿಗೊಳಿಸುತ್ತದೆ. ಹೊಸತು ಏನೇ ಆಗಿದ್ದರೂ ಅದು ಕುತೂಹಲ, ನಿರೀಕ್ಷೆಯನ್ನು ಹುಟ್ಟಿಸುತ್ತದೆ. ಒಂದು ಮಗುವಿಗೆ ಹೊಸ ಆಟಿಕೆಯೊಂದನ್ನು ತಂದು ಕೊಟ್ಟರೆ ಅದು ಮಗುವಿನ ಮನಸ್ಸಿನಲ್ಲಿ ಎಷ್ಟೊಂದು ಸಂತಸದ ಭಾವನೆಗಳನ್ನು ಅರಳಿಸುತ್ತದೆ!!

         ಅಂತೆಯೇ ಹೊಸ ವರ್ಷ. ಹೊಸ ನೀರೀಕ್ಷೆ, ಹುರುಪು, ಉತ್ಸಾಹ, ಹುಮ್ಮಸ್ಸುಗಳನ್ನು ಹೊತ್ತು ತರುವ ಸಂವತ್ಸರವನ್ನು ಎಲ್ಲರೂ ಎದಿರು ನೋಡಿತ್ತಿರುತ್ತಾರೆ. ಕಳೆದ ಕಾಲದಲ್ಲಾದ ಕಷ್ಟಗಳು ಮುಂದಿನ ಕಾಲದಲ್ಲಿ ಬಾರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಕಾಲ ಚಕ್ರದ ಉರುಳನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ಅದು ತಿರುಗುತ್ತಲೇ ಇರಬೇಕು. ತಿರುಗುವ ಕಾಲದ ನಡುವಿನ ರಸ ನಿಮಿಷಗಳೇ ಜೀವನ. ಆದ್ದರಿಂದಲೇ ಒಂದು ಕಾಲಘಟ್ಟ ಮುಗಿದು ಇನ್ನೊಂದು ಆರಂಭವಾಗುವ ಹೊತ್ತು ಮನುಷ್ಯನಿಗೆ ಅಪ್ಯಾಯಮಾನ. ಭಾರತೀಯ ಪಂಚಾಂಗದಲ್ಲಿ ಹೊಸ ಸಂವತ್ಸರದ ಆಗಮನವನ್ನು ಯುಗಾದಿ ಎಂದು ಸಂಭ್ರಮಿಸಿತ್ತೇವೆ. ಚೀನಾದಲ್ಲಿ ಅವರದ್ದೇ ಕ್ಯಾಲೆಂಡರ್ ನ ಹೊಸವರ್ಷ ವನ್ನು ಆಚರಿಸುತ್ತಾರೆ. ಮೊಹರಂ ಮುಸಲ್ಮಾನರಿಗೆ ಹೊಸವರ್ಷವನ್ನು ತರುವ ತಿಂಗಳು. ಹೀಗೆ ಪ್ರಪಂಚದ ಎಲ್ಲ ಮೂಲೆಗಳಲ್ಲೂ ಹೊಸ ಕಾಲಘಟ್ಟವನ್ನು ಸಂಭ್ರಮದಿಂದ ಸ್ವಾಗತಿಸುವ ಪದ್ದತಿ ಅನಾದಿಕಾಲದಿಂದಲೂ ಬಂದಿದೆ. ಕಾಲಘಟ್ಟದ ಬಗೆಗೆ ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಈಗ ನಾವೆಲ್ಲ ಗ್ರೇಗೊರಿಯನ್ ಕ್ಯಾಲೆಂಡರಿನ 2024ನೆಯ ಇಸವಿಯನ್ನು ಮುಗಿಸಿ 2025 ಎಂಬ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ಆಧುನಿಕ ಯುಗದಲ್ಲಿ ಇಡೀ ಪ್ರಪಂಚವು ವ್ಯವಹಾರಕ್ಕಾಗಿ ಒಪ್ಪಿಕೊಂಡಿರುವ ಈ ಕ್ಯಾಲೆಂಡರ್ ಮತ್ತು ಅದರ ಆಚರಣೆಗಳು ಎಲ್ಲ ದೇಶ, ಸಂಸ್ಕೃತಿಗಳಿಗೂ ಮುಖ್ಯವೆನಿಸುತ್ತದೆ. ಹಾಗಾಗಿ ದೇಶ, ಧರ್ಮಗಳ ಭೇದವಿಲ್ಲದೇ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಈ ಹೊಸವರ್ಷವನ್ನು ವೈಭವೋಪೇತವಾಗಿ ಆಚರಿಸಲಾಗುತ್ತದೆ.

         ಪೂರ್ವದ ಜಪಾನಿನಿಂದ ಹಿಡಿದು ಪಶ್ಚಿಮದ ಅಮೆರಿಕಾದ ಪಶ್ಚಿಮ ತೀರದವರೆಗೆ ನಡೆಯುವ ಹೊಸ ವರ್ಷದ ಸಂಭ್ರಮ ಗಳನ್ನು ನಾವು ಮನೆಯಲ್ಲಿಯೇ ಕುಳಿತು ನೋಡಬಹುದು. ನ್ಯೂಯಾರ್ಕಿನ ಟೈಮ್ ಚೌಕ, ಅಸ್ಟ್ರೇಲಿಯಾದ ಸಿಡ್ನಿ, ದುಬೈನ ಬುರ್ಜ್ ಕಾಲೀಫಾ- ಇಂತಹ ಕಡೆಗಳಲ್ಲಿ ಹೊಸವರ್ಷದ ಆರಂಭದ ಕ್ಷಣಗಣನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿ ಹೊಸವರ್ಷವನ್ನು ಸ್ವಾಗತಿಸುವ ಪದ್ದತಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿದೆ. ಇದನ್ನು ನೋಡಲು ಎಲ್ಲ ಕಡೆಗಳಿಂದಲೂ ಜನ ಹೋಗುವುದರಿಂದ ಆ ಊರುಗಳೇ ವರ್ಷದ ಕೊನೆಯ ದಿನಗಳಲ್ಲಿ ಜನಗಳಿಂದ ತುಂಬಿರುತ್ತದೆ. ಈ ಎಲ್ಲ ಊರುಗಳಲ್ಲಿ ಡಿಸೆಂಬರ್ 31ರಂದು ವಾಹನ ಹಿಡಿದು ಹೊರಗೆ ಹೋಗ ಲಾರದಷ್ಟು ವಾಹನ ದಟ್ಟಣೆ ಇರುತ್ತದೆ. ಹೊಟೇಲ್, ಪ್ರವಾಸ ಮುಂತಾದ ಉದ್ದಿಮೆಗಳಿಗೆ ಇದು ಸುಗ್ಗಿಯ ಕಾಲ. ಪತ್ರಿಕೆಗಳಲ್ಲಿ ಎಲ್ಲಿ ನೋಡಿದರೂ ರಿಯಾಯಿತಿ ಮಾರಾಟದ ಜಾಹೀರಾತುಗಳೇ! ಈಗಿನ ಸಾಮಾಜಿಕ ಜಾಲತಾಣದ ಸಮಯದಲ್ಲಂತೂ ಎಲ್ಲರಿಗೂ ತಮ್ಮ ಸಂಭ್ರಮ ವಿಭಿನ್ನವಾಗಿರಬೇಕು ಎಂಬ ಒತ್ತಡ ಬೇರೆ. ತಮ್ಮ ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಫ್, ಇನ್ಸ್ಟಾ , ಫೇಸ್ಬುಕ್ ಗಳಲ್ಲಿ ಫೋಟೋ ಹಾಕಲೆಂದಾದರೂ ಒಂದು ಮೋಜುಕೂಟವನ್ನು ಮಾಡುತ್ತಾರೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಈ ಹೊಸವರ್ಷದ ಆಚರಣೆಯ ತುಡಿತ ಜಾಸ್ತಿಯಾಗಿ ನಗರಗಳಲ್ಲಿ ಇದು ಪೊಲೀಸರಿಗೊಂದು ತಲೆನೋವಾಗಿಯೂ ಪರಿಣಮಿಸುತ್ತದೆ.

    ಬರಿಯ ಮೋಜುಕೂಟಗಳಲ್ಲದೇ ಈ ಸಂಧರ್ಭವು ಎಲ್ಲರಿಗೂ ಆತ್ಮಾವಲೋಕನಕ್ಕೂ ಒಂದು ಅವಕಾಶ, ಕಳೆದ ವರ್ಷದಲ್ಲಾದ ತಪ್ಪುಗಳನ್ನು ತಿದ್ದಿಕೊಳ್ಳಲು, ಹೊಸ ಗುರಿಗಳನ್ನು ಮುಂದಿನ ವರ್ಷದಲ್ಲಿ ರೂಪಿಸಿಕೊಂಡು ಅವುಗಳನ್ನು ಸಾಧಿಸಲು ಶ್ರಮಿಸಲು ಒಂದು ಅವಕಾಶ. ನನಗಂತೂ ಪ್ರತೀ ವರ್ಷದ ಅಂತ್ಯದ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬರುವ ಈ ವರ್ಷದ ಸಾಧನೆ, ಸಾಧಕರು, ಪ್ರಮುಖ ಘಟನೆಗಳನ್ನು ಓದುವುದು, ಕೇಳುವುದು ತಿಳಿದುಕೊಳ್ಳುವುದು ಒಂದು ಅತ್ಯಂತ ಸಂತಸದ ಚಟುವಟಿಕೆ. ಈಗಿನ ಕೃತಕ ಬುದ್ಧಿಮತ್ತೆಯ, ವೇಗದ ಯುಗದಲ್ಲಿ ಒಂದು ಕಡೆ ಕುಳಿತು ಕಳೆದ ಕಾಲಮಾನದ ಬಗೆಗೆ ಚಿಂತಿಸಲು, ವೇಗಕ್ಕೊಂದು ಕಡಿವಾಣ ಹಾಕಿ ಶಾಂತವಾಗಿ ಯೋಚಿಸಲು ಇದೊಂದು ಸಂಧರ್ಭ ಎನ್ನುವುದು ನನ್ನ ಅಭಿಮತ. ಅವರವರ ಭಾವಕ್ಕೆ ತಕ್ಕಂತೆ ಹೊಸವರ್ಷವನ್ನು ಎಲ್ಲರೂ ಬರಮಾಡಿಕೊಳ್ಳಬಹುದು. 

     "ವರುಷ ವರುಷ ಕಳೆದರೂ ಹೊಸವರುಷ ಮರಳಿ ಬರುತಿದೆ
 ಹೊಸ ವರುಷಕೆ ಹೊಸ ಹರುಷವ ಮರಳಿ ಮರಳಿ ತರುತ್ತಿದೆ" - ಎಂದು ಬೇಂದ್ರೆಯವರ ಕವನವನ್ನು ಸ್ವಲ್ಪ ಬದಲಿಸಿ ಹೇಳುತ್ತಾ ಎಲ್ಲರಿಗೂ 2025 ಶುಭವನ್ನು ತರಲಿ ಎಂದು ಹಾರೈಸುತ್ತೇನೆ.


 ಲೇಖನ: ಸುಧಾ ಶಶಿಕಾಂತ್, ಮಸ್ಕತ್

ಉದಯವಾಣಿ ದೇಸೀಸ್ವರದಲ್ಲಿ ೨೭-೧೨-೨೦೨೪ ರಂದು  ಪ್ರಕಟವಾಗಿತ್ತು 


ಸೋಮವಾರ, ಸೆಪ್ಟೆಂಬರ್ 9, 2024

"ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರ...." ಸಂಸ್ಕ್ರತ ಶ್ಲೋಕ

"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" - ಎನ್ನುವ ದಾಸವಾಣಿ

"ಮನಶ್ಚೇನ್ನ ಲಗ್ನಮ್ ಗುರೊರಂಗ್ರಿ ಪದ್ಮೇ ತತಃ ಕಿಂ...." ಎನ್ನುವ ಶಂಕರಾಚಾರ್ಯರ ಗುರುವಷ್ಟಕ

ಮೇಲಿನ ಎಲ್ಲ ಮುಕ್ತಕಗಳು ನಮಗರಿವಿಲ್ಲದೆಯೇ ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇವೆಲ್ಲ ಒಬ್ಬ ಮನುಷ್ಯನ ಜೀವನದಲ್ಲಿ ಗುರುವಿಗಿರುವ ಮಹತ್ವದ ಸ್ಥಾನವನ್ನು; ನಮ್ಮ ಭಾರತೀಯ ಸಂಸ್ಕೃತಿಯು ಗುರುವಿಗೆ ಕೊಟ್ಟಿರುವ ವಿಶೇಷ ಸ್ಥಾನವನ್ನು ತೋರಿಸುತ್ತದೆ.

ಚಾಣಕ್ಯ -ಚಂದ್ರಗುಪ್ತ; ಗುರು ರಾಮದಾಸ್ -ಶಿವಾಜಿ; ಹರಿಹರ,ಬುಕ್ಕ-ವಿದ್ಯಾರಣ್ಯರು- ಇವರೆಲ್ಲ. ಭಾರತದ ಇತಿಹಾಸ ಪ್ರಸಿದ್ಧ ಗುರುಶಿಷ್ಯರ ಜೋಡಿಗಳು. ಗುರುಗಳ ಮಾರ್ಗದರ್ಶನ ದಿಂದ ಶಿಷ್ಯರು ಏರಬಹುದಾದ ಎತ್ತರವನ್ನು ಸಾಧಿಸಿ ತೋರಿಸಿದವರು. ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು" ಎನ್ನುವ ಪ್ರಸಿದ್ಧ ಹೇಳಿಕೆಯನ್ನು ಸತ್ಯವಾಗಿಸಿದವರು.

ಮಣ್ಣಿನ ಮುದ್ದೆಯಂತಿರುವ ಮಗು ಈ ಜೀವನದಲ್ಲಿ ಬೆಳೆಯುತ್ತಾ ಮನುಷ್ಯ ಎನಿಸಿಕೊಳ್ಳುವ ಪಯಣದಲ್ಲಿ ಅವನು ಏನಾಗುತ್ತಾನೆ ಎನ್ನುವುದು ಅವನು ಬೆಳೆಯುವ ವಾತಾವರಣ, ಅವನ ಮೇಲೆ ಘಾಡವಾಗಿ ಪ್ರಭಾವ ಬೀರುವ ಜನಗಳಿಂದ ನಿರ್ಧಾರವಾಗುತ್ತದೆ. ಒಳ್ಳೆಯ ಗುರು  ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹುಮುಖ್ಯ ನಾಗುತ್ತಾನೆ. ಹಾಗಾಗಿ ಶಿಕ್ಷಕನ ವೃತ್ತಿಯು ಪ್ರಪಂಚದಲ್ಲಿ ಅತ್ಯಂತ ಪವಿತ್ರವಾದ ವೃತ್ತಿ ಎನಿಸಿಕೊಳ್ಳುತ್ತದೆ. ಈ ಪವಿತ್ರ ವೃತ್ತಿಗೆ ಯಾಕೋ ನಮ್ಮ ಸಮಾಜದಲ್ಲಿ ಈಗ ಅದಕ್ಕೆ ಬೇಕಾದ ಮನ್ನಣೆ ಸಿಗುತ್ತಿಲ್ಲ ಎನಿಸುತ್ತದೆ. ಬೆಳೆಯುವ ಮಕ್ಕಳು ಏನಾಗುತ್ತೀರಿ ಎಂದು ಕೇಳಿದಾಗ ಶಿಕ್ಷಕ ಅಥವಾ ಶಿಕ್ಷಕಿ ಆಗುತ್ತೇನೆ ಎಂದರೆ ಅವರನ್ನು ನಾವು ಪ್ರೋತ್ಸಾಹಿಸಿ ಅವರು ದಿಕ್ಕಿನಲ್ಲಿ ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ.

ದಿನಬೆಳಗಾದರೆ ಅಮಾನವೀಯ ಕೃತ್ಯಗಳ ಸುದ್ದಿಗಳನ್ನು ಎಲ್ಲ ಕಡೆ ಕೇಳುತ್ತಿರುವ ಈ ದಿನಗಳಲ್ಲಿ ಸ್ವಸ್ಥ ಪ್ರಜೆಗಳನ್ನು ಬೆಳೆಸುವ ಉತ್ತಮ ಗುರುಗಳ ಅಗತ್ಯ ಬಹಳವಿದೆ.ಭಾರತದ ಮಾಜಿ ರಾಷ್ಟ್ರಪತಿ ಶ್ರೀ ಎ. ಪಿ.ಜೆ ಅಬ್ದುಲ್ ಕಲಾಂ, ಕರ್ನಾಟಕದ ಅನುಭವಿ ಶಿಕ್ಷಣತಜ್ಞ ಶ್ರೀ ಗುರುರಾಜ ಕರ್ಜಗಿ -ಇವರೆಲ್ಲ ಸಾವಿರಾರು ವಿದ್ಯಾರ್ಥಿಗಳ ಸ್ಪೂರ್ತಿಗೆ ಕಾರಣರಾದಆಧುನಿಕ ಮಹಾನ್ ಗುರುಗಳು. ಅಂತಹ ಗುರುಗಳು ಸಾವಿರ ಸಂಖ್ಯೆಯಲ್ಲಿ ಬರಬೇಕು.

ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಬಹಳ ಮಹತ್ವದ ದಿನ. ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸಪ್ಟೆಂಬರ್ ಐದನ್ನು ಭಾರತದಲ್ಲಿ ಶಿಕ್ಷಕರದಿನವನ್ನಾಗಿ ಆಚರಿಸಿದರೆ, ಪಾಶ್ಚಾತ್ಯ ದೇಶಗಳಲ್ಲಿ ಆಕ್ಟೊಬರ್ 5ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಉತ್ತಮ ಶಿಕ್ಷಕರು ಬೆಳೆಯುವಂತೆ ಮಾಡುವುದು ಈಗಿನ  ಸಮಾಜದ ಅಗತ್ಯವಾಗಿದೆ.

ಲೇಖನ: ಸುಧಾ ಶಶಿಕಾಂತ್, ಮಸ್ಕತ್